ಸಿಸ್ಟರ್ ಅಭಯಾ ಕೊಲೆ ಕೇಸಲ್ಲಿ: ಪಾದ್ರಿ, ಸನ್ಯಾಸಿನಿ ದೋಷಿ!
ಸಿಸ್ಟರ್ ಅಭಯಾ ಕೊಲೆ ಕೇಸಲ್ಲಿ ಕ್ಯಾಥೋಲಿಕ್ ಪಾದ್ರಿ, ಸನ್ಯಾಸಿನಿ ದೋಷಿ| 28 ವರ್ಷ ಹಳೆಯ ಕೊಲೆ ಕೇಸಿನ ತೀರ್ಪು ಪ್ರಕಟ
ತಿರುವನಂತಪುರಂ(ಡಿ.23): ದೇಶದೆಲ್ಲೆಡೆ ಭಾರೀ ಸಂಚಲನಕ್ಕೆ ಕಾಣವಾಗಿದ್ದ ಕೇರಳದ 21 ವರ್ಷದ ಸಿಸ್ಟರ್ ಅಭಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಥೋಲಿಕ್ ಪಾದ್ರಿ ಹಾಗೂ ಸನ್ಯಾಸಿನಿಯೊಬ್ಬಳನ್ನು ದೋಷಿಗಳು ಎಂದು ಇಲ್ಲಿನ ಸಿಬಿಐ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಫಾದರ್ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿ ಅವರ ಮೇಲಿನ ದೋಷಾರೋಪವನ್ನು ಕೋರ್ಟ್ ಎತ್ತಿಹಿಡಿದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದ ಇನ್ನೊಬ್ಬ ಆರೋಪಿ ಫಾದರ್ ಪೂತ್ರಕಾಯಲ್ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಖುಲಾಸೆ ಆಗಿದ್ದಾರೆ. ದೋಷಿಗಳ ಶಿಕ್ಷೆಯ ಪ್ರಮಾಣ ಬುಧವಾರ ಪ್ರಕಟವಾಗಲಿದೆ. ಇದರೊಂದಿಗೆ 28 ವರ್ಷಗಳ ಹಿಂದಿನ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯಕಂಡಂತೆ ಆಗಿದೆ.
ಏನಿದು ಪ್ರಕರಣ?
ಕೊಟ್ಟಾಯಂನ ಚಚ್ರ್ವೊಂದರಲ್ಲಿ ನಡೆಯುತ್ತಿದ್ದ ಕೆಲವು ಅನೈತಿಕ ಚಟುವಟಿಕೆಗಳನ್ನು ಸಿಸ್ಟರ್ ಅಭಯಾ ಕಣ್ಣಾರೆ ಕಂಡಿದ್ದರು. ಹೀಗಾಗಿ ಸಾಕ್ಷ್ಯ ನಾಶಪಡಿಸಲು ಅಭಯಾ ಮೇಲೆ ಕೊಡಲಿಯ ಹಿಡಿಕೆಯಿಂದ ಹೊಡೆದು ಹತ್ಯೆ ಹತ್ಯೆ ಮಾಡಲಾಗಿತ್ತು. 1992ರಲ್ಲಿ ಕೊಟ್ಟಾಯಂನ ಕಾನ್ವೆಂಟ್(ಧಾರ್ಮಿಕ ಶಿಕ್ಷಣ ಕೇಂದ್ರ)ದಲ್ಲಿ ಸಿಸ್ಟರ್ ಅಭಯಾ ಮೃತ ದೇಹ ಪತ್ತೆ ಆಗಿತ್ತು. ಮರಣೋತ್ತರ ಪರೀಕ್ಷೆಯ ವೇಳೆ ಅಭಯಾ ಮೇಲೆ ದಾಳಿ ನಡೆದಿರುವುದು ಪತ್ತೆ ಆಗಿತ್ತು. ಆದರೆ, ಪ್ರಕರಣವನ್ನು ಮುಚ್ಚಿಹಾಕುವ ಸಲುವಾಗಿ ಇದೊಂದು ಆತ್ಮಹತ್ಯೆ ಎಂಬ ವರದಿ ನೀಡಿ ಸ್ಥಳೀಯ ಪೊಲೀಸರು ತನಿಖೆಯನ್ನು ಕೊನೆಗೊಳಿಸಿದ್ದರು.
ಬಳಿಕ ಪೋಷಕರ ವಿರೋಧದ ಕಾರಣದಿಂದ 2008ರಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಈ ಮಧ್ಯೆ ನ್ಯಾಯಕ್ಕಾಗಿ ವರ್ಷನುಗಟ್ಟಲೆ ಕಾದ ಅಭಯಾ ಪೋಷಕರು ಕೆಲ ವರ್ಷಗಳ ಹಿಂದೆ ಕೊನೆಯುಸಿರೆಳೆದಿದ್ದರು. ಕಳೆದ ವರ್ಷ ಆ.26ರಿಂದ ಕೋರ್ಟ್ನಲ್ಲಿ ಈ ಪ್ರಕರಣದ ವಿಚಾರಣೆ ಆರಂಭವಾಗಿ ತೀರ್ಪು ಇದೀಗ ಹೊರಬಿದ್ದಿದೆ.