ಹಿಮಾಚಲದಲ್ಲಿ ಮೇಘಸ್ಫೋಟ 7 ಸಾವಿನ ಶಂಕೆ ಉತ್ತರಾಖಂಡದಲ್ಲಿ ಭೂಕುಸಿತ ಮಹಾರಾಷ್ಟ್ರದಲ್ಲಿ ರೆಡ್ ಅಲರ್ಚ್
ಶಿಮ್ಲಾ/ಮುಂಬೈ/ಡೆಹ್ರಾಡೂನ್ (ಜು.7): ದೇಶದ ಅನೇಕ ಭಾಗಗಳಲ್ಲಿ ಮುಂಗಾರು ಮಳೆ ಭರ್ಜರಿಯಾಗಿ ಸುರಿದಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ತೀವ್ರ ಹಾನಿ ಸಂಭವಿಸಿದೆ. ಬುಧವಾರ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ಭೀಕರ ಪ್ರವಾಹ ಸೃಷ್ಟಿಯಾಗಿದ್ದು, ಸುಮಾರು 7 ಜನರು ನೀರುಪಾಲಾಗಿದ್ದಾರೆ ಹಾಗೂ ಅನೇಕರು ನಾಪತ್ತೆಯಾಗಿದ್ದಾರೆ.
ಉತ್ತರಾಖಂಡದಲ್ಲಿ ಕೂಡ ಮಳೆ ಸಂಬಂಧ ಒಂದು ಸಾವು ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಕೂಡಾ ಭಾರೀ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಚ್ ಘೋಷಿಸಲಾಗಿದೆ.
ಹಿಮಾಚಲದಲ್ಲಿ ಮೇಘಸ್ಪೋಟ: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಮಣಿಕರಣ್ನಲ್ಲಿ ಮೇಘಸ್ಫೋಟ ಸಂಭವಿಸಿದ ಕಾರಣ ಭೀಕರ ಪ್ರವಾಹ ಸಂಭವಿಸಿದೆ. ಇದರಿಂದಾಗಿ ಪಾರ್ವತಿ ನದಿಯ ಮೇಲ್ಸೇತುವೆಗೂ ಹಾನಿಯಾಗಿದೆ. 7 ಜನರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಅವರಿಗೆ ಹುಡುಕಾಟ ಕಾರ್ಯಾಚರಣೆ ಆರಂಭವಾಗಿದೆ. ಶಿಮ್ಲಾದ ಧಲ್ಲಿ ಸುರಂಗದಲ್ಲಿ ಭೂಕುಸಿತ ಸಂಭವಿಸಿದ್ದು, ರಕ್ಷಣಾ ತಂಡ ಕೂಡಾ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ ಸೇರಿ ದೇಶಾದ್ಯಂತ ಭಾರಿ ಮಳೆ,ಶಾಲಾ ಕಾಲೇಜುಗಳಿಗೆ ರಜೆ, ಹೈ ಅಲರ್ಟ್ ಘೋಷಣೆ!
ಮಲಾನಾದಲ್ಲಿ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಮತ್ತು ಪಾರ್ವತಿ ನದಿಗೆ ಅಡ್ಡಲಾಗಿರುವ ಸೇತುವೆಯೂ ಹಾನಿಯಾಗಿದೆ. ರಕ್ಷಣಾ ಅಧಿಕಾರಿಗಳು ಮಲಾನಾದಲ್ಲಿ ಮಹಿಳೆಯ ಶವವನ್ನು ಹೊರತೆಗೆದರೆ, ಚೋಜ್ ಗ್ರಾಮದ ಬಳಿ ನಾಪತ್ತೆಯಾಗಿದ್ದ ನಾಲ್ವರು ಪತ್ತೆಯಾಗಿಲ್ಲ. ಹೆಚ್ಚಿನ ನೀರಿನ ಮಟ್ಟದಿಂದಾಗಿ ಮಲಾನಾದ ವಿದ್ಯುತ್ ಸ್ಥಾವರದ ಸುಮಾರು 25 ಉದ್ಯೋಗಿಗಳನ್ನು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ರಕ್ಷಿಸಿವೆ.
ಮೃತರನ್ನು ಮಲಾನಾ ಪ್ರದೇಶದ ಸ್ಥಳೀಯರಾದ ಸಾಜು ದೇವಿ ಎಂದು ಗುರುತಿಸಲಾಗಿದೆ. ಅತಿ ವೇಗದಲ್ಲಿ ನೀರು ಹರಿದಿದ್ದರಿಂದ ಆಕೆ ಬಂಡೆಯ ಕೆಳಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆತರಲಾಯಿತಾದರೂ ಬದುಕುಳಿಯಲಿಲ್ಲ. ನಾಪತ್ತೆಯಾದವರನ್ನು ರೋಹಿತ್, ಕಪಿಲ್, ರಾಹುಲ್ ಚೌಧರಿ ಮತ್ತು ಅರ್ಜುನ್ ಎಂದು ಗುರುತಿಸಲಾಗಿದೆ. ಅವರನ್ನು ಪತ್ತೆ ಮಾಡಲು ರಕ್ಷಣಾ ತಂಡಗಳು ಪ್ರದೇಶದ ಹಲವು ವಿಭಾಗಗಳನ್ನು ಸ್ಕ್ಯಾನ್ ಮಾಡುತ್ತಿದ್ದರೂ, ಅವರು ಪ್ರವಾಹದಿಂದ ಬದುಕುಳಿದಿರುವ ಸಾಧ್ಯತೆಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
KARNATAKA RAIN UPDATES: ಕರವಾಳಿಯಲ್ಲಿ ರೆಡ್ ಅಲರ್ಟ್, ಯಾವುದಕ್ಕೂ ಹುಷಾರಾಗಿರಿ
ಉತ್ತರಾಖಂಡದಲ್ಲಿ 1 ಸಾವು: ಉತ್ತರಾಖಂಡದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಹೊರಟ ಹೊಸದಾಗಿ ಆಯ್ಕೆಗೊಂಡ ಗ್ರಾಮದ ಪಂಚಾಯ್ತಿ ಅಧ್ಯಕ್ಷ ಮಳೆ ಕಾರಣ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟಘಟನೆ ವರದಿಯಾಗಿದೆ.
ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದ್ದು, ಮುಖ್ಯಸ್ಥನೊಂದಿಗಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರುದ್ರಪ್ರಯಾಗ ಜಿಲ್ಲೆಯಲ್ಲಿ ಉಂಟಾದ ಭೂಕುಸಿತದಿಂದ ಬದರೀನಾಥ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆಯಾಗಿದೆ.
ಮಹಾದಲ್ಲಿ ರೆಡ್ ಅಲರ್ಚ್: ಮಹಾರಾಷ್ಟ್ರದಲ್ಲಿ ಮುಂದಿನ 2 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ರೆಡ್ ಅಲರ್ಚ್ ಹವಾಮಾನ ಇಲಾಖೆ ರೆಡ್ ಅಲರ್ಚ್ ಘೋಷಣೆ ಮಾಡಿದೆ. ಸತತ ಮೂರು ದಿನಗಳಿಂದಾಗಿ ರಾಜಧಾನಿ ಮುಂಬೈಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ, ನಗರದ ಹಲವು ವಠಾರಗಳಲ್ಲಿ ಭೂಕುಸಿತ ಸಂಭವಿಸಿದ್ದು, ಮೂವರಿಗೆ ಗಾಯಗಳಾಗಿವೆ. ರಸ್ತೆಗಳು ಜಲಾವೃತವಾಗಿದ್ದು, ರಸ್ತೆ, ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.
