ಸುಧಾರಣೆಯಿಂದಾಗಿ ವಿಶ್ವಮಟ್ಟದಲ್ಲಿ ಭಾರತಕ್ಕೆ ಹೊಸ ಇಮೇಜ್!
ಸುಧಾರಣೆಯಿಂದಾಗಿ ವಿಶ್ವಮಟ್ಟದಲ್ಲಿ ಭಾರತಕ್ಕೆ ಹೊಸ ಇಮೇಜ್| ಹಿಂದೆಲ್ಲಾ ಭಾರತದಲ್ಲೇಕೆ ಹೂಡಿಕೆ ಮಾಡಬೇಕು ಎನ್ನುತ್ತಿದ್ದರು| ಈಗ ಭಾರತದಲ್ಲೇಕೆ ಹೂಡಿಕೆ ಮಾಡಬಾರದೆಂಬ ಆಸಕ್ತಿ ಇದೆ| ನಮ್ಮ ಸರ್ಕಾರ ಸುಧಾರಣೆಯಿಂದ ಹೊಸ ಪರಿಕಲ್ಪನೆ: ಮೋದಿ| ಕೃಷಿ ಸುಧಾರಣೆಗಳು ರೈತರಿಗೆ ಫಲ ಕೊಡಲಾರಂಭಿಸಿವೆ: ಪ್ರಧಾನಿ
ನವದೆಹಲಿ(ಡಿ.20): ಕೇಂದ್ರ ಸರ್ಕಾರ ಕಳೆದ 6 ವರ್ಷಗಳ ಅವಧಿಯಲ್ಲಿ ಕೈಗೊಂಡ ಹಲವು ಸುಧಾರಣೆಗಳಿಂದಾಗಿ ಭಾರತದ ಬಗೆಗಿನ ಜಾಗತಿಕ ಪರಿಕಲ್ಪನೆಯೇ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 6 ತಿಂಗಳ ಹಿಂದೆ ಜಾರಿಗೊಳಿಸಿದ ಕೃಷಿ ಸುಧಾರಣೆಗಳು ರೈತರಿಗೆ ಫಲ ನೀಡಲು ಆರಂಭಿಸಿವೆ ಎಂದೂ ತಿಳಿಸಿದ್ದಾರೆ.
ಕೈಗಾರಿಕಾ ಸಂಸ್ಥೆ ಅಸೋಚಾಮ್ನ ಸಂಸ್ಥಾಪನಾ ಸಪ್ತಾಹದಲ್ಲಿ ಮಾತನಾಡಿದ ಅವರು, ಭಾರತದಲ್ಲೇಕೆ ಹೂಡಿಕೆ ಮಾಡಬೇಕು ಎಂದು ಹಿಂದೆಲ್ಲಾ ಉದ್ಯಮಿಗಳು ಪ್ರಶ್ನಿಸುತ್ತಿದ್ದರು. ಆದರೆ ಕಳೆದ 6 ವರ್ಷಗಳಲ್ಲಿ ಸರ್ಕಾರ ಕೈಗೊಂಡ ಸುಧಾರಣೆಗಳ ಪರಿಣಾಮವಾಗಿ ಭಾರತದಲ್ಲಿ ಏಕೆ ಹೂಡಬಾರದು ಎಂದು ಕೇಳುವಂತಾಗಿದೆ. 1500 ಹಳೆಯ, ನಿಷ್ಕಿ್ರಯ ಕಾಯ್ದೆಗಳನ್ನು ರದ್ದುಗೊಳಿಸಿದ್ದೇವೆ. ಬದಲಾದ ಹೂಡಿಕೆ ವ್ಯವಸ್ಥೆಗೆ ತಕ್ಕಂತೆ ಹೊಸ ಕಾಯ್ದೆಗಳನ್ನು ರೂಪಿಸಿದ್ದೇವೆ ಎಂದು ಹೇಳಿದರು.
ಭಾರತದಲ್ಲಿ ದುಬಾರಿ ತೆರಿಗೆ ಇದ್ದ ಕಾರಣಕ್ಕೆ ಅಲ್ಲೇಕೆ ಹೂಡಿಕೆ ಮಾಡಬೇಕು ಎಂದು ಹೂಡಿಕೆದಾರರು ಕಾರಣ ನೀಡುತ್ತಿದ್ದರು. ಆದರೆ ಈಗ ಸ್ಪರ್ಧಾತ್ಮಕ ತೆರಿಗೆ ದರವಿರುವುದರಿಂದ ಹೂಡಿಕೆ ಏಕೆ ಮಾಡಬಾರದು ಎನ್ನುತ್ತಿದ್ದಾರೆ. ಮೊದಲೆಲ್ಲಾ ಹೂಡಿಕೆದಾರರಿಗೆ ಕೆಂಪುಪಟ್ಟಿಎದುರಾಗುತ್ತಿತ್ತು. ಆದರೆ ಈಗ ಕೆಂಪಹಾಸಿನ ಸ್ವಾಗತ ಕೋರಲಾಗುತ್ತಿದೆ. ಹಿಂದೆಲ್ಲಾ ಸರ್ಕಾರದ ಮಧ್ಯಪ್ರವೇಶ ಹೆಚ್ಚಿತ್ತು. ಆದರೆ ಸರ್ಕಾರದ ಮೇಲೆ ಖಾಸಗಿ ವಲಯ ವಿಶ್ವಾಸವಿರಿಸಿದೆ. ಹೀಗಾಗಿ ಭಾರತದಲ್ಲೇಕೆ ಹೂಡಿಕೆ ಮಾಡಬಾರದು ಎಂಬ ಪರಿಕಲ್ಪನೆ ಬಂದಿದೆ ಎಂದು ಹೇಳಿದರು.