Asianet Suvarna News Asianet Suvarna News

ಫಡ್ನವೀಸ್‌ಗೆ 'ಮಹಾ' ಪರೀಕ್ಷೆ: ನಾಳೆಯೇ ಬಹುಮತ ಸಾಬೀತುಪಡಿಸಿ, ರಹಸ್ಯ ಮತದಾನ ಬೇಡ: ಸುಪ್ರೀಂ

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು| ಸುಪ್ರೀಂ ಮೆಟ್ಟಿಲೇರಿದ ಪ್ರಕರಣ| ಫಡ್ನವೀಸ್ ಸರ್ಕಾರಕ್ಕೆ ಬಹುಮತ ಸಾಬೀತಿಗೆ ಗಡುವು|  ರಹಸ್ಯ ಮತದಾನ ಬೇಡ, ನೇರ ಪ್ರಸಾರ ಮಾಡುವಂತೆ ಆದೇಶ

Supreme Court orders Floor Test in the Maharashtra assembly to be held on November 27
Author
Bangalore, First Published Nov 26, 2019, 10:46 AM IST

"

ಮುಂಬೈ[ನ.26]: ಮಹಾರಾಷ್ಟ್ರ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಾಳೆ, ಬುಧವಾರ ಸಂಜೆ 05.00 ಗಂಟೆಯೊಳಗೆ ಬಹುಮತ ಸಾಬೀತುಪಡಿಸಬೇಕೆಂದು ಸುಪ್ರೀಂ ಆದೇಶಿಸಿದ್ದು, ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಬಹಿರಂಗವಾಗಿ ನಡೆಸಬೇಕೆಂದು ಸೂಚಿಸಿದೆ. ಈ ಮೂಲಕ ರಹಸ್ಯ ಮತದಾನಕ್ಕೆ ಬ್ರೇಕ್ ಹಾಕಿದೆ. ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದ ಈ ಆದೇಶ ನೀಡಿದೆ

ಸುಪ್ರೀಂ ಕೋರ್ಟ್ ತೀರ್ಪು: 9 ಆದೇಶ

ಆದೇಶ 1- ನಾಳೆ ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತುಪಡಿಸಬೇಕು

ಆದೇಶ 2 -ರಹಸ್ಯ ಮತದಾನ ಬೇಡ, ವಿಶ್ವಾಸಮತ ಯಾಚನೆ ನೇರಪ್ರಸಾರ ಮಾಡಬೇಕು

ಆದೇಶ 3 - ತಕ್ಷಣವೇ ಹಂಗಾಮಿ ಸ್ಪೀಕರ್ ನೇಮಕ ಮಾಡಬೇಕು

ಆದೇಶ 4- ವಿಶ್ವಾಸಮತ ಸಾಬೀತಿಗೆ ನಾಳೆ ಸಂಜೆ 5 ಗಂಟೆ ಡೆಡ್ಲೈನ್

ಆದೇಶ 5- ಬೆಳಗ್ಗೆಯಿಂದ ಶಾಸಕರ ಪ್ರಮಾಣ ವಚನ ಪ್ರಕ್ರಿಯೆ ನಡೆಯಬೇಕು

ಆದೇಶ 6- ನ್ಯಾಯಾಂಗವು, ಕಾರ್ಯಾಂಗದಲ್ಲಿ ಹಸ್ತಕ್ಷೇಪ ಮಾಡಬಾರದು

ಆದೇಶ 7- ಅಧಿಕಾರ ಮೊಟಕಾದಾಗ ಕೋರ್ಟ್ ಮಧ್ಯಪ್ರವೇಶ ಮಾಡಬೇಕಾಗುತ್ತದೆ

ಆದೇಶ 8- ಕೆಲ ವಿಶೇಷ ಸಂದರ್ಭಗಳಲ್ಲಿ ನಿಗಾ ವಹಿಸಬೇಕಾಗುತ್ತದೆ

ಆದೇಶ 9- ಮುಖ್ಯಮಂತ್ರಿಯಾದವರು ವಿಶ್ವಾಸಮತ ಯಾಚನೆ ಮಾಡಲೇಬೇಕು

ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ತಿಂಗಳು ಕಳೆದರೂ ಇನ್ನೂ ಸರ್ಕಾರ ರಚನೆಯ ಬಿಕ್ಕಟ್ಟಿನಲ್ಲೇ ಸಿಕ್ಕಿ ನಲುಗಿರುವ ಮಹಾರಾಷ್ಟ್ರ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಹತ್ವದ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಅದರಂತೆ ಈಗ ಸುಪ್ರೀಂ ತೀರ್ಪಿನಿಂದ ಮಹಾರಾಷ್ಟ್ರ ಸರ್ಕಾರ 30 ಗಂಟೆಯೊಳಗೆ ಬಹುಮತ ಸಾಬೀತುಪಡಿಸಲೇಬೇಕಾಗಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಅಜಿತ್‌ ಪವಾರ್‌ ಮೈತ್ರಿಕೂಟದ ಸರ್ಕಾರ ರಚನೆ ವಿರುದ್ಧ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ.

ಸುಪ್ರೀಂ ಕೋರ್ಟ್ನಲ್ಲಿ ಏನೇನಾಯ್ತು?

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ಬಂಡಾಯ ಶಾಸಕರಿಗೆ ಸರ್ಕಾರ ರಚನೆಗೆ ಅವಕಾಶವಿತ್ತ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಯನ್ನು ನ್ಯಾ| ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಭಾನುವಾರ ನಡೆಸಿತ್ತು.

ಮತ್ತೊಂದು ದಿನ ಫಡ್ನವೀಸ್‌ ಸರ್ಕಾರ ಸೇಫ್, ನಾಳೆ ಸುಪ್ರೀಂ ಅಂತಿಮ ತೀರ್ಪು!

ಸುಪ್ರೀಂಕೋರ್ಟ್‌, ಫಡ್ನವೀಸ್‌ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದ ಪತ್ರ ಹಾಗೂ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರು ಫಡ್ನವೀಸ್‌ ಅವರಿಗೆ ಸರ್ಕಾರ ರಚಿಸಲು ನೀಡಿದ ಆಹ್ವಾನ ಪತ್ರವನ್ನು ಸೋಮವಾರ ಬೆಳಗ್ಗೆ 10.30ಕ್ಕೆ ತನ್ನ ಮುಂದೆ ಹಾಜರುಪಡಿಸಬೇಕು ಎಂದು ಕೇಂದ್ರ ಸರ್ಕಾರದ ವಕೀಲರಿಗೆ ಸೂಚಿಸಿತ್ತು.

ಆದರೆ ‘ಮಹಾರಾಷ್ಟ್ರ ವಿಧಾನಸಭೆಯಲ್ಲಿ 24 ತಾಸಿನೊಳಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಬಹುಮತ ಸಾಬೀತುಪಡಿಸಬೇಕು’ ಎಂದು ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಮಾಡಿಕೊಂಡ ಮನವಿಯನ್ನು ತಕ್ಷಣವೇ ಪುರಸ್ಕರಿಸಲು ನಿರಾಕರಿಸಿತ್ತು.

ಫಡ್ನವೀಸ್ ಸರ್ಕಾರಕ್ಕೆ 1 ದಿನದ ಜೀವದಾನ, ತಕ್ಷಣ ಬಹುಮತ ಸಾಬೀತು ಇಲ್ಲ: ಸುಪ್ರೀಂ

ಇನ್ನು ನಿನ್ನೆ ಸೋಮವಾರ ಮತ್ತೆ ವಿಚಾರಣೆ ನಡೆಸಿದ್ದ ಸುಪ್ರೀಂ ತ್ರಿಸದಸ್ಯ ಪೀಠ ವಾದ ಪ್ರತಿವಾದವನ್ನಾಲಿಸಿ ತೀರ್ಪನ್ನು ಮಂಗಳವಾರ ಬೆಳಗ್ಗೆಗೆ ಕಾಯ್ದಿರಿಸಿತ್ತು. ಇಂದು ತೀರ್ಪು ಹೊರ ಬಿದ್ದಿದ್ದು, ಫಡ್ನವೀಸ್‌ ಸರ್ಕಾರಕ್ಕೆ ಅಗ್ನಿಪರೀಕ್ಷೆ ಎದುರಾಗಿದೆ. 30 ಗಂಟೆಯೊಳಗೆ ಫಡ್ನವೀಸ್ ವಿಶ್ವಾಸಮತ ಪಡೆಯುವಲ್ಲಿ ಯಶಸ್ವಿಯಾಗ್ತಾರಾ? ಅಥವಾ ಸರ್ಕಾರ ಬೀಳುತ್ತಾ ಕಾದು ನೋಡಬೇಕು

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು

ಗೆದ್ದೇ ಗೆಲ್ತೀವಿ: ಸೋನಿಯಾ ಭರವಸೆ

"

ಏನಿದು ವಿವಾದ?

ಮಹಾರಾಷ್ಟ್ರದಲ್ಲಿ ಕಳೆದೊಂದು ತಿಂಗಳಿನಿಂದ ಸರ್ಕಾರ ರಚಿಸಲು ಎಲ್ಲಾ ಪಕ್ಷಗಳು ಪ್ರಯತ್ನ ನಡೆಸಿದ್ದವು. ಆರಂಭದಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಮಾಡಿಕೊಳ್ಳಲಿವೆ ಎಂದು ಹೇಳಲಾಗಿದ್ದರೂ, ಉಭಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳಿಂದ ಈ ಮೈತ್ರಿ ಮುರಿದು ಬಿದ್ದಿತ್ತು. ಇದಾದ ಬಳಿಕ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಸರ್ಕಾರ ರಚನೆಗೆ ಸಜ್ಜಾಗಿದ್ದವು. ಸರಣಿ ಸಭೆಗಳನ್ನು ನಡೆಸಿದ್ದ ಮೂರೂ ಪಕ್ಷದ ನಾಯಕರು ನವೆಂಬರ್ 23ರಂದು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಲಿದ್ದವು. ಆದರೆ ಅಷ್ಟರೊಳಗೇ ಈ ಲೆಕ್ಕಾಚಾರಗಳು ಬುಡಮೇಲಾಗಿದ್ದವು.

ರಾತ್ರೋ ರಾತ್ರಿ ನಡೆದ ವಿದ್ಯಾಮಾನಗಳಿಂದ ಎನ್‌ಸಿಪಿ ನಾಯಕ ಅಜಿತ್ ಪವಾರ್ ತನ್ನ ಪಕ್ಷದ ಕೆಲ ಶಾಸಕರೊಂದಿಗೆ ಬಿಜೆಪಿಯೊಂದಿಗೆ ಕೈ ಮಿಲಾಯಿಸಿದ್ದರು. ದಿನ ಬೆಳಗಾಗುತ್ತಿದ್ದಂತೆಯೇ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದು ಫಡ್ನವೀಸ್ ಮಹಾರಾಷ್ಟ್ರದ ಸಿಎಂ ಹಾಗೂ ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ನಡೆಯಿಂದ ಬೇಸತ್ತ ಮೂರೂ ಪಕ್ಷದ ನಾಯಕರು ಸುಪ್ರೀಂ ಮೆಟ್ಟಿಲೇರಿದ್ದರು.

Follow Us:
Download App:
  • android
  • ios