'ಅಜ್ಜಿಗೆ ರಕ್ಷಣೆ ನೀಡಿದ್ದರು, ಸಿಖ್ಖರ ಋುಣ ನನ್ನ ಮೇಲಿದೆ’
ಸಿಖ್ಖರ ಋುಣ ನನ್ನ ಮೇಲಿದೆ| 1977ರಲ್ಲಿ ನನ್ನ ಅಜ್ಜಿ ಇಂದಿರಾ ಗಾಂಧಿ ಅವರಿಗೆ ರಕ್ಷಣೆ ನೀಡಿದ್ದೇ ಸಿಖ್ಖರು| ಖೇತಿ ಬಚಾವೋ ಯಾತ್ರೆ ವೇಳೆ ರಾಹುಲ್ ಗಾಂಧಿ ಮಾತು
ಚಂಡೀಗಢ(ಅ.07): ‘ನಾನು ಸಿಖ್ಖರ ಋುಣದಲ್ಲಿರುವೆ. ಏಕೆಂದರೆ 1977ರಲ್ಲಿ ನನ್ನ ಅಜ್ಜಿ ಇಂದಿರಾ ಗಾಂಧಿ ಅವರಿಗೆ ರಕ್ಷಣೆ ನೀಡಿದ್ದೇ ಸಿಖ್ಖರು’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ರೈತ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಕೈಗೊಂಡಿರುವ ‘ಖೇತಿ ಬಚಾವೋ ಯಾತ್ರೆ’ಯ ಕೊನೆಯ ದಿನ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪಂಜಾಬಿಗಳು ನನ್ನ ಕೆಲಸ ನೋಡಬೇಕು. ಮಾತುಗಳನ್ನಲ್ಲ. ನಾನು ಸಿಖ್ಖರಿಂದ ಸಾಕಷ್ಟುಕಲಿತಿದ್ದೇನೆ. 1977ರಲ್ಲಿ ನನ್ನ ಅಜ್ಜಿ (ಮಾಜಿ ಪ್ರಧಾನಿ ಇಂದಿರಾ ಗಾಂಧಿ) ಚುನಾವಣೆಯಲ್ಲಿ ಸೋತಿದ್ದರು. ಆದರೆ ಆಗ ಯಾರೂ ಕೂಡ ನಮ್ಮ ಮನೆಯಲ್ಲಿ ಇರಲಿಲ್ಲ. ಕೇವಲ ಸಿಖ್ಖರು ರಕ್ಷಣೆ ನೀಡಿದರು. ಹೀಗಾಗಿ ನಾನು ಪಂಜಾಬಿ ಜನರ ಋುಣದಲ್ಲಿದ್ದೇನೆ’ ಎಂದರು. ಆದರೆ 84ರಲ್ಲಿ ಇಂದಿರಾ ಗಾಂಧಿ ಅವರು ಸಿಖ್ ಅಂಗರಕ್ಷಕರಿಂದಲೇ ಹತರಾದರು ಎಂಬುದು ಇಲ್ಲಿ ಗಮನಾರ್ಹ.
ತಾಯಿ ಆರೋಗ್ಯ ನೋಡಿಕೊಳ್ಳಬೇಕಿತ್ತು:
ಇದೇ ವೇಳೆ, ಮಹತ್ವದ ಕೃಷಿ ಕಾಯ್ದೆಗಳು ಸಂಸತ್ತಿನಲ್ಲಿ ಚರ್ಚೆಗೆ ಬಂದ ಸಂದರ್ಭದಲ್ಲಿ ತಾವು ವಿದೇಶಕ್ಕೆ ತೆರಳಿದ್ದ ಬಗ್ಗೆ ಸ್ಪಷ್ಟನೆ ನೀಡಿದ ರಾಹುಲ್, ‘ನನ್ನ ತಾಯಿ (ಸೋನಿಯಾ ಗಾಂಧಿ) ವೈದ್ಯಕೀಯ ತಪಾಸಣೆಗೆ ಹೋಗಿದ್ದರಿಂದ ನಾನೂ ಅವರ ಜತೆ ವಿದೇಶಕ್ಕೆ ತೆರಳಬೇಕಾಯಿತು. ನಾನು ಅವರ ಮಗ. ಅವರನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ’ ಎಂದ ರಾಹುಲ್, ‘ಸೋನಿಯಾ ಜತೆ ಪ್ರಿಯಾಂಕಾ ತೆರಳಬಹುದಿತ್ತು. ಆದರೆ ಅವರ ಮನೆಯ ಕೆಲವು ಸಿಬ್ಬಂದಿಗೆ ಕೊರೋನಾ ಬಂದ ಕಾರಣ ತಾಯಿ ಜತೆ ತೆರಳಲಿಲ್ಲ’ ಎಂದು ಸ್ಪಷ್ಟಪಡಿಸಿದರು.