'ಕೊರೋನಾ ಕಾಲದಲ್ಲಿ ಕನ್ನಡಿಗ ಶ್ರೀನಿವಾಸ್ ನಿಜಕ್ಕೂ ಜನರ ಒಳಿತಿಗೆ ನಿಂತಿದ್ದರು'
* ಕೊರೋನಾ ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಿದ್ದ ಕಾಂಗ್ರೆಸ್ ಯುವನಾಯಕ
* ಅಕ್ರಮವಾಗಿ ಔಷಧಿ ವಿತರಣೆ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು
* ದೇಣಿಗೆಯಾಗಿ ಬಂದ ಔಷಧ ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಪೊಲೀಸರು
* ಜನರ ಒಳಿತಿಗೆ ಕೆಲಸ ಮಾಡಿದ್ದು ಆರೋಪದಲ್ಲಿ ಹುರುಳಿಲ್ಲ
ನವದೆಹಲಿ(ಮೇ 17) ಕೊರೋನಾ ಸಂಕಷ್ಟದಲ್ಲಿ ಜನರ ನೆರವಿಗೆ ನಿಂತಿದ್ದ ಕನ್ನಡಿಗ ಹಾಗೂ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರನ್ನು ಕೊರೋನಾ ಸಂಕಷ್ಟದಲ್ಲಿರುವವರ ನೆರವಿಗಾಗಿ ರಚಿಸಿರುವ ಕಾಂಗ್ರೆಸ್ನ ರಾಷ್ಟ್ರಮಟ್ಟದ ಕಾರ್ಯಪಡೆ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಇದಾದ ಮೇಲೆ ಕಾನೂನು ಬಾಹಿರವಾಗಿ ಕೊರೋನಾ ಔಷಧಿಗಳನ್ನು ಮಾರಾಟ ಮಾಡಿದ್ದಾರೆ ಎಂಬ ಆರೋಪವೂ ಅವರ ಮೇಲೆ ಕೇಳಿಬಂದು ವಿಚಾರಣೆಗೆ ಒಳಪಡಿಸಲಾಗಿತ್ತು.
ಅಕ್ರಮವಾಗಿ ಔಷಧ ಮಾರಾಟ ಮಾಡಿದ್ದಾರೆ ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ ಎಂದು ದೆಹಲಿ ಪೊಲೀಸರು ಹೈಕೋರ್ಟ್ ಗೆ ತಿಳಿಸಿದ್ದಾರೆ. ದೇಣಿಗೆಯಾಗಿ ಬಂದ ಔಷಧಿಗಳನ್ನು ವಿತರಣೆ ಮಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇನ್ನೊಂದು ಕಡೆ ಬಿಜೆಪಿ ಎಂಪಿ, ಕ್ರಿಕೆಟಿಗ ಗೌತಮ್ ಗಂಭೀರ್ ಸಹ ತಮ್ಮ ತಂಡದೊಂದಿಗೆ ಕೊರೋನಾ ಚೆಕ್ ಕಪ್ ಕ್ಯಾಂಪ್ ನಡೆಸಿದ್ದರು.
ಕೊರೋನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಶ್ರೀನಿವಾಸ್ ಆರೋಪ ಮಾಡಿದ್ದರು. ದೆಹಲಿಯಲ್ಲಿ ತಾವೇ ಮುಂದೆ ನಿಂತು ಔಷಧ ವಿತರಣೆ ಮಾಡಿದ್ದರು. ದೆಹಲಿ ಮತ್ತು ಹೊರ ವಲಯದಲ್ಲಿ ಸೋಂಕಿನ ಸುನಾಮಿ ಎದ್ದಾಗ ಜನರ ರಕ್ಷಣೆಗೆ ನಿಂತಿದ್ದರು.
ಶಿವಮೊಗ್ಗ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಶ್ರೀನಿವಾಸ್ 2014ರಲ್ಲಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕಗೊಂಡು ಬಳಿಕ ಪ್ರಧಾನ ಕಾರ್ಯದರ್ಶಿಯಾಗಿ ಇದೀಗ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಕೊರೋನಾ ಸಂಕಷ್ಟದಲ್ಲಿರುವ 20 ಸಾವಿರಕ್ಕೂ ಹೆಚ್ಚು ಜನರಿಗೆ ನೆರವಾಗಿರುವ ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಹೊಸ ಜವಾಬ್ದಾರಿ ನೀಡಿತ್ತು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona