* ವೈರಸ್‌ ರೂಪಾಂತರ, ಲಸಿಕೆ ವಿತರಣೆ ವಿಳಂಬ, ಜನರ ಅಸಹಕಾರ 3ನೇ ಅಲೆಗೆ ಕಾರಣ* ಕೋವಿಡ್‌ ಮಾರ್ಗ ಸೂಚಿ ಕಠಿಣವಾಗಿ ಪಾಲಿಸಿದರೆ 3ನೇ ಅಪಾಯದ ತೀವ್ರತೆ ಇಳಿಕೆ* ಐಸಿಎಂಆರ್‌ನ ಹಿರಿಯ ವಿಜ್ಞಾನಿ ಪ್ರೊ| ಸಮೀರನ್‌ ಪಾಂಡ್ಯ ಎಚ್ಚರಿಕೆ

ನವದೆಹಲಿ(ಜು.18): ಆಗಸ್ಟ್‌ ಅಂತ್ಯದ ವೇಳೆಗೆ ದೇಶದಲ್ಲಿ ಕೊರೋನಾ 3ನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ವೇಳೆ ನಿತ್ಯ 1 ಲಕ್ಷ ಹೊಸ ಸೋಂಕಿತರು ಪತ್ತೆಯಾಗಲಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್‌)ನ ಹಿರಿಯ ವಿಜ್ಞಾನಿ ಪ್ರೊ.ಸಮೀರನ್‌ ಪಾಂಡ್ಯ ಭವಿಷ್ಯ ನುಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಖಾಸಗಿ ಸುದ್ದಿವಾಹಿನಿ ‘ಇಂಡಿಯಾ ಟುಡೇ’ ಜೊತೆ ಮಾತನಾಡಿರುವ ಪ್ರೊ.ಪಾಂಡ್ಯ ‘ಒಂದು ವೇಳೆ ಕೊರೋನಾ ಮತ್ತೆ ಹೊಸ ಹೊಸ ರೂಪಾಂತರಿಯಾಗಿ ಹೊರಹೊಮ್ಮದೇ ಇದ್ದಲ್ಲಿ, 3ನೇ ಅಲೆಯ ವೇಳೆ ಸೋಂಕಿತರ ಪ್ರಮಾಣವು ಮೊದಲ ಅಲೆಯಲ್ಲಿ ಕಾಣಿಸಿಕೊಂಡ ಪ್ರಮಾಣದಲ್ಲೇ ಇರಲಿದೆ. ಆದರೆ ಅದು ಒಂದು ವೇಳೆ ಮತ್ತಷ್ಟುಪ್ರಮಾಣದಲ್ಲಿ ರೂಪಾಂತರಗೊಂಡು, ಹರಡುವಿಕೆ ಪ್ರಮಾಣ ತೀವ್ರವಾದರೆ, ಪರಿಸ್ಥಿತಿ ಗಂಭೀರವಾಗಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.

ಲಸಿಕೆ ನೀಡಿಕೆ ತೀವ್ರತೆ ಅಗತ್ಯ:

ನಿಧಾನಗತಿಯ ಲಸಿಕೆ ವಿತರಣೆ ಮತ್ತು ಅನ್‌ಲಾಕ್‌ ಪ್ರಕ್ರಿಯೆಗಳು 3ನೇ ಅಲೆಗೆ ಕಾರಣವಾಗಬಹುದು ಎಂದು ಐಸಿಎಂಆರ್‌ ಮತ್ತು ಲಂಡನ್‌ನ ಇಂಪೀರಿಯಲ್‌ ಕಾಲೇಜ್‌ನ ಸಂಶೋಧನೆಗಳು ಈಗಾಗಲೇ ದೃಢಪಡಿಸಿವೆ. ಹೀಗಾಗಿ ಅನ್‌ಲಾಕ್‌ಗೆ ಮೊದಲು ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಳವಾಗದ ಹೊರತೂ 3ನೇ ಅಲೆ ಸಾಧ್ಯತೆ ಇದ್ದೇ ಇದೆ. ಆದರೆ 3ನೇ ಅಲೆ, 2ನೇ ಅಲೆಯಷ್ಟುಗಂಭೀರವಾಗದೇ ಇರಬಹುದು ಎಂದು ಪಾಂಡ್ಯ ಹೇಳಿದ್ದಾರೆ.

ಚಿಕಿತ್ಸೆಯೇತರ ಕ್ರಮಗಳಾದ, ಸಮೂಹದಲ್ಲಿ ಜನರ ಸೇರದೇ ಇರುವಿಕೆ, ಮಾಸ್ಕ್‌ ತೊಡುವುದು ಮತ್ತು ಸಾಮಾಜಿಕ ಅಂತರಗಳನ್ನು ಕಾಪಾಡುವ ಮೂಲಕ ಸೋಂಕು ಹರಡುವ ಪ್ರಮಾಣವನ್ನು ನಾವು ಕಡಿಮೆ ಮಾಡಬಹುದು. ಸದ್ಯ ಭಾರತದಲ್ಲಿ ಲಸಿಕೆ ನೀಡುತ್ತಿರುವ ಗತಿ ನಿಧಾನವಾಗಿದೆ. ಅದಕ್ಕೆ ಇನ್ನಷ್ಟುವೇಗ ನೀಡುವ ಮತ್ತು ಅದನ್ನು ಜಾಣತನದಿಂದ ನೀಡಬೇಕಾದ ಅಗತ್ಯವಿದೆ. ಹಲವು ರಾಜ್ಯಗಳಲ್ಲಿ ಇದೀಗ ಕಂಡುಬರುತ್ತಿರುವ ರೀಪ್ರೊಡಕ್ಟಿವ್‌ ರೇಟ್‌ (ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹಬ್ಬುವ ಪ್ರಮಾಣ) ನೋಡಿದರೆ 3ನೇ ಅಲೆ ಖಂಡಿತ ಎಂದು ಕಂಡುಬರುತ್ತಿದೆ ಎಂದು ಹೇಳಿದ್ದಾರೆ.

‘ಕೋವಿಡ್‌ ನಿರ್ಬಂಧಗಳನ್ನು ತೆರವುಗೊಳಿಸಲು, ಪರೀಕ್ಷಾ ಪಾಸಿಟಿವಿಟಿ ಪ್ರಮಾಣ ಮಾತ್ರವೇ ನಮಗೆ ಮಾನದಂಡವಾಗಬೇಕು. ಪ್ರವಾಸಿಗರು ಒಂದೆಡೆಯಿಂದ ಇನ್ನೊಂದೆಡೆಗೆ ತೆರಳುವುದು ಜನಸಾಂದ್ರತೆ ಹೆಚ್ಚಾಗಲು ಕಾರಣವಾಗುತ್ತದೆ. ಇವು ಸೋಂಕು ಪ್ರಸರಣಕ್ಕೆ ಕಾರಣವಾಗಬಲ್ಲದು. ಹೀಗಾಗಿ ಇವುಗಳ ಮೇಲೆ ಕಡಿವಾಣ ಹಾಕಬೇಕು’ ಎಂದು ಸಲಹೆ ನೀಡಿದ್ದಾರೆ.