ಕಾನೂನು ಶ್ರೇಷ್ಠ, ನಿಮ್ಮ ನೀತಿಗಳಲ್ಲ: ಟ್ವೀಟರ್ಗೆ ಚಾಟಿ!
* ಕಾನೂನು ಶ್ರೇಷ್ಠ, ನಿಮ್ಮ ನೀತಿಗಳಲ್ಲ: ಟ್ವೀಟರ್ಗೆ ಚಾಟಿ
* ದೇಶದ ಕಾನೂನುಗಳಿಗಿಂತ ನಿಮ್ಮ ಪಾಲಿಸಿಗಳೇ ಹೆಚ್ಚೇ?
* ಕಾನೂನು ಪಾಲಿಸದ ನಿಮ್ಮ ಮೇಲೆ ದಂಡ ವಿಧಿಸಬಾರದೇಕೆ?
* ಟ್ವೀಟರ್ ಅಧಿಕಾರಿಗಳಿಗೆ ಸಂಸದೀಯ ಸ್ಥಾಯಿ ಸಮಿತಿ ಪ್ರಶ್ನೆ
ನವದೆಹಲಿ(ಜೂ.19): ಭಾರತ ಸರ್ಕಾರ ರೂಪಿಸಿದ ಮಾಹಿತಿ ತಂತ್ರಜ್ಞಾನದ ಕಾನೂನು ಜಾರಿಗೊಳಿಸದ ಟ್ವೀಟರ್ ಅಧಿಕಾರಿಗಳನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಮಾಹಿತಿ ತಂತ್ರಜ್ಞಾನ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ಶುಕ್ರವಾರ ವಿಚಾರಣೆಗೊಳಪಡಿಸಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಸಾಮಾಜಿಕ ಮಾಧ್ಯಮ ದುರ್ಬಳಕೆ ತಡೆ ಹೇಗೆ ಎಂದು ಪ್ರಶ್ನಿಸಲು ಟ್ವೀಟರ್ಗೆ ಸ್ಥಾಯಿ ಸಮಿತಿ ಬುಲಾವ್ ನಿಡಿತ್ತು. ಸಭೆಗೆ ಹಾಜರಾಗಿದ್ದ ಟ್ವೀಟರ್ ಭಾರತದ ಪಬ್ಲಿಕ್ ಪಾಲಿಸಿ ವ್ಯವಸ್ಥಾಪಕ ಶಗುಫ್ತಾ ಕಮ್ರಾನ್ ಮತ್ತು ವಕೀಲ ಆಯುಷಿ ಕಪೂರ್ ಅವರನ್ನು ತರಾಟೆಗೆ ತೆಗೆದುಕೊಂಡ ಸಮಿತಿ ಸದಸ್ಯರು, ‘ನಿಮ್ಮ ಪಾಲಿಸಿಗಳು ದೇಶದ ಕಾನೂನುಗಳಿಗಿಂತ ಮಿಗಿಲು ಎಂದು ಅರ್ಥೈಸಿಕೊಂಡಿದ್ದೀರಾ? ಈ ನೆಲದ ಶ್ರೇಷ್ಠವಾದ ಕಾನೂನುಗಳನ್ನು ಪಾಲಿಸಲೇಬೇಕು’ ಎಂದು ಕಿಡಿಕಾರಿದರು.
‘ದೇಶದ ಕಾನೂನುಗಳನ್ನು ಪಾಲಿಸದ ಟ್ವೀಟರ್ ತನ್ನ ದಾರ್ಷ್ಟ್ಯತನ ಮುಂದುವರಿಸಿದರೆ ಭಾರೀ ದಂಡ ವಿಧಿಸಬೇಕು’ ಎಂದು ಕೆಲವು ಸದಸ್ಯರು ಆಗ್ರಹಿಸಿದರು ಎಂದು ತಿಳಿದುಬಂದಿದೆ.
ಕೋವಿಡ್ ಕಾರಣಕ್ಕೆ ಪಾಲನೆ ವಿಳಂಬ: ಟ್ವೀಟರ್
ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಟ್ವೀಟರ್ ಅಧೀಕಾರಿಗಳು, ‘ನಾವು ಭಾರತ ಸರ್ಕಾರ ರೂಪಿಸಿದ ಕಾನೂನುಗಳ ಜಾರಿಗೆ ಬದ್ಧರಾಗಿದ್ದೇವೆ. ಆದರೆ ಕೋವಿಡ್ ಕಾರಣಕ್ಕೆ ಅನುಸರಣಾ ಅಧಿಕಾರಿ, ನೋಡಲ್ ಅಧಿಕಾರಿ ಹಾಗೂ ಕುಂದುಕೊರತೆಗಳ ನಿರ್ವಹಣೆಗೆ ಅಧಿಕಾರಿಗಳನ್ನು ನೇಮಕ ಮಾಡುವಲ್ಲಿ ವಿಳಂಬವಾಗಿದೆ’ ಎಂದು ಉತ್ತರಿಸಿದ್ದಾರೆ ಎಂದು ತಿಳಿದುಬಂದಿದೆ.