ಕೊರೋನಾಗೆ ಬಲಿಯಾದ ಕುಟುಂಬಕ್ಕೆ 50 ಸಾವಿರ ರು.: SDRF ಮೂಲಕ ಪರಿಹಾರ!
* ಕೋವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ
* ಕೊರೋನಾಗೆ ಬಲಿಯಾದ ಕುಟುಂಬಕ್ಕೆ 50 ಸಾವಿರ ರು.
* ಎಸ್ಡಿಆರ್ಎಫ್ ಮೂಲಕ ಪರಿಹಾರ: ಅಧಿಸೂಚನೆ ಪ್ರಕಟ
ನವದೆಹಲಿ(ಸೆ.27): ಕೊರೋನಾ ವೈರಸ್ಗೆ(Coronavirus) ಬಲಿಯಾದ ಸಂತ್ರಸ್ತರ ಕುಟುಂಬಕ್ಕೆ 50 ಸಾವಿರ ರು. ಪರಿಹಾರ ನೀಡುವುದಾಗಿ ಇತ್ತೀಚೆಗೆ ಘೋಷಿಸಿದ್ದ ಕೇಂದ್ರ ಸರ್ಕಾರ, ಭಾನುವಾರ ರಾತ್ರಿ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.
ಕೋವಿಡ್ನಿಂದ ಮೃತಪಟ್ಟವರ ಕುಟುಂಬ, ಕೋವಿಡ್ ಪರಿಹಾರ ಕಾರ್ಯಗಳಲ್ಲಿ ನಿರತರಾಗಿ ಮೃತಪಟ್ಟವರ ಕುಟುಂಬ ಹಾಗೂ ಕೊರೋನಾ ವ್ಯಾಧಿ ನಿಗ್ರಹದಲ್ಲಿ ನಿರತರಾದವರ ಕುಟುಂಬಗಳು ಪರಿಹಾರಕ್ಕೆ ಅರ್ಹ ಆಗಲಿವೆ ಎಂದು ತಿಳಿಸಲಾಗಲಿದೆ.
ಇದೇ ವೇಳೆ, ದೇಶದಲ್ಲಿ ಕೊರೋನಾದಿಂದ ಸಾವು ಸಂಭವಿಸಿದ ಮೊದಲನೆಯ ವ್ಯಕ್ತಿಯ ಕುಟುಂಬದಿಂದ ಹಿಡಿದು, ಇನ್ನು ಮುಂದಿನ ದಿನಗಳಲ್ಲಿ ಕೋವಿಡ್ಗೆ ಬಲಿಯಾಗುವವರಿಗೂ ಪರಿಹಾರ ಲಭಿಸಲಿದೆ. ಕೊರೋನಾವನ್ನು ದುರಂತ ಎಂದು ಮಾಡಿರುವ ಘೋಷಣೆ ಹಿಂಪಡೆಯುವವರೆಗೆ ಅಥವಾ ಮುಂದಿನ ಆದೇಶದವರೆಗೆ ಪರಿಹಾರ ವಿತರಣೆ ಮುಂದುವರಿಯಲಿದೆ ಎಂದು ಅಧಿಸೂಚನೆ ತಿಳಿಸಿದೆ.
ಇದೇ ವೇಳೆ, ಪರಿಹಾರ ನೀಡಿಕೆಯನ್ನು ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್ಡಿಆರ್ಎಫ್) ಮೂಲಕ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ಮೂಲಕ ಪರಿಹಾರ ನೀಡಿಕೆ ಹೊಣೆಯನ್ನು ರಾಜ್ಯಗಳಿಗೆ ವಹಿಸಲಾಗಿದೆ.
ಕೊರೋನಾಕ್ಕೆ ಬಲಿಯಾದವರಿಗೆ ತಲಾ 4 ಲಕ್ಷ ರು. ಪರಿಹಾರ ನೀಡಬೇಕು ಎಂದು ಕೋರಿ ಹಲವು ಅರ್ಜಿ ಸಲ್ಲಿಕೆಯಾಗಿದ್ದವು. ಆದರೆ 50 ಸಾವಿರ ರು. ನೀಡಲು ಕೊನೆಗೆ ಕೇಂದ್ರ ಒಪ್ಪಿತ್ತು.
50,000 ಕೋವಿಡ್ ನೆರವು: ಬೇರಾವ ದೇಶ ಮಾಡಿಲ್ಲ, ಕೇಂದ್ರಕ್ಕೆ ಸುಪ್ರೀಂ ಶ್ಲಾಘನೆ!
ಕೋವಿಡ್ನಿಂದ(Covid 19) ಮೃತರಾದವರ ಕುಟುಂಬಕ್ಕೆ 50,000 ರು. ಪರಿಹಾರ ನೀಡುವ ಕೇಂದ್ರ ಸರ್ಕಾರದ ನಿಲುವಿಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್(Supreme Court), ಈ ವಿಷಯದಲ್ಲಿ ಭಾರತ ಏನು ಮಾಡಿದೆಯೋ ಅದನ್ನು ಬೇರಾವುದೇ ದೇಶಕ್ಕೂ ಮಾಡಲು ಸಾಧ್ಯವಾಗಿಲ್ಲ ಎಂಬುದನ್ನು ನ್ಯಾಯಾಂಗ ಗಮನಿಸಿದೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದೆ.
ಅನೇಕ ಕುಟುಂಬಗಳ ಕಣ್ಣೀರು ಒರೆಸಲು ಪ್ರಯತ್ನ ನಡೆದಿದೆ ಎಂಬ ಬಗ್ಗೆ ನಮಗೆ ಸಂತೋಷವಿದೆ. ಸಂತ್ರಸ್ತ ಕುಟುಂಬಕ್ಕೆ ಇದರಿಂದ ಕೊಂಚವಾದರೂ ನೆಮ್ಮದಿ ಸಿಗಬಹುದು. ಅಪಾರ ಜನಸಂಖ್ಯೆಯುಳ್ಳ ದೇಶವಾಗಿರುವುದರಿಂದ ಬಹಳ ಸಮಸ್ಯೆಗಳಿದ್ದರೂ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದನ್ನು ಬೇರಾವುದೇ ದೇಶಕ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ಗುರುವಾರ ನ್ಯಾ.ಎಂ.ಆರ್.ಶಾ ಹಾಗೂ ನ್ಯಾ.ಎ.ಎಸ್.ಬೋಪಣ್ಣ ಅವರ ಪೀಠ ಶ್ಲಾಘಿಸಿತು.
ಕೋವಿಡ್ನಿಂದ(Covid 19) ಮೃತರಾದವರ ಕುಟುಂಬಕ್ಕೆ ಆರ್ಥಿಕ ಪರಿಹಾರ ನೀಡಬೇಕೆಂಬ ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿದೆ. ಬುಧವಾರವಷ್ಟೇ ಆ ಬಗ್ಗೆ ಅಫಿಡವಿಟ್ ಸಲ್ಲಿಸಿದ್ದ ಕೇಂದ್ರ ಸರ್ಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಮೃತರ ಕುಟುಂಬಕ್ಕೆ 50,000 ರು. ಪರಿಹಾರ ನೀಡಲು ಶಿಫಾರಸು ಮಾಡಿದೆ ಎಂದು ತಿಳಿಸಿತ್ತು.