* ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ನ ಉಪಾಧ್ಯಕ್ಷ ಸ್ವಾಮಿ ಶಿವಮಯಾನಂದಜೀ ಮಹಾರಾಜ್ ನಿಧನ* ಶಿವಮಯಾನಂದಜೀ ಮಹಾರಾಜ್ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ* ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಜಗತ್ತಿಗೆ ಅಪಾರ ಕೊಡುಗೆ ನೀಡಿದ್ದ ಶಿವಮಯಾನಂದಜೀ ಮಹಾರಾಜ್
ಕೋಲ್ಕತ್ತಾ(ಜೂ.12): ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ನ ಉಪಾಧ್ಯಕ್ಷ ಸ್ವಾಮಿ ಶಿವಮಯಾನಂದಜೀ ಮಹಾರಾಜ್ ಶುಕ್ರವಾರ ರಾತ್ರಿ ವಿಧಿವಶರಾಗಿದ್ದಾರೆ. 86 ವರ್ಷದ ಸ್ವಾಮಿ ಶಿವಮಯಾನಂದಜೀ ಮಹಾರಾಜ್ರವರು ಕಳೆದ ಕೆಲ ವರ್ಷಗಳಿಂದ ಅಸತಮಾ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಚಿಕಿತ್ಸೆ ನಿಡಲಾಗುತ್ತಿದ್ದರೂ, ಇದಕ್ಕೆ ಸ್ಪಂದಿಸದ ಅವರು ನಿನ್ನೆ ರಾತ್ರಿ ಸುಮಾರು 9 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಶಿವಮಯಾನಂದಜೀ ಮಹಾರಾಜ್ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ರಾಮಕೃಷ್ಣ ಮಠದ ಸ್ವಾಮಿ ಶಿವಮಯಾನಂದಜಿ ಮಹಾರಾಜ್ ಅವರು ವ್ಯಾಪಕವಾಗಿ ಸಾಮಾಜಿಕ ಸಬಲೀಕರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಸಲಾಗುವ ಸಮುದಾಯ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವರು. ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಜಗತ್ತಿಗೆ ಅವರು ನೀಡಿದ ಕೊಡುಗೆಗಳು ಯಾವಾಗಲೂ ನೆನಪಿನಲ್ಲಿ ಉಳಿಯುವಂತಹದ್ದು, ಅವರ ನಿಧನದಿಂದ ಬೇಸರವಾಗಿದೆ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಕರ್ನಾಟಕ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಕೂಡಾ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಇದರ ಉಪಾಧ್ಯಕ್ಷರಾಗಿದ್ದ ಗೌರವಾನ್ವಿತ ಸ್ವಾಮಿ ಶಿವಮಯಾನಂದಜೀ ಮಹಾರಾಜ್ ನಿಧನದಿಂದ ದುಃಖಿತವಾಗಿದೆ. ಅಗಲಿದ ಆತ್ಮಕ್ಕೆ ಸದ್ಗತಿ ದೊರಕಲಿ.
ಓಂ ಶಾಂತಿ ಎಂದು ಬರೆದಿದ್ದಾರೆ.
ಇಷ್ಟೇ ಅಲ್ಲದೇ ಇನ್ನೂ ಹಲವಾರು ರಾಜಕೀಯ ಗಣ್ಯರು ಸ್ವಾಮಿ ಶಿವಮಯಾನಂದಜೀ ಮಹಾರಾಜ್ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ.
