Asianet Suvarna News Asianet Suvarna News

ತೆಲಂಗಾಣದಲ್ಲಿ ಹಾಲಿ ಸಿಎಂ ಹಾಗೂ ಕಾಂಗ್ರೆಸ್ ಸಿಎಂ ಅಭ್ಯರ್ಥಿಯನ್ನೇ ಸೋಲಿಸಿದ ಬಿಜೆಪಿಗ

ತೆಲಂಗಾಣದ ಕಾಮರೆಡ್ಡಿ ಕ್ಷೇತ್ರದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಮತ್ತು ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿ ರೇವಂತ್‌ ರೆಡ್ಡಿ ಅವರನ್ನು ಬಿಜೆಪಿ ಅಭ್ಯರ್ಥಿ ಕೆವಿಆರ್‌ ರೆಡ್ಡಿ ಸೋಲಿಸಿದ್ದಾರೆ.

Telangana Assembly Election Result BJP candidate KVR Reddy defeated congress CM candidate and CM KCR in Kamareddy constituency akb
Author
First Published Dec 4, 2023, 8:42 AM IST

ಹೈದರಾಬಾದ್‌: ತೆಲಂಗಾಣದ ಕಾಮರೆಡ್ಡಿ ಕ್ಷೇತ್ರದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಮತ್ತು ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿ ರೇವಂತ್‌ ರೆಡ್ಡಿ ಅವರನ್ನು ಬಿಜೆಪಿ ಅಭ್ಯರ್ಥಿ ಕೆವಿಆರ್‌ ರೆಡ್ಡಿ ಸೋಲಿಸಿದ್ದಾರೆ. ಮತ ಎಣಿಕೆ ಆರಂಭವಾದಾಗಿನಿಂದಲೂ ಕೆಸಿಆರ್‌ ಮತ್ತು ರೇವಂತ್‌ ರೆಡ್ಡಿ ನಡುವೆ ಹಗ್ಗಜಗ್ಗಾಟ ನಡೆಯುತ್ತಿತ್ತು. ಆದರೆ ಫಲಿತಾಂಶದ ವೇಳೆಗೆ ಮೂರನೇ ಶಕ್ತಿಯಾಗಿ ದಿಢೀರನೇ ಉದಯಿಸಿದ ಬಿಜೆಪಿ ಅಭ್ಯರ್ಥಿ ಕಾಟಿಪಲ್ಲಿ ವೆಂಕಟರಮಣ ರೆಡ್ಡಿ, 7 ಸಾವಿರ ಮತಗಳಿಂದ ಜಯಗಳಿಸಿದ್ದಾರೆ. ಹೀಗಾಗಿ ಹಾಲಿ ಮುಖ್ಯಮಂತ್ರಿ ಹಾಗೂ ಬಹುಮತ ಪಡೆದ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲಿ ಸೋಲು ಅನುಭವಿಸಿದ್ದಾರೆ. ಕಾಮರೆಡ್ಡಿ ವಿಧಾನಸಭಾ ಕ್ಷೇತ್ರವೂ ನಗರ ಹಾಗೂ ಗ್ರಾಮೀಣ ಮಿಶ್ರಿತ ಪ್ರದೇಶವನ್ನು ಒಳಗೊಂಡ ಕ್ಷೇತ್ರ ಆಗಿರುವುದರಿಂದ  ನಿಜಮಾಬಾದ್ ಜಿಲ್ಲೆಯಲ್ಲಿ ಮಹತ್ವದ ಕ್ಷೇತ್ರವಾಗಿದೆ. 

ಕೆಸಿಆರ್ ತೃತೀಯ ರಂಗ ಕಟ್ಟುವ ಆಸೆಗೆ ಮತದಾರರ ತಣ್ಣೀರು

ಹೈದರಾಬಾದ್‌: 2014ರಲ್ಲಿ ತೆಲಂಗಾಣ ರಾಜ್ಯ ರಚನೆಯಾದಾಗಿನಿಂದಲೂ ಅಧಿಕಾರದಲ್ಲಿದ್ದ ಚಂದ್ರಶೇಖರ ರಾವ್‌ ನೇತೃತ್ವದ ಪ್ರಾದೇಶಿಕ ಪಕ್ಷ ಭಾರತ ರಾಷ್ಟ್ರ ಸಮಿತಿ (ಈ ಹಿಂದಿನ ತೆಲಂಗಾಣ ರಾಷ್ಟ್ರ ಸಮಿತಿ) ಈ ಬಾರಿ ಸೋಲು ಅನುಭವಿಸಿದೆ. ಈ ಮೂಲಕ ದೇಶದಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷ ಮೂಲೆಗುಂಪಾದಂತಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಪರ್ಯಾಯವಾಗಿ ತೃತೀಯ ರಂಗ ರಚನೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಪಕ್ಷ ಕಟ್ಟಲು ಹೊರಟಿದ್ದರು. ಅವರು ಮೊದಲು ಇದ್ದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಹೆಸರನ್ನು ರಾಷ್ಟ್ರ ಮಟ್ಟದ ಕನಸಿನ ಭಾಗವಾಗಿ (BRS) ಎಂದು ಬದಲಿಸಿದ್ದರು.

ಕಾಂಗ್ರೆಸ್ ಮುಕ್ತ ಭಾರತ ಮಾಡ್ತೇವೆ ಅಂದಿದ್ರು; ಆದರೀಗ  ಬಿಜೆಪಿಯೇ ದಕ್ಷಿಣ ಭಾರತ ಮುಕ್ತವಾಗಿದೆ: ಸಚಿವ ಚಲುವರಾಯಸ್ವಾಮಿ

ಆದರೆ, ರಾಷ್ಟ್ರೀಯ ಪಕ್ಷ ಕಟ್ಟಲು ಹೊರಟ ಚಂದ್ರಶೇಖರ್‌ ರಾವ್‌ (Chandrashekar Rao) ಅವರು ತೆಲಂಗಾಣದ ಹಿತವನ್ನು ಕಡೆಗಣಿಸುತ್ತಿದ್ದಾರೆ ಎಂದು ಮತದಾರರು ಭಾವಿಸಿದ್ದು, ಬಿಆರ್‌ಎಸ್‌ನ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತದೆ. ಪ್ರಾದೇಶಿಕ ಪಕ್ಷಗಳು ರಾಜ್ಯದ ಹಿತ ಕಡೆಗಣಿಸಿ ರಾಷ್ಟ್ರ ರಾಜಕಾರಣದತ್ತ ಹೊರಳಿದರೆ ಮತದಾರರು ಕೈಬಿಡುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಚಂದ್ರಶೇಖರ್‌ ರಾವ್‌ ಹ್ಯಾಟ್ರಿಕ್‌ ಸಿಎಂ ಪಟ್ಟದ ಕನಸು ಭಗ್ನ

ಹೈದರಾಬಾದ್‌: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್‌ ಪಕ್ಷ ಸೋಲುವ ಮೂಲಕ ಚಂದ್ರಶೇಖರ್‌ ರಾವ್‌ ಅವರ ಹ್ಯಾಟ್ರಿಕ್‌ ಸಿಎಂ ಪಟ್ಟದ ಕನಸು ಭಗ್ನವಾಗಿದೆ. ಇದರೊಂದಿಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹ್ಯಾಟ್ರಿಕ್‌ ಸಿಎಂ ಆಗಿ ದಾಖಲೆ ಹೊಂದಿದ್ದ ತಮಿಳುನಾಡಿನ ಎಂ ಜಿ ರಾಮಚಂದ್ರನ್‌ ಅವರ ದಾಖಲೆ ಸರಿಗಟ್ಟುವ ಅವಕಾಶವನ್ನು ಕೆಸಿಆರ್‌ ಕಳೆದುಕೊಂಡಿದ್ದಾರೆ.

'ಈಗ ಹೇಳಿ ಪನೌತಿ ಯಾರು?..' ಕಾಂಗ್ರೆಸ್‌ ಸೋಲಿನ ಸೂಚನೆ ಬೆನ್ನಲ್ಲಿಯೇ ಪಾಕ್‌ ಕ್ರಿಕೆಟಿಗನ ಟ್ವೀಟ್‌ ವೈರಲ್‌!

2014ರಲ್ಲಿ ತೆಲಂಗಾಣ ರಾಜ್ಯ ಉದಯ ಆದಾಗಿನಿಂದ ಇಲ್ಲಿಯವರೆಗೆ ಸತತ 9 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಚಂದ್ರಶೇಖರ್‌ ರಾವ್‌ ಅಧಿಕಾರ ನಡೆಸಿದ್ದಾರೆ. ತಮಿಳುನಾಡಿನಲ್ಲಿ ಎಂ.ಜಿ. ರಾಮಚಂದ್ರನ್‌ ಅವರು 1977ರಿಂದ 1987ರವರೆಗೆ 10 ವರ್ಷಗಳ ಅವಧಿಯಲ್ಲಿ ಸತತ 3 ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಆಡಳಿತ ನಡೆಸಿದ್ದರು. ಇದರೊಂದಿಗೆ ಸತತವಾಗಿ 3 ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಕ್ಷಿಣ ಭಾರತದ ಏಕೈಕ ವ್ಯಕ್ತಿ ಎಂಬ ದಾಖಲೆ ಎಂಜಿಆರ್‌ ಅವರಲ್ಲೇ ಮತ್ತಷ್ಟು ಕಾಲ ಉಳಿಯುವಂತಾಗಿದೆ.

ಪರಾಭವದ ಬೆನ್ನಲ್ಲೇ ಕೆಸಿಆರ್‌, ಗೆಹ್ಲೋಟ್ ರಾಜೀನಾಮೆ

ಹೈದರಾಬಾದ್‌/ಜೈಪುರ: ಭಾರಿ ಸೋಲಿನ ಬೆನ್ನಲ್ಲೇ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ (Chandrashekar Rao) ಅವರು ರಾಜೀನಾಮೆ ನೀಡಿದ್ದಾರೆ. ಅತ್ತ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಸಹ ರಾಜ್ಯಪಾಲರ ಬಳಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ಉಭಯ ನಾಯಕರ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ,

ರಾಜಸ್ತಾನ ಗೆದ್ರೆ ಸಂತೋಷ ಅಂದುಕೊಂಡಿದ್ವಿ; ಆದರೆ ಮೋದಿಗಾಗಿ ಮತ್ತೆರಡು ರಾಜ್ಯ ಗಿಫ್ಟ್ ನೀಡಿದ್ದಾರೆ: ಈಶ್ವರಪ್ಪ

ಗೆದ್ದ ಏಕೈಕ ರಾಜ್ಯ ತೆಲಂಗಾಣದಲ್ಲಿ ಕಾಂಗ್ರೆಸ್‌ ಸಂಭ್ರಮಾಚರಣೆ

ಹೈದರಾಬಾದ್‌: ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದ ಬೆನ್ನಲ್ಲೇ ಕಾರ್ಯಕರ್ತರು ಕಾಂಗ್ರೆಸ್‌ ಅಧ್ಯಕ್ಷ ರೇವಂತ್‌ ರೆಡ್ಡಿ ಅವರ ನಿವಾಸದ ಮುಂದೆ ಜಮಾಯಿಸಿ ಸಂಭ್ರಮಾಚರಣೆ ನಡೆಸಿದರು. ‘ರೇವಂತ್‌ ಅಣ್ಣ ಜಿಂದಾಬಾದ್‌’ ಎಂದು ಘೋಷಣೆ ಕೂಗುತ್ತಾ, ಪಟಾಕಿ ಹಚ್ಚಿ ಸಂಭ್ರಮಿಸಿದರು. ಸಂಜೆ ವೇಳೆಗೆ ಸಂಭಾವ್ಯ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರು ಹೈದರಾಬಾದ್‌ನ (Hyderabad) ಗಾಂಧಿ ಭವನಕ್ಕೆ ಬಂದು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು. ಕಾಂಗ್ರೆಸ್‌ 3 ರಾಜ್ಯಗಳಲ್ಲಿ ಸೋತಿದ್ದು, ತೆಲಂಗಾಣದಲ್ಲಿ ಮಾತ್ರ ಗೆದ್ದಿದೆ. ಹೀಗಾಗಿ ಸಂಭ್ರಮವು ಕೇವಲ ತೆಲಂಗಾಣಕ್ಕೆ ಸೀಮಿತವಾಯಿತು. ಉಳಿದಂತೆ ದಿಲ್ಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನೀರವ ಮೌನ ಆವರಿಸಿತ್ತು.

ರೇವಂತ್‌ ಭೇಟಿ ಮಾಡಿದ ತೆಲಂಗಾಣ ಡಿಜಿಪಿ ಅಮಾನತು

ನವದೆಹಲಿ: ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದ ವೇಳೆಯೇ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಕಾಂಗ್ರೆಸ್‌ ನಾಯಕ ರೇವಂತ್‌ ರೆಡ್ಡಿ ಅವರನ್ನು ಭೇಟಿ ಮಾಡಿ ಪುಷ್ಪಗುಚ್ಛ ನೀಡಿದ ಆರೋಪದಡಿ ತೆಲಂಗಾಣ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ಅಂಜನಿ ಕುಮಾರ್ ಅವರನ್ನು ಅಮಾನತುಗೊಳಿಸಿ ಚುನಾವಣಾ ಆಯೋಗವು ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಡಿಜಿಪಿ ಅಂಜನಿ ಕುಮಾರ್‌ ಅವರು ರಾಜ್ಯ ಪೊಲೀಸ್ ನೋಡಲ್ ಅಧಿಕಾರಿ ಸಂಜಯ್ ಜೈನ್ ಮತ್ತು ನೋಡಲ್ ಅಧಿಕಾರಿ, ಮಹೇಶ್ ಭಾಗವತ್ ಅವರೊಂದಿಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಅಭ್ಯರ್ಥಿ ಅನುಮುಲಾ ರೇವಂತ್ ರೆಡ್ಡಿ (Revant Reddy) ಅವರನ್ನು ಹೈದರಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ ಇನ್ನೂ ಮತ ಎಣಿಕೆ ಪೂರ್ಣಗೊಳ್ಳುವ ಮೊದಲೇ ಭಾನುವಾರ ಭೇಟಿ ಮಾಡಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆ ಎಂದು ಆಯೋಗ ಕಿಡಿಕಾರಿದೆ. ಮತ ಎಣಿಕೆ ಹಾಗೂ ನೀತಿ ಸಂಹಿತೆ ಜಾರಿಯಲ್ಲಿರುವ ವೇಳೆ ಯಾವುದೇ ಸರ್ಕಾರಿ ಅಧಿಕಾರಿಗಳು ರಾಜಕೀಯ ನಾಯಕರನ್ನು ಭೇಟಿ ಮಾಡುವಂತಿಲ್ಲ.

 

Follow Us:
Download App:
  • android
  • ios