ಶ್ರೀಲಂಕಾದಲ್ಲಿ ಸೀತೆ ಇದ್ದ ವನದ ಕಲ್ಲು ಅಯೋಧ್ಯೆ ರಾಮ ಮಂದಿರಕ್ಕೆ ಆಮದು!
ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ರಾಮ ಮಂದಿರ| ಶ್ರೀಲಂಕಾದಲ್ಲಿ ಸೀತೆ ಇದ್ದ ವನದ ಕಲ್ಲು ಅಯೋಧ್ಯೆ ರಾಮ ಮಂದಿರಕ್ಕೆ ಆಮದು!
ನವದೆಹಲಿ(ಮಾ.20): ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ರಾಮ ಮಂದಿರಕ್ಕೆ ಶ್ರೀಲಂಕಾದ ಸೀತಾ ಇಲಿಯ (ಅಶೋಕ ವಾಟಿಕಾ)ದಿಂದ ಕಲ್ಲೊಂದನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
ಸೀತೆಯನ್ನು ಅಪಹರಿಸಿದ್ದ ರಾವಣ, ಆಕೆಯನ್ನು ಅಶೋಕ ವಾಟಿಕಾದಲ್ಲಿ ಬಂಧನದಲ್ಲಿ ಇರಿಸಿದ್ದ. ಈ ಹಿನ್ನೆಲೆಯಲ್ಲಿ ಸೀತಾ ಮಾತೆ ತಂಗಿದ್ದ ಜಾಗದಿಂದ ಕಲ್ಲೊಂದನ್ನು ತಂದು ಅಯೋಧ್ಯೆ ರಾಮ ಮಂದಿರದ ಆವರಣದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ. ಭಾರತದಲ್ಲಿನ ಶ್ರೀಲಂಕಾ ಹೈಕಮೀಷನರ್ ಮಿಲಿಂದಾ ಮೊರಾಗೊಡಾ ಅವರು ಕಲ್ಲನ್ನು ಭಾರತಕ್ಕೆ ತರಲಿದ್ದಾರೆ.
ಈಗಾಗಲೇ ಅವರಿಗೆ ಕಲ್ಲನ್ನು ಹಸ್ತಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಶ್ರೀಲಂಕಾದ ಸೀತಾ ಇಲಿಯಾ ಗ್ರಾಮದಲ್ಲಿ ಸೀತಾ ಮಾತೆಗೆ ಮೀಸಲಾದ ದೇವಾಲಯವೊಂದು ಇದೆ. ಇದೇ ಜಾಗದಲ್ಲಿ ರಾವಣ ಸೀತೆಯನ್ನು ಬಂಧನದಲ್ಲಿ ಇರಿಸಿದ್ದ ಎಂದು ಭಾವಿಸಲಾಗಿದೆ.