ಕೋಲ್ಕತಾ ಬಿಜೆಪಿ ರೋಡ್ಶೋ ಮೇಲೆ ಕಲ್ಲು ತೂರಾಟ, ಭುಗಿಲೆದ್ದ ಹಿಂಸಾಚಾರ!
ಪಶ್ಚಿಮ ಬಂಗಳಾದಲ್ಲಿ ಆಯೋಜಿಸಿದ ಬಿಜೆಪಿ ರೋಡ್ ಶೋದಲ್ಲಿ ಮತ್ತೆ ಹಿಂಸಾಚಾರ ನಡೆದಿದೆ. ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲು ಹಾಕಿದ ಬೆನ್ನಲ್ಲೇ ಇತ್ತ ಬಿಜೆಪಿ ಆಯೋಜಿಸಿದ ರೋಡ್ ಶೋದಲ್ಲಿ ಗಲಭೆ ನಡೆದಿದೆ. ಘಟನೆ ವಿವರ ಇಲ್ಲಿದೆ.
ಕೋಲ್ಕತಾ(ಜ.18); ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವೈರತ್ವ ಹೆಚ್ಚಾಗುತ್ತಿದೆ. ಬಿಜೆಪಿ ರ್ಯಾಲಿ, ರೋಡ್ಶೋಗೆ ಅಡ್ಡಿ ಪಡಿಸಿ, ಹಿಂಸಾಚಾರ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್, ಇದೀಗ ಮತ್ತೆ ಬಿಜೆಪಿ ರೋಡ್ ಶೋಗೆ ಅಡ್ಡಿಪಡಿಸಿದೆ. ಇದೀಗ ಕೋಲ್ಕತಾದಲ್ಲಿ ಸಂಜೆ ಬಿಜೆಪಿ ಆಯೋಜಿಸಿದ ರೋಡ್ ಶೋದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮೇಲೆ FIR
ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರ್ಯಾಲಿ ಆಯೋಜಿಸಿದ್ದರು. ಈ ವೇಳೆ ಇತ್ತೀಚೆಗೆ ಬಿಜೆಪಿ ಸೇರಿಕೊಂಡ ನಂದಿಗ್ರಾಮ ಕ್ಷೇತ್ರದ ಶಾಸಕ ಸುವೆಂದು ಅಧಿಕಾರಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇಷ್ಟೇ ಅಲ್ಲ ಈ ಬಾರಿ ನಂದಿಗ್ರಾಮದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಈ ರ್ಯಾಲಿ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್, ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಹಲವು ನಾಯಕರು ಕೋಲ್ಕತಾದಲ್ಲಿ ರೋಡ್ ಶೋ ಆಯೋಜಿಸಿದ್ದರು.
ಈ ರೋಡ್ ಶೋ ವೇಳೆ ಟಿಎಂಸಿ ಕಾರ್ಯಕರ್ತರು ಧ್ವಜ ಹಿಡಿದು, ಗೋ ಬ್ಯಾಕ್ ಬಿಜೆಪಿ ಘೋಷಣೆ ಕೂಗುತ್ತಾ ರೋಡ್ ಶೋ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ದಾಳಿ ನಡೆಯುತ್ತಿದ್ದಂತೆ ಪರಿಸ್ಥಿತಿ ಗಂಭೀರವಾಗಿದೆ. ತಕ್ಷಣವೇ ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಭದ್ರತೆ ಹೆಚ್ಚಿಸಿದ್ದಾರೆ. ಆದರೆ ಇದೀಗ ತೃಣಮೂಲ ಕಾಂಗ್ರೆಸ್ ನಾಯಕರು, ಇದು ಬಿಜೆಪಿ ನಡೆಸಿದ ದಾಳಿ ಎಂದು ಆರೋಪಿಸಿದೆ.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ತಂಡದ ಮೇಲೆ ಕಲ್ಲು, ಬಡಿಗೆಗಳಿಂದ ಭಾರೀ ದಾಳಿ
ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬೆಂಗಾವಲು ಪಡೆ ವಾಹನ ಮೇಲೆ ದಾಳಿ, ಯುವ ನಾಯಕ ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿ ನಾಯಕರು ಕಾರ್ಯಕರ್ತರು ಆಯೋಜಿಸಿದ ರ್ಯಾಲಿ ಮೇಲೂ ದಾಳಿ ನಡೆದಿತ್ತು.