ಭಾರತೀಯ ರೈಲ್ವೇಯಲ್ಲೂ ಕಾಂತಾರ ಹವಾ, ಆ್ಯಪ್ ಪ್ರಚಾರದಲ್ಲಿ ಮುರಳೀಧರ್- ಶಿವಾ!
ಕನ್ನಡದ ಕಾಂತಾರ ಚಿತ್ರ ಇದೀಗ ಆಸ್ಕರ್ ಪ್ರಶಸ್ತಿ ರೇಸ್ಗೆ ಅಧಿಕೃತ ಪ್ರವೇಶ ಪಡೆದಿದೆ. ಹಲವು ಮೈಲಿಗಲ್ಲು ನಿರ್ಮಿಸಿರುವ ಕಾಂತಾರ ಗಾಳಿ ಇದೀಗ ಭಾರತೀಯ ರೈಲು ಇಲಾಖೆಯಲ್ಲೂ ಕಾಣಿಸಿಕೊಂಡಿದೆ. ಯುಟಿಎಸ್ ಆ್ಯಪ್ ಪ್ರಚಾರದ ಪೋಸ್ಟರ್ನಲ್ಲಿ ಕಾಂತಾರ ಸಂಚಲನ ಮೂಡಿಸಿದೆ
ನವದೆಹಲಿ(ಜ.10): ಕಾಂತಾರ ಚಿತ್ರ ಹಲವು ದಾಖಲೆಗಳನ್ನು ಪುಡಿ ಮಾಡಿ 100 ದಿನ ಆಚರಿಸಿದೆ. ಗಳಿಕೆ, ಜನಮೆಚ್ಚಿದ ಚಿತ್ರ, ಕತೆ ಚಿತ್ರಕತೆ, ನಿರ್ದೇಶನ, ನಟನೆ, ಸ್ಕ್ರೀನ್ ಪ್ಲೇ, ಸಂಗೀತ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ಕಾಂತಾರ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಇದೀಗ ಕಾಂತಾರ ಆಸ್ಕರ್ ರೇಸ್ನಲ್ಲೂ ಕಾಣಿಸಿಕೊಂಡಿದೆ. ಕನ್ನಡದ ಹೆಮ್ಮೆಯ ಚಿತ್ರ ದೇಶದ ಮೂಲೆ ಮೂಲೆಯಲ್ಲಿ ಹಲವು ಬದಲಾವಣೆಗೂ ಕಾರಣವಾಗಿದೆ. ಇದೀಗ ಭಾರತೀಯ ರೈಲ್ವೇ ಇಲಾಖೆ, ತಮ್ಮ ಡಿಜಿಟಲ್ ಟಿಕೆಟ್ ಪ್ರಚಾರಕ್ಕಾಗಿ ಕಾಂತಾರ ಚಿತ್ರದ ದೃಶ್ಯವನ್ನೇ ಬಳಸಿಕೊಂಡಿದ್ದಾರೆ. ಈ ಪೋಸ್ಟರ್ ವೈರಲ್ ಆಗಿದೆ. ರೈಲ್ವೇ ಇಲಾಖೆಯ ಯುಟಿಎಸ್ ಆ್ಯಪ್ ಪ್ರಚಾರಕ್ಕೆ ಕಾಂತಾರ ಚಿತ್ರದ ಸೀನ್ ಬಳಸಿಕೊಳ್ಳಲಾಗಿದೆ.
ರೈಲ್ವೇ ಟಿಕೆಟ್ ಪ್ರಿಂಟ್ಔಟ್, ಕೌಂಟರ್ನಲ್ಲಿ ನಿಂತು ಟಿಕೆಟ್ ಖರೀದಿಗಿಂತ ಡಿಜಿಟಲ್ ಟಿಕೆಟ್ ಬಳಸಲು ರೈಲ್ವೇ ಇಲಾಖೆ ಹೆಚ್ಚಿನ ಒತ್ತು ನೀಡುತ್ತಿದೆ. ರೈಲ್ವೇ ಇಲಾಖೆಯ ಯುಟಿಎಸ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಈ ಮೂಲಕ ಟಿಕೆಟ್ ಬುಕಿಂಗ್, ರೈಲಿನ ಮಾಹಿತಿ ಸೇರಿದಂತೆ ಎಲ್ಲವನ್ನು ನಿಭಾಯಿಸಲು ಸಾಧ್ಯವಿದೆ. ಇದರ ಪ್ರಚಾರಕ್ಕಾಗಿ ಕಾಂತಾರ ಚಿತ್ರದ ಹೀರೋ ಶಿವ ಪಾತ್ರ ಹಾಗೂ ಅರಣ್ಯಾಧಿಕಾರಿ ಮುರಳೀಧರ್ ದೃಶ್ಯವನ್ನು ಬಳಸಿಕೊಳ್ಳಲಾಗಿದೆ. ಈ ಕುರಿತು ಟ್ವಿಟರ್ ಮೂಲಕ ಈ ಪೋಸ್ಟರ್ ರಿಲೀಸ್ ಮಾಡಲಾಗಿದೆ.
Railway Rules: ರೈಲಿನಲ್ಲಿ ಈ 5 ನಿಯಮಗಳನ್ನು ಉಲ್ಲಂಘಿಸಿದರೆ ಕಂಬಿ ಎಣಿಸೋದು ಗ್ಯಾರಂಟಿ
ಕಾಂತಾರ ಚಿತ್ರದ ಅರಣ್ಯಾಧಿಕಾರಿ ಮರುಳೀಧರ್, ಚಿತ್ರದ ನಾಯಕ ಶಿವ ಪಾತ್ರದ ಬಳಿ ಟಿಕೆಟ್ ಇಲ್ಲದೆ ರೈಲು ಪ್ರಯಾಣ ಮಾಡುತ್ತಿದ್ದೀಯಾ? ಟಿಕೆಟ್ ತೋರಿಸುವ ಎಂದು ಗದರಿಸುವ ಮಾತನ್ನು ಹಾಕಲಾಗಿದೆ. ಇದಕ್ಕೆ ಶಿವ ಯುಟಿಎಸ್ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಿದ್ದೇನೆ ಎಂದು ಮೊಬೈಲ್ ತೋರಿಸುವ ಪೋಸ್ಟರ್ ಹಾಕಲಾಗಿದೆ. ಇಷ್ಟೇ ಅಲ್ಲ ಈ ಪೋಸ್ಟ್ಗೆ ರೈಲು ಪ್ರಯಾಣಿಕರೆ ಸ್ಮಾರ್ಟ್ ಆಗಿ. ಯುಟಿಎಸ್ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳಿ ಎಂದು ಸೌತ್ ವೆಸ್ಟರ್ನ್ ರೈಲ್ವೇ ಇಲಾಖೆ ಬರೆದುಕೊಂಡಿದೆ.
ರೈಲ್ವೇ ಇಲಾಖೆ ಡಿಜಿಟಲೀಕರಣಗೊಂಡಿದೆ. ಇಷ್ಟೇ ಇಲಾಖೆ ಕೂಡ ಆ್ಯಪ್ ಬಳಸಲು ಹೆಚ್ಚಿನ ಒತ್ತು ನೀಡುತ್ತಿದೆ. ಟ್ವೀಟ್ ಮೂಲಕ ಯಾವುದೇ ಸಮಸ್ಯೆ ಹೇಳಿಕೊಂಡರು ತಕ್ಷಣವೇ ರೈಲ್ವೇ ಇಲಾಖೆ ಸ್ಪಂದಿಸಲಿದೆ. ಪ್ರಯಾಣದ ನಡುವೆ ಯಾವುದೇ ಸಮಸ್ಯೆ ಎದುರಾದರು ಒಂದು ಟ್ವೀಟ್ ಅಥವಾ ಸಂದೇಶ ಸಾಕು, ಮಂದಿನ ನಿಲ್ದಾಣದಲ್ಲಿ ಅಧಿಕಾರಿಗಳು ಹಾಜರಿರುತ್ತಾರೆ. ಈ ಮೂಲಕ ರೈಲ್ವೇ ಇಲಾಖೆ ಕ್ರಾಂತಿ ಮಾಡಿದೆ. ಇದೀಗ ಯುಟಿಎಸ ಆ್ಯಪ್ನಲ್ಲೂ ಕಾಂತಾರ ಮಿಂಚುತ್ತಿದೆ.
ಆಸ್ಕರ್ ರೇಸ್ಗೆ 'ಕಾಂತಾರ' ಎಂಟ್ರಿ ಅಧಿಕೃತ; 2 ವಿಭಾಗದಲ್ಲಿ ಅರ್ಹತೆ ಪಡೆದ ರಿಷಬ್ ಶೆಟ್ಟಿ ಸಿನಿಮಾ
100ದಿನ ಪೂರೈಸಿರುವ ಕಾಂತಾರ
2022ನೇ ಸಾಲಿನಲ್ಲಿ ನೂರು ಕೋಟಿ ಕ್ಲಬ್ ಸೇರಿದ ಕನ್ನಡ ಚಿತ್ರಗಳ ಸಾಲಿನಲ್ಲಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದ ಕನ್ನಡದ ಐದು ಪ್ಯಾನ್ ಇಂಡಿಯಾ ಚಿತ್ರಗಳ ಪೈಕಿ ‘ಕಾಂತಾರ’ ಚಿತ್ರ ಪ್ರಮುಖವಾದದ್ದು. ಈ ಚಿತ್ರ ಇತ್ತೀಚೆಗೆ ರಾಜ್ಯದ 37 ಚಿತ್ರಮಂದಿರಗಳಲ್ಲಿ ನೂರು ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಾಣುವ ಮೂಲಕ ಕನ್ನಡ ಚಿತ್ರರಂಗದ ಹೆಮ್ಮೆಯನ್ನು ಹೆಚ್ಚಿಸಿದೆ. ಕಳೆದ ವರ್ಷ ಸೆಪ್ಟೆಂಬರ್ 30ರಂದು ‘ಕಾಂತಾರ’ ಚಿತ್ರ ತೆರೆಕಂಡಿತ್ತು. ಈಗ 2023ರ ಜನವರಿ 7ಕ್ಕೆ ನೂರು ದಿನಗಳನ್ನು ಪೂರೈಸುತ್ತಿದೆ. ‘ಬೆಳಕು... ಆದರೆ ಇದು ಬೆಳಕಲ್ಲ, ನೂರು ದಿನದ ದರ್ಶನ’ ಎಂದು ಬರೆದುಕೊಳ್ಳುವುದರ ಮೂಲಕ ಚಿತ್ರದ ಈ ನೂರು ದಿನಗಳ ಸಂಭ್ರಮವನ್ನು ಚಿತ್ರತಂಡದವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಹಾಗೂ ಪ್ರೇಕ್ಷಕರು ಚಿತ್ರತಂಡದ ಈ ಸಂಭ್ರಮಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.