ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಸ್ಪರ್ಧೆಯಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಸಂಸದ ಶಶಿ ತರೂರ್ ಮುಂಚೂಣಿಯಲ್ಲಿದ್ದಾರೆ. ಆದರೆ ಈ ಚುನಾವಣೆ ಕಾಂಗ್ರೆಸ್‌ನಲ್ಲೇ ಒಡಕು ಮೂಡಿದೆ. ಶಶಿ ತರೂರ್ ವಿರುದ್ಧ ಕಾಂಗ್ರೆಸ್ ವಕ್ತಾರ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. 

ನವದೆಹಲಿ(ಸೆ.22): ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಸಕ್ರಿಯವಾಗಿದ್ದರೆ, ಇತ್ತ ಕಾಂಗ್ರೆಸ್ ನಾಯಕರು ಅಧ್ಯಕ್ಷ ಚುನಾವಣೆಯತ್ತ ಚಿತ್ತ ನೆಟ್ಟಿದ್ದಾರೆ. ಆದರೆ ಈ ಚುನಾವಣೆ ಕಾಂಗ್ರೆಸ್ ಒಗ್ಗಟ್ಟನ್ನು ಮತ್ತಷ್ಟು ಸಡಿಲಗೊಳಿಸಿದೆ. ಕಾರಣ ಅಧ್ಯಕ್ಷ ಚುನಾವಣೆ ರೇಸ್‌ನಲ್ಲಿರುವ ಶಶಿ ತರೂರ್ ವಿರುದ್ಧ ಕಾಂಗ್ರೆಸ್ ಪಕ್ಷದ ವಕ್ತಾರ ಗೌರವ್ ವಲ್ಲಬ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ಗೆ ಶಶಿ ತರೂರ್ ಸಾಧನೆ ಶೂನ್ಯ. ಕಳೆದ 8 ವರ್ಷಗಳಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆ ದಾಖಲಾದಾಗ ಯೋಗ ಕ್ಷೇಮ ವಿಚಾರಿಸಿ ಪತ್ರ ಬರೆದಿದ್ದೇ ಶಶಿ ತರೂರ್ ಸಾಧನೆಯಾಗಿದೆ. ಇದನ್ನು ಹೊರತುಪಡಿಸಿದರೆ ಶಶಿ ತರೂರ್ ಪಕ್ಷಕ್ಕಾಗಿ ಏನೂ ಮಾಡಿಲ್ಲ ಎಂದು ಗೌರವ್ ವಲ್ಲಬ್ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಲು ಸೂಕ್ತ. ಗಾಂಧಿ ಹೊರತು ಪಡಿಸಿದರೆ ಅನುಭವ, ವ್ಯಕ್ತಿತ್ವ, ನಾಯಕತ್ವದ ಆಧಾರದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೂಕ್ತ ಎಂದು ಗೌರವ್ ವಲ್ಲಬ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಂಗ್ರೆಸ್ ಅಧ್ಯಕ್ಷ(Congress President Election) ಚುನಾವಣೆಯಲ್ಲಿ ರಾಹುಲ್ ಗಾಂಧಿ(Rahul Gandhi) ಸ್ಪರ್ಧಿಸಲು ಇಚ್ಚಿಸಿಲ್ಲ. ಹೀಗಾಗಿ ಸದ್ಯ ಕಾಂಗ್ರೆಸ್ ಕಾರ್ಯಕರ್ತರು, ನಾಯಕರ ಮುಂದಿರವ ಏಕೈಕ ಆಯ್ಕೆ ಅಶೋಕ್ ಗೆಹ್ಲೋಟ್(Ahsok Gehlot). ಕಳೆದ 45 ವರ್ಷಗಳಿಂದ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಜೀವನದಲ್ಲಿದ್ದಾರೆ. 45 ವರ್ಷಗಳ ರಾಜಕೀಯ ಅನುಭವವೇ ಇವರು ಅಧ್ಯಕ್ಷರಾಗಲು ಅರ್ಹತೆ ಪಡೆದುಕೊಂಡಿದೆ. ಇಷ್ಟೇ ಅಲ್ಲ 2018ರ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯನ್ನು(BJP) ಹಿಂದಿಕ್ಕಿ ರಾಜಸ್ಥಾನದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಸಾಧನೆ ಅಶೋಕ್ ಗೆಹ್ಲೋಟ್‌ಗಿದೆ. ಹೀಗಾಗಿ ತರೂರ್(Shashi Tharoor) ಅಧ್ಯಕ್ಷರಾಗಲು ಅರ್ಹತೆ ಪಡೆದಿಲ್ಲ ಎಂದು ಗೌರವ್ ವಲ್ಲಬ್ ಹೇಳಿದ್ದಾರೆ.

2 ದಶಕದ ಬಳಿಕ Congress ಚುಕ್ಕಾಣಿ ಗಾಂಧಿಯೇತರಿಗೆ..? ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಗೆಹ್ಲೋಟ್ ಷರತ್ತು..!

ರಾಹುಲ್‌ ಪರ ಮತ್ತೆ ಬಹುಪರಾಕ್‌
ಕಾಂಗ್ರೆಸ್‌ ಅಧ್ಯಕ್ಷನ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕಕಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಮತ್ತೆ ರಾಹುಲ್‌ ಗಾಂಧಿ ಅವರನ್ನೇ ಅಧ್ಯಕ್ಷ ಹುದ್ದೆಯಲ್ಲಿ ಕೂರಿಸಲು ಹಲವು ರಾಜ್ಯ ಘಟಕಗಳು ಬಹಿರಂಗವಾಗಿಯೇ ಒತ್ತಾಯ ಆರಂಭಿಸಿವೆ. ಜೊತೆಗೆ ಈ ಕುರಿತು ಗೊತ್ತುವಳಿಯನ್ನೇ ಅಂಗೀಕರಿಸಿವೆ. ಭಾರತ್‌ ಜೋಡೋ ಯಾತ್ರೆ ನಡೆಯುತ್ತಿರುವ ಹೊತ್ತಿನಲ್ಲೇ ಪಿ.ಚಿದಂಬರಂ, ಜೈರಾಮ್‌ ರಮೇಶ್‌ ಸೇರಿದಂತೆ ಹಲವು ನಾಯಕರು, ಯಾರು ನೂತನ ಅಧ್ಯಕ್ಷರಾದರೂ, ಪಕ್ಷದಲ್ಲಿ ರಾಹುಲ್‌ ಸ್ಥಾನಕ್ಕೆ ಯಾವುದೇ ಚ್ಯುತಿ ಇಲ್ಲ ಎಂಬ ಹೇಳಿಕೆಗಳ ನಡುವೆಯೇ ಇದೀಗ ರಾಜ್ಯ ಘಟಕಗಳಿಂದಲೂ ಇಂಥದ್ದೇ ಒತ್ತಾಯ, ಆಗ್ರಹ ಕೇಳಿಬಂದಿದೆ. ರಾಜಸ್ಥಾನ ಹಾಗೂ ಛತ್ತೀಸಗಢದ ಕಾಂಗ್ರೆಸ್‌ ಘಟಕಗಳು ರಾಹುಲ್‌ ಗಾಂಧಿ ಅವರನ್ನೇ ಪಕ್ಷದ ಮುಂದಿನ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಗೊತ್ತುವಳಿ ಅಂಗೀಕರಿಸಿವೆ. ಜೊತೆಗೆ ಗುಜರಾತ್‌ ಕಾಂಗ್ರೆಸ್‌ ಘಟಕ ಕೂಡಾ ರಾಹುಲ್‌ಗೆ ಅಧ್ಯಕ್ಷನಾಗುವ ನಿಟ್ಟಿನಲ್ಲಿ ಗೊತ್ತುವಳಿ ಮಂಡಿಸಿದ್ದು, ಅದಕ್ಕೂ ಮುನ್ನ ನಡೆದ ರಾಜ್ಯ ಕಾರ್ಯದರ್ಶಿಗಳ ಸಭೆಯಲ್ಲಿ ಎಲ್ಲರೂ ಚಪ್ಪಾಳೆ ತಟ್ಟಿಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ
ಸೆ.24ರಿಂದ ಸೆ.30ರವರೆಗೆ ನಾಮಪತ್ರ ಸಲ್ಲಿಕೆ ಮಾಡಬಹುದಾಗಿದೆ. ಅ.17ರಂದು ಚುನಾವಣೆ ನಡೆಯಲಿದೆ. ಅ.19ರಂದು ಫಲಿತಾಂಶ ಹೊರಬೀಳಲಿದೆ