ದೆಹಲಿ ಅಲ್ಲ ಇಂದ್ರಪ್ರಸ್ಥ, ಸಂಚಲನ ಸೃಷ್ಟಿಸಿದ ರಾಜಧಾನಿ ಮರುನಾಮಕರಣ ಮನವಿ ಪತ್ರ, ಸರ್ಕಾರದ ಮುಂದೆ ಬಂದಿದೆ. ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಹಿಡಿದು ಡೆವಲಪ್‌ಮೆಂಟ್ ಬೋರ್ಡ್ ಸೇರಿ ಎಲ್ಲಾ ಹೆಸರು ಮರುನಾಮಕರಣ ಮಾಡಲು ಮನವಿ ಮಾಡಲಾಗಿದೆ.

ನವದೆಹಲಿ (ಅ.19) ರಾಷ್ಟ್ರ ರಾಜಧಾನಿ ಹೆಸರು ದೆಹಲಿ ಅಲ್ಲ, ಅದು ಇಂದ್ರಪ್ರಸ್ಥ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಇಂದ್ರಪ್ರಸ್ಥ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಶಹಜಹಾನಬಾದ್ ಡೆವಲಪ್‌ಮೆಂಟ್ ಬೋರ್ಡ್ ಬದಲು ಇಂದ್ರಪ್ರಸ್ಥ ಡೆವಲಪ್‌ಮೆಂಟ್ ಬೋರ್ಡ್. ಹೀಗೆ ಸಾಲು ಸಾಲು ಹೆಸರುಗಳು ಮರುನಾಮಕರಣ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ದೆಹಲಿ ಸರ್ಕಾರಕ್ಕೆ ಪತ್ರ ಬರೆದಿದೆ. ಈ ಮರುನಾಮಕರಣಕ್ಕೆ ಒಂದಿಷ್ಟು ಕಾರಣಗಳನ್ನು ವಿಹೆಚ್‌ಪಿ ನೀಡಿದೆ. ಯಾವೆಲ್ಲಾ ಹೆಸರು ಬದಲಾವಣೆಯಾಗಬೇಕು, ಹೊಸ ಹೆಸರು ಯಾವುದು ಅನ್ನೋ ಕುರಿತು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ದೆಹಲಿ ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾಗೆ ಸಲ್ಲಿಕೆ ಮಾಡಿರುವ ಈ ಪತ್ರ ಇದೀಗ ಬಾರಿ ಸಂಚಲನ ಸೃಷ್ಟಿಸಿದೆ.

Add Asianetnews Kannada as a Preferred SourcegooglePreferred

ಇಂದ್ರಪಸ್ಥ ಹೆಸರಿಗೆ 5000 ವರ್ಷಗಳ ಇತಿಹಾಸವಿದೆ

ವಿಶ್ವ ಹಿಂದೂ ಪರಿಷತ್ ದೆಹಲಿ ಪ್ರಾಂತ ಕಾರ್ಯದರ್ಶಿ ಸುರೇಂದ್ರ ಕುಮಾರ್ ಗುಪ್ತ, ದೆಹಲಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಿಂದೂ ಪುರಾಣ, ಮಹಾಭಾರತದಲ್ಲಿ ದೆಹಲಿ ಪ್ರಮುಖ ಸ್ಥಳವಾಗಿತ್ತು. ದಾಳಿಕೋರರಿಂದ ದೆಹಲಿ ಎಂಬ ಹೆಸರು ಬಂತು. ಮಹಾಭಾರತದಲ್ಲಿ ದೆಹಲಿ ಇಂದ್ರಪ್ರಸ್ಥವಾಗಿತ್ತು. ದೆಹಲಿ ಎಂದರೆ ಸರಿಸುಮಾರು 2,000 ವರ್ಷಗಳ ಇತಿಹಾಸ ಸಿಗುತ್ತದೆ. ಆದರೆ ಇಂದ್ರಪ್ರಸ್ಥ ಹೆಸರಿಗೆ 5,000 ವರ್ಷಗಳ ಇತಿಹಾಸವಿದೆ ಎಂದು ಸುರೇಂದ್ರ ಕುಮಾರ್ ಗುಪ್ತ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇಂದ್ರಪ್ರಸ್ಥ ಹೆಸರು ಮಹಾಭಾರತವನ್ನು ಕನೆಕೆಟ್ ಮಾಡಲಿದೆ ಎಂದಿದ್ದಾರೆ.

ದೆಹಲಿ ಐತಿಹಾಸಿಕ ಗತವೈಭವ ಮರುಕಳಿಸಬೇಕು

ವಿಶ್ವ ಹಿಂದೂ ಪರಿಷತ್ ಪತ್ರದಲ್ಲಿ ಹೆಸರು ಬದಲಿಸಲು ಕಾರಣಗಳನ್ನು ಸೂಚಿಸಿದ್ದಾರೆ. ಮಹಾಭಾರತ ಕಾಲದಲ್ಲಿ ಇಂದ್ರಪ್ರಸ್ಥ (ಈಗಿನ ದೆಹಲಿ ) ನಳನಳಿಸುತ್ತಿತ್ತು. ಹಿಂದೂ ರಾಜರು ದೇವಸ್ಥಾನ, ಕೋಟೆಗಳಿಂದ ಸುತ್ತುವರಿದ ಪ್ರದೇಶವಾಗಿತ್ತು. ಆದರೆ ಈ ಇತಿಹಾಸ ಮರೆಮಾಚಿ ಇದೀಗ ದಾಳಿಕೋರರ ಇತಿಹಾಸವನ್ನೇ ಎಲ್ಲೆಡೆ ಪ್ರದರ್ಶಿಸಲಾಗಿದೆ. ಇಂದ್ರಪ್ರಸ್ಥ ನೈಜ ಇತಿಹಾಸವನ್ನು ಮರೆಮಾಚಿ ದಾಳಿಕೋರರ ಇತಿಹಾಸ, ಅವರ ಹೆಸರು, ಅವರ ಸಾಧನೆಗಳನ್ನೇ ಹೇಳುವ ಪ್ರಯತ್ನ ಮಾಡಲಾಗಿದೆ. ಇದರಿಂದ ದೆಹಲಿಯ ಅಸಲಿ ಇತಿಹಾಸ ಹುದುಗಿಹೋಗಿದೆ. ಮುಸ್ಲಿಮ್ ದಾಳಿಕೋರರಿಂದ ನಶಿಸಿರುವ ಹಿಂದೂ ಪುರಾಣ ಸ್ಥಳಗಳನ್ನು ಮತ್ತೆ ವೈಭವದಿಂದ ಕಟ್ಟಬೇಕು. ದೆಹಲಿ ಅಲ್ಲ ಇಂದ್ರಪ್ರಸ್ಥ ನಮ್ಮ ಅಸ್ಮಿತೆಯ ಭಾಗ. ನಮ್ಮ ಇತಿಹಾಸ, ಪರಂಪರೆಯ ಬಾಗ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜಾ ಹೇಮಚಂದ್ರ ವಿಕ್ರಮಾದಿತ್ಯನ ಹೆಸರಿನಲ್ಲಿ ಮೆಮೋರಿಯಲ್, ರಾಜಾ ವಿಕ್ರಮಾದಿತ್ಯ ಮಿಲಿಟರಿ ಶಾಲೆಗಳು ಆರಂಭಿಸಬೇಕು. ರಾಜಾ ವಿಕ್ರಮಾದಿತ್ಯ ಹಾಗೂ ಇಂದ್ರಪ್ರಸ್ಥನ ಸಂಬಂಧ ಪಾಂಡವರ ಕಾಲದಿಂದ ಇದೆ. ಆದರೆ ದಾಳಿಗಳಿಂದ, ಬಳಿಕ ನಮ್ಮ ತಪ್ಪುಗಳಿಂದ ಇತಿಹಾಸ ಮರೆತು ದಾಳಿಕೋರರ ವಿಜ್ರಂಭವಿಸುವ ಇತಿಹಾಸ ಸೃಷ್ಟಿಸಲಾಗಿದೆ. ಈ ಪತ್ರವನ್ನು ದೆಹಲಿಯ ಇತಿಹಾಸಕಾರರು, ಚಿಂತಕರು ಸೇರಿದಂತೆ ಹಲವರಲ ಚರ್ಚೆ ಬಳಿಕ ಬರೆದು ಕಳುಹಿಸಲಾಗಿದೆ. ದಯವಿಟ್ಟು ಈ ಮನವಿ ಸ್ವೀಕರಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ದೆಹಲಿಯಲ್ಲಿ ಇದೀಗ ಮರುನಾಮಕರಣ ಚರ್ಚೆ

ಮರನಾಮಕರಣ ಚರ್ಚೆ ಭಾರತದಲ್ಲಿ ಹೊಸದೇನಲ್ಲ. ಭಾರಿ ವಿವಾದಗಳು ಸೃಷ್ಟಿಯಾಗಿದೆ. ಇದೀಗ ದೆಹಲಿಯಲ್ಲಿ ಮರುನಾಮಕರಣ ಚರ್ಚೆ ಜೋರಾಗುತ್ತಿದೆ. ಪರ ವಿರೋಧಗಳು ವ್ಯಕ್ತವಾಗುತ್ತಿದೆ.