ಜನಗಣತಿ ಕೆಲಸಕ್ಕೆ ಹೋಗಲ್ಲ ಎಂದರೆ 3 ತಿಂಗಳು ಜೈಲು!| ಸರ್ಕಾರಿ ನೌಕರರೇ ಹುಷಾರ್‌| ಕಾಯ್ದೆಯಲ್ಲಿದೆ ಅವಕಾಶ

ನವದೆಹಲಿ[ಜ.05]: ಸರ್ಕಾರಿ ಅಧಿಕಾರಿಗಳೇ ಹುಷಾರ್‌. ಒಂದು ವೇಳೆ ನೀವು ಜನಗಣತಿ ಹಾಗೂ ಎನ್‌ಪಿಆರ್‌ಗೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೇ ಇದ್ದರೆ ಜೈಲಿಗೆ ಹೋಗಬೇಕಾಗಿ ಬಂದೀತು. ಇಂಥದ್ದೊಂದು ಕ್ರಮಕ್ಕೆ ಕಾಯ್ದೆಯಲ್ಲಿ ಅವಕಾಶ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಷ್ಟ್ರೀಯ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಕೈಗೊಳ್ಳುವ ಜನಗಣತಿ ಆಯುಕ್ತ ಮತ್ತು ನಾಗರಿಕ ನೋಂದಣಿಯ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಸೂಕ್ತ ಸಹಕಾರ ನೀಡುವುದು ಕಡ್ಡಾಯವಾಗಿದೆ. ಒಂದು ವೇಳೆ ಗಣತಿ ಕೆಲಸಕ್ಕೆ ಹೋಗಲು ನಿರಾಕರಿಸಿದರೆ ಭಾರತೀಯ ಜನಗಣತಿ ಕಾಯ್ದೆ ಮತ್ತು ಪೌರತ್ವ ನಿಯಮಾವಳಿಯ ಪ್ರಕಾರ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಭಾರತೀಯ ಜನಗಣತಿ ನಿಯಮದ ಪ್ರಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಜನಗಣತಿ ಕೈಗೊಳ್ಳಬೇಕು. ಅದಕ್ಕಾಗಿ ಅವರು ಪ್ರಧಾನ ಜನಗಣತಿ ಅಧಿಕಾರಿ, ಜಿಲ್ಲಾ ಮತ್ತು ಉಪ ಜಿಲ್ಲಾ ಜನಗಣತಿ ಅಧಿಕಾರಿ, ಮೇಲ್ವಿಚಾರಕರು ಮತ್ತು ಎಣಿಕೆಗಾರರನ್ನು ನೇಮಿಸಬೇಕು.

ಒಂದು ವೇಳೆ ಜನಗಣತಿ ಕೈಗೊಳ್ಳಲು ಸರ್ಕಾರದ ಅಥವಾ ಇತರ ಯಾವುದೇ ಸಿಬ್ಬಂದಿ ಸಹಕಾರ ನೀಡದೇ ಇದ್ದ ಪಕ್ಷದಲ್ಲಿ ಅಂಥವರಿಗೆ ಜನಗಣತಿ ಕಾಯ್ದೆಯ ಸೆಕ್ಷನ್‌ 11ರ ಅಡಿಯಲ್ಲಿ ಮೂರು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಅದೇ ರೀತಿ ಎನ್‌ಪಿಆರ್‌ ಪ್ರಕ್ರಿಯೆಗೆ ಅಡ್ಡಿ ಪಡಿಸಿದರೆ 1 ಲಕ್ಷ ರು. ವರೆಗೂ ದಂಡ ವಿಧಿಸಬಹುದಾಗಿದೆ. ಅಲ್ಲದೇ ತಪ್ಪು ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.