ಬಿಜೆಪಿ ಬಿರುಗಾಳಿಗೆ ಬೆಚ್ಚಿಬಿದ್ದ ಕಮಲ್ ಹಸನ್; MNM ಪಕ್ಷದ ಪ್ರಮುಖ ವಿಕೆಟ್ ಪತನ!
ಮುಂಬರುವ ಚುನಾವಣೆಗೆ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗೆ ಗರಿಗೆದರಿದೆ. ಕಮಲ್ ಹಸನ್ ಕೂಡ ರಾಜಕೀಯ ಪಕ್ಷ ಕಟ್ಟಿ ಅಖಾಡಕ್ಕಿಳಿದಿದ್ದಾರೆ. ಪ್ರಚಾರ ಕೂಡ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಕಮಲ್ಗೆ ಭಾರಿ ಹಿನ್ನಡೆಯಾಗಿದೆ.
ಚೆನ್ನೈ(ಡಿ.25): ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ಭೇಟಿ ವೇಳೆ ಹಲವು ಟಿಎಂಸಿ ನಾಯಕರು ಬಿಜೆಪಿ ಸೇರಿಕೊಂಡಿದ್ದರು. ಇದೀಗ ಈ ಗಾಳಿ ತಮಿಳುನಾಡಿನಲ್ಲಿ ಬೀಸುತ್ತಿದೆ. ಮಕ್ಕಳ್ ನೀಧಿ ಮಯಂ ( MNM) ಪಕ್ಷ ಕಟ್ಟಿದ ನಟ ಕಮಲ್ ಹಸನ್, ಮುಂಬರುವ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಪಕ್ಷದ ಮುಖ್ಯ ಕಾರ್ಯದರ್ಶಿ ಬಿಜೆಪಿ ಸೇರಿಕೊಂಡಿದ್ದಾರೆ.
ಕಮಲ್ರಿಂದ ತಮಿಳುನಾಡು ರಾಜಕಾರಣದ ದಿಕ್ಕು ಬದಲಿಸುವ ಘೋಷಣೆ!...
ಚುನಾವಣೆಗೆ ಮುನ್ನ ಆರಂಭಿಸಿದ ತಯಾರಿ ವೇಳೆಯೇ ಕಮಲ್ ಹಸನ್ಗೆ ಭಾರಿ ಹಿನ್ನಡೆಯಾಗಿದೆ. ಕಮಲ್ ಚುನಾವಣಾ ಪ್ರಚಾರ ನಡೆಸುತ್ತಿರುವ ನಡುವೇಯೆ ಈ ಬೆಳವಣಿಗೆ ನಡೆದಿದೆ. MNM ಪಕ್ಷದ ಮುಖ್ಯ ಕಾರ್ಯದರ್ಶಿ ಅರುಣಾಚಲಂ, ಕೇಂದ್ರ ಸಚಿವ ಪ್ರಕಾಶ್ ಜಾವೇಡಕರ್ ಸಮ್ಮುಖದಲ್ಲಿ ಬಿಜಿಪೆ ಸೇರಿಕೊಂಡಿದ್ದಾರೆ.
ಚೆನ್ನೈನಲ್ಲಿನ ಬಿಜೆಪಿ ಕಚೇರಿಯಲ್ಲಿ ಅರುಣಾಚಲಂ ಬಿಜೆಪಿ ಸೇರಿಕೊಂಡಿದ್ದಾರೆ. ಬಳಿಕ ಮಾತನಾಡಿದ ಪ್ರಕಾಶ್ ಜಾವೇಡಕರ್, ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಉತ್ತಮ ಫಲಿತಾಂಶ ನೀಡಲಿದೆ. ಜನರು ಬಿಜೆಪಿಯತ್ತ ಒಲವು ತೋರಿದ್ದಾರೆ ಎಂದರು. ಪ್ರತಿ ರಾಜ್ಯದ ಚುನಾವಣೆಯಲ್ಲಿ ಇದು ಸಾಬೀತಾಗುತ್ತಿದೆ ಎಂದರು.
ಹೈದರಾಬಾದ್ ಮುನ್ಸಿಪಲ್ ಕೌನ್ಸಿಲ್ನಲ್ಲಿ 4 ಸ್ಥಾನವಿದ್ದ ಬಿಜೆಪಿ ಇದೀಗ 48ಕ್ಕ ಏರಿಕೆಯಾಗಿದೆ. ಮಧ್ಯ ಪ್ರದೇಶ್, ಉತ್ತರ ಪ್ರದೇಶ ಹಾಗೂ ಗುಜರಾತ್ ಉಪ ಚುನಾವಣೆ ಗೆದ್ದಿದ್ದೇವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಜಾವೇಡಕರ್ ಹೇಳಿದರು.