ರಾಜಸ್ಥಾನದಲ್ಲಿ ಅಣ್ಣನ ಪ್ರತಿಮೆಗೆ ರಾಖಿ ಕಟ್ಟಿದ ಸಹೋದರಿ, ಫೋಟೋ ವೈರಲ್!
ರಕ್ಷಾಬಂಧನದಂದು, ಹುತಾತ್ಮ ಸಹೋದರರ ಸಹೋದರಿಯರು ಅವರ ಪ್ರತಿಮೆಗಳಿಗೆ ರಾಖಿ ಕಟ್ಟುತ್ತಾರೆ. ಏಕೆಂದರೆ ಅವರ ಸಹೋದರ ಇಂದಿಗೂ ಆ ಎಲ್ಲಾ ಸಹೋದರಿಯರ ಪಾಲಿಗೆ ಜೀವಂತವಾಗಿದ್ದಾನೆ. ಅಂತೆಯೇ, ಸಾವಿರಾರು ಸಹೋದರಿಯರು ಗಡಿಯಲ್ಲಿರುವ ತಮ್ಮ ಸೇನೆಯ ಸಹೋದರರಿಗೆ ರಾಖಿ ಕಳುಹಿಸುತ್ತಾರೆ.
ಜೈಪುರ (ಆ.12): ರಾಜಸ್ಥಾನದಲ್ಲಿ ಸಹೋದರಿಯೊಬ್ಬಳು ತನ್ನ ಸಹೋದರನಿಗೆ ರಾಖಿ ಕಟ್ಟುತ್ತಿರುವ ಚಿತ್ರ ವೈರಲ್ ಆಗಿದೆ. ವಿಶೇಷವೇನೆಂದರೆ, ಆಕೆ ರಾಖಿ ಕಟ್ಟಿರುವುದು ತನ್ನ ಸೈನಿಕ ಅಣ್ಣನ ಪ್ರತಿಮೆಗೆ. ದೇಶಕ್ಕಾಗಿ ಹೋರಾಡಿ ಹುತಾತ್ಮನಾದ ಸೈನಿಕನ ಪ್ರತಿಮೆಯನ್ನು ಊರಿನಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಪ್ರತಿಮೆಯ ಪೀಠವನ್ನು ಏರಿ ಆತನ ಕೈಗೆ ರಾಖಿ ಕಟ್ಟಿದ್ದಾಳೆ. ಇದನ್ನು ಬಿರ್ಲಾ ಪ್ರಿಸಿಷನ್ ಟೆಕ್ನಾಲಜೀಸ್ ಲಿಮಿಟೆಡ್ನ ಚೇರ್ಮನ್ ವೇದಾಂತ್ ಬಿರ್ಲಾ ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಹಂಚಿಕೊಂಡಿದ್ದಾರೆ. ಇವರನ್ನು ಈ ಚಿತ್ರವನ್ನು ಶೇರ್ ಮಾಡಿದ ಬೆನ್ನಲ್ಲಿಯೇ ಸಾಕಷ್ಟು ವೈರಲ್ ಆಗಿದೆ. ವೇದಾಂತ ಬಿರ್ಲಾ ಅವರು ಹುತಾತ್ಮ ಸಹೋದರನಿಗೆ ರಾಖಿ ಕಟ್ಟುವ ಫೋಟೋವನ್ನು ಲಿಂಕ್ಡ್ಇನ್ನಲ್ಲಿ ಪೋಸ್ಟ್ನೊಂದಿಗೆ ಹಂಚಿಕೊಂಡಿದ್ದಾರೆ. ಆಕೆ, ರಾಖಿ ಕಟ್ಟಿರಬಹುದು, ಆದರೆ ಆತ ಮಾತನಾಡೋದಿಲ್ಲ ಎಂದು ಬರೆದುಕೊಂಡಿದ್ದಾರೆ. ರಾಜಸ್ಥಾನದಲ್ಲಿರುವ ಈ ಪ್ರತಿಮೆಯು ಶಹೀದ್ ಗಣಪತ್ ರಾಮ್ ಕಡ್ವಾಸ್ರಾ ಅವರ ಪ್ರತಿಮೆಯಾಗಿದೆ. ಐದು ವರ್ಷಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಚಕಮಕಿಯ ವೇಳೆ ಗಣಪತ್ ರಾಮ್ ಕಡ್ವಾಸ್ ಹುತಾತ್ಮರಾಗಿದ್ದರು. ಹುತಾತ್ಮ ಸಹೋದರನ ಪ್ರತಿಮೆಯ ಮಣಿಕಟ್ಟಿಗೆ ರಾಖಿ ಕಟ್ಟುವುದನ್ನು ಮತ್ತು ರಕ್ಷಣೆಯ ಸಾರವನ್ನು ಗೌರವಿಸುವುದನ್ನು ಕಾಣಬಹುದು ಎಂದು ವೇದಾಂತ ಬಿರ್ಲಾ ಬರೆದಿದ್ದಾರೆ.
ಜೋಧಪುರದ ಖುಡಿಯಾಲದಲ್ಲಿರುವ ಪ್ರತಿಮೆ: ಭಾರತ ಅಪೂರ್ವ ದೇಶ ಆಗಿರುವುದು ಈ ಕಾರಣಕ್ಕಾಗಿ. ಇಲ್ಲಿ ದುಃಖ ಹಾಗೂ ಹೆಮ್ಮೆಯ ಕ್ಷಣ ಒಟ್ಟೊಟ್ಟಾಗಿ ಬರುತ್ತದೆ. ದೇಶಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ ಸಹೋದರನನ್ನು ಕಳೆದುಕೊಂಡ ದುಃಖ ಮತ್ತು ಹೆಮ್ಮೆ ಎಲ್ಲರಲ್ಲೂ ಇರುತ್ತದೆ. ಬಹುಶಃ ಈಕೆ ರಕ್ಷಾ ಬಂಧನದ ರೂಪದಲ್ಲಿ ಭಾವನಾತ್ಮಕ ತಿಕ್ಕಾಟವನ್ನು ಅನುಭವಿಸುತ್ತಿರಬೇಕು. ಹಾಗಾಗಿಯೇ ಈಕೆ ಅಣ್ಣನ ಪ್ರತಿಮೆಗೆ ರಾಖಿ ಕಟ್ಟಿದ್ದಾಳೆ. ಶಹೀದ್ ಗಣಪತ್ ರಾಮ್ ಕಡ್ವಾಸ್ರಾ ಜೋಧ್ಪುರದ ಓಸಿಯಾನ್ ಪ್ರದೇಶದ ಖುಡಿಯಾಲಾ ಗ್ರಾಮದ ನಿವಾಸಿಯಾಗಿದ್ದರು. ಸೇನೆಯ ಜಾಟ್ ರೆಜಿಮೆಂಟ್ನಲ್ಲಿದ್ದ ಗಣಪತ್ ರಾಮ್ ಕಡ್ವಾಸ್ರಾ, 2017ರ ಸೆಪ್ಟೆಂಬರ್ 24 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧದ ಸೇನಾ ಕಾರ್ಯಾಚರಣೆಯ ವೇಳೆ ಹುತಾತ್ಮರಾಗಿದ್ದರು.
ವೇದಾಂತ್ ಬಿರ್ಲಾ ಅವರ ಪೋಸ್ಟ್ಗೆ ಈಗಾಗಲೇ 3 ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಮತ್ತು ಟನ್ಗಳಷ್ಟು ಲೈಕ್ಗಳನ್ನು ಗಳಿಸಿದೆ. ಈ ಪೋಸ್ಟ್ ಅನೇಕರ ಹೃದಯವನ್ನು ಮುಟ್ಟಿದೆ. ರಾಷ್ಟ್ರವನ್ನು ಉಳಿಸುವ ಉದ್ದೇಶದಿಂದ ತಮ್ಮ ಜೀವವನ್ನು ಅಪಾಯದಲ್ಲಿಟ್ಟಿದ್ದಕ್ಕಾಗಿ ಸೇನಾ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಲು ಹಲವಾರು ನೆಟಿಜನ್ಗಳು ಕಾಮೆಂಟ್ ಬಾಕ್ಸ್ನಲ್ಲಿ ತಮ್ಮ ಪ್ರತಿಕ್ರಿಯೆ ಬರೆದಿದ್ದಾರೆ.
ರಕ್ಷಾಬಂಧನ ವಿಶೇಷ: ಸಹೋದರಿಯರಿಂದಲೇ ಸ್ಟಾರ್ ಪ್ಲೇಯರ್ಗಳಾದ ಐವರು ಕ್ರಿಕೆಟಿಗರು!
800 ಕಿಲೋಮೀಟರ್ ದೂರದಿಂದ ಬಂದು ಅಣ್ಣನ ಪ್ರತಿಮೆ ರಾಖಿ ಕಟ್ಟಿದ ತಂಗಿ: ವೇದಾಂತ್ ಬಿರ್ಲಾ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಮೆಂಟ್ ಬಾಕ್ಸ್ನಲ್ಲಿ ಹಲವರು ದೇಶದ ರಕ್ಷಣಗೆಗಾಗಿ ಪ್ರಾಣ ತ್ಯಾಗ ಮಾಡುವ ಸೇನೆಯ ಸಹೋದರರನ್ನು ನೆನಪಿಸಿಕೊಂಡು ಅವರಿಗೆ ಧನ್ಯವಾದ ಹೇಳಿದ್ದಾರೆ. ಇದೇ ರೀತಿಯ ಇನ್ನೊಂದು ಘಟನೆ ರಾಜಸ್ಥಾನದ ಫತೇಪುರದಲ್ಲಿ ನಡೆದಿದೆ. ಪ್ರತಿವರ್ಷ ರಕ್ಷಾಬಂಧನದಲ್ಲಿ ಅಂದಾಜು 800 ಕಿಲೋಮೀಟರ್ ದೂರದಿಂದ ಬರುವ ಸಹೋದರಿ ಅಣ್ಣನ ಪ್ರತಿಮೆಗೆ ರಾಖಿ ಕಟ್ಟಿ ಹೋಗುತ್ತಾಳೆ. ಉಷಾ ಕನ್ವರ್ ಹೆಸರಿನ ಸಹೋದರಿ, ಅಹಮದಾಬಾದ್ನಿಂದ ಅಂದಾಜು 800 ಕಿಲೋಮೀಟರ್ ದೂರ ಪ್ರಯಾಣಿಸಿ ತನ್ನ ಸಹೋದರ ಧರಮ್ವೀರ್ ಸಿಂಗ್ ಶೇಖಾವತ್ ಅವರ ಪ್ರತಿಮೆಗೆ ರಾಖಿ ಕಟ್ಟುತ್ತಾರೆ. ಕಾಶ್ಮೀರದ ಲಾಲ್ ಚೌಕ್ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಧರಮ್ವೀರ್ ಸಿಂಗ್ 2005ರಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದರು.
ವಿಶೇಷವಾಗಿ ರಕ್ಷಾಬಂಧನ ಆಚರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ!
ರಾಜಸ್ಥಾನದಲ್ಲೇ ಮತ್ತೊಂದು ಘಟನೆ: ಇನ್ನು ಸಿಕರ್ನ ಗಣೇಶ್ವರ ಪ್ರದೇಶದ ಸಲಾವಲಿ ಗ್ರಾಮದ ಹುತಾತ್ಮ ಗೋಕುಲ್ ಚಂದ್ ಯಾದವ್ ಅವರ ಸಹೋದರಿಯರಾದ ಸುನೀತಾ ಮತ್ತು ಕವಿತಾ ಹುತಾತ್ಮ ಅಣ್ಣನ ಪ್ರತಿಮೆಗೆ ರಾಖಿ ಕಟ್ಟಿದರು. ಹುತಾತ್ಮನ ಅಕ್ಕ ಸುನೀತಾ ಪ್ರತಿ ವರ್ಷ ನಹ್ರೆದಾದಿಂದ ಗಣೇಶ್ವರಕ್ಕೆ ಬಂದು ರಾಖಿ ಕಟ್ಟುತ್ಥಾರೆ. ತನ್ನ ಹುತಾತ್ಮ ಸಹೋದರನಿಗೆ ರಕ್ಷಾಬಂಧನದಂದು, ಪ್ರತಿಮೆಯ ಮೇಲೆ ರಕ್ಷಾಸೂತ್ರವನ್ನು ಕಟ್ಟುತ್ತಾರೆ. ಹುತಾತ್ಮ ಗೋಕುಲ್ ಚಂದ್ ಯಾದವ್ 2016ರ ಏಪ್ರಿಲ್ 13 ರಂದು ಅಸ್ಸಾಂ ರೈಫಲ್ಸ್ನಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಹುತಾತ್ಮರಾದರು. ಗಣೇಶ್ವರದ ಪಂಚಾಯತ್ ಕಟ್ಟಡದ ಬಳಿ ಹುತಾತ್ಮರ ಪ್ರತಿಮೆಯನ್ನು ನಿರ್ಮಿಸಲಾಗಿದೆ.