ಪಾಸ್ ಸಿಗದೇ ಚೆಕ್ಪೋಸ್ಟ್ ಗಡಿಯಲ್ಲಿ ಮದುವೆ!
ಕೊರೋನ ಮಾಡುತ್ತಿರುವ ತಾಪತ್ರಯ ಒಂದೆರಡಲ್ಲ. ಮದುವೆಗೆ ರೆಡಿಯಾಗಿದ್ದ ಜೋಡಿಗೆ ಇ-ಪಾಸ್ ಸಿಗದ ಕಾರಣ ಗಡಿಯಲ್ಲೇ ಮದುವೆಯಾದ ಅಚ್ಚರಿಯ ಘಟನೆ ತಮಿಳುನಾಡು-ಕೇರಳ ಬಾರ್ಡರ್ನಲ್ಲಿ ನಡೆದಿದೆ. ಮದುವೆ ಬಳಿಕ ಕ್ವಾರಂಟೈನ್ ತಾಪತ್ರಯ ತಪ್ಪಿಸಿಕೊಳ್ಳಲು ಮದುಮಕ್ಕಳಿಬ್ಬರು ತಮ್ಮ ತಮ್ಮ ಮನೆಗೆ ವಾಪಾಸ್ ಹೋಗಿದ್ದಾರೆ. ಇನ್ನಷ್ಟು ದಿನ ನವ ಜೋಡಿಗೆ ವಿರಹ ವೇದನೆ ತಪ್ಪಿದ್ದಲ್ಲ ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಇಡುಕ್ಕಿ(ಜೂ.12): ವಿವಾಹಕ್ಕೆ ಸಿದ್ಧವಾಗಿದ್ದ ವರನನ್ನು ಇ ಪಾಸ್ ಇಲ್ಲದೇ ರಾಜ್ಯದೊಳಗೆ ಬಿಡಲು ಕೇರಳ ಪೊಲೀಸರು ನಿರಾಕರಿಸಿದ ಕಾರಣ, ವಧು-ವರರು ಕೇರಳ- ತಮಿಳುನಾಡಿನ ಗಡಿ ಭಾಗದ ರಸ್ತೆಯಲ್ಲೇ ವಿವಾಹವಾದ ಅಚ್ಚರಿಯ ಘಟನೆಯೊಂದು ಇತ್ತೀಚೆಗೆ ನಡೆದಿದೆ.
ತಮಿಳುನಾಡಿನ ಪ್ರಶಾಂತ್ ಮತ್ತು ಕೇರಳದ ಪ್ರಿಯಾಂಕಾ ನಡುವೆ ಮೇ 26ಕ್ಕೆ ಮದುವೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ವರನ ಕಡೆಯವರು ಕೇರಳದ ಕಲ್ಯಾಣಮಂಟಪದತ್ತ ಹೊರಟಿದ್ದರು. ಆದರೆ ವರನ ಮನೆಯವರಿಗೆ ಸೂಕ್ತ ಗಡಿಪ್ರವೇಶಕ್ಕೆ ಅಗತ್ಯವಾದ ಇ ಪಾಸ್ ಸಿಕ್ಕಿರಲಿಲ್ಲ. ಹೀಗಾಗಿ ದಿಬ್ಬಣವನ್ನು ಕೇರಳ ಪ್ರವೇಶ ಮಾಡಲು ಗಡಿಯಲ್ಲಿ ಪೊಲೀಸರು ಬಿಡಲಿಲ್ಲ. ವಿಷಯ ವಧುವಿನ ಮನೆಯವರಿಗೂ ತಲುಪಿತು. ಹೀಗಾಗಿ ಪೊಲೀಸರ ಮನವೊಲಿಸಲೆಂದು ವಧು,
ಪೋಷಕರು ಮತ್ತು ಕೆಲ ಸಂಬಂಧಿಕರ ಜೊತೆಗೂಡಿ ಗಡಿ ಭಾಗಕ್ಕೆ ಬಂದಳು. ಆದರೂ ಪೊಲೀಸರು ಒಪ್ಪಲಿಲ್ಲ.
ಈ ವೇಳೆ ಮುಹೂರ್ತ ಮೀರುವ ಸಮಯ ಬರುತ್ತಿದೆ. ಸಮಯ ಹಾಳುಮಾಡುವ ಬದಲು ಇಲ್ಲೇ ಮದುವೆ ಮಾಡಿಕೊಳ್ಳಿ ಎಂದು ಪೊಲೀಸರು ಸೂಚಿಸಿದರು. ಬೇರೆ ದಾರಿ ಕಾಣದ ಎರಡೂ ಕಡೆಯವರು ಅಲ್ಲೇ ಮದುವೆಗೆ ಒಪ್ಪಿದರು. ಕೊನೆಗೆ ಪೊಲೀಸರೇ ಸ್ಯಾನಿಟೈಸ್ ಮಾಡಿದ ಹಾರ ನೀಡಿ, ಪಕ್ಕದ ಅಂಗಡಿಯೊಂದರ ಮುಂದೆ ವಧು-ವರರಿಗೆ ಪರಸ್ಪರ ಹಾರ ಬದಲಾಯಿಸಿ, ಮಂಗಳಸೂತ್ರ ಕಟ್ಟಿಸಿ, ಶುಭ ಹಾರೈಸಿ ಕಳುಹಿಸಿಕೊಟ್ಟಿದ್ದಾರೆ.
‘ಮೀಸಲಾತಿ’ ಮೂಲಭೂತ ಹಕ್ಕಲ್ಲ'; ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ
ಇಷ್ಟೆಲ್ಲಾ ಆದ ಮೇಲೆ ವಧು ತನ್ನ ಮನೆಗೆ, ವರ ತನ್ನ ಮನೆಗೆ ತೆರಳಿದ್ದಾನೆ. ಸದ್ಯ ಉಭಯ ರಾಜ್ಯಗಳ ಗಡಿ ದಾಟಿದರೆ 15 ದಿನ ಕ್ವಾರಂಟೈನ್ಗೆ ಒಳಬೇಕಾಗಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲ ದಿನ ವಧು-ವರನಿಗೆ ವಿರಹವೇದನೆಯೇ ಗತಿ.