Asianet Suvarna News Asianet Suvarna News

ದೋವಲ್‌ ಕಚೇರಿ ದೃಶ್ಯ ಪಾಕ್‌ಗೆ ಕಳಿಸಿದ್ದ ಉಗ್ರ!

ದೋವಲ್‌ ಕಚೇರಿ ದೃಶ್ಯ ಪಾಕ್‌ಗೆ ಕಳಿಸಿದ್ದ ಉಗ್ರ!| ಭದ್ರತಾ ಸಲಹೆಗಾರರ ಕಚೇರಿ ಚಿತ್ರೀಕರಣ| ಬಳಿಕ ಪಾಕ್‌ಗೆ ರವಾನೆ: ಬಾಯ್ಬಿಟ್ಟಜೈಷ್‌ ಉಗ್ರ

Recced his office Jaish terrorist reveals Pak plan to target NSA Ajit Doval pod
Author
Bangalore, First Published Feb 14, 2021, 7:37 AM IST

ನವದೆಹಲಿ(ಫೆ.14): ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಉಗ್ರನೊಬ್ಬ ಪಾಕಿಸ್ತಾನದ ತನ್ನ ನಿರ್ವಾಹಕರ ಸೂಚನೆಯಂತೆ ದೆಹಲಿಯಲ್ಲಿ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್‌ ದೋವಲ್‌ ಅವರ ಕಚೇರಿ ಮತ್ತು ಇತರ ಸೂಕ್ಷ್ಮ ಸ್ಥಳಗಳಿಗೆ ಭೇಟಿ ನೀಡಿ ವಿಡಿಯೋ ಚಿತ್ರೀಕರಣ ನಡೆಸಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ. ಫೆ.6ರಂದು ಬಂಧಿತನಾಗಿದ್ದ ಜಮ್ಮು-ಕಾಶ್ಮೀರದ ಶೋಪಿಯಾನ್‌ ಮೂಲದ ಉಗ್ರ ಹಿದಾಯತ್‌ ಉಲ್ಲಾ ಮಲಿಕ್‌ ಎಂಬಾತ ವಿಚಾರಣೆ ವೇಳೆ ಈ ಮಾಹಿತಿ ಬಹಿರಂಗಪಡಿಸಿದ್ದಾನೆ.

ಇದು 2016ರ ಉರಿ ಸರ್ಜಿಕಲ್‌ ದಾಳಿ ಮತ್ತು 2019ರ ಬಾಲಾಕೋಟ್‌ ದಾಳಿಯ ಪ್ರಮುಖ ರೂವಾರಿಯಾಗಿರುವ ದೋವಲ್‌ ಅವರ ಹತ್ಯೆಗೆ ಪಾಕ್‌ ನಡೆಸಿದ ಸಂಚಿನ ಭಾಗವಾಗಿರಬಹುದು ಎಂಬ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಅಜಿತ್‌ ದೋವಲ್‌ ಅವರ ಕಚೇರಿ ಮತ್ತು ಮನೆಗೆ ನೀಡಲಾಗಿದ್ದ ಭದ್ರತೆಯನ್ನು ಮತ್ತಷ್ಟುಬಿಗಿಗೊಳಿಸಲಾಗಿದೆ.

ಬಂಧಿತ ಉಗ್ರನ ಮಲಿಕ್‌, ದೋವಲ್‌ ಮೇಲಿನ ದಾಳಿಯ ಸಂಚು ಮಾತ್ರವಲ್ಲದೇ 2020ರಲ್ಲಿ ನಡೆದ ಪುಲ್ವಾಮಾ ಮಾದರಿಯ ದಾಳಿಯ ವಿಫಲ ಯತ್ನ, ಬ್ಯಾಂಕ್‌ ಮೇಲೆ ದಾಳಿ ನಡೆಸಿ ಹಣ ಲೂಟಿದ ಮಾಡಿದ ಪ್ರಕರಣ ಸಂಚಿನಲ್ಲೂ ಭಾಗಿಯಾಗಿದ್ದ ಎಂಬುದು ಬೆಳಕಿಗೆ ಬಂದಿದೆ.

ದೋವಲ್‌ ಮೇಲೆ ಕಣ್ಣು:

‘ಪಾಕಿಸ್ತಾನದಲ್ಲಿನ ಕೆಲ ವ್ಯಕ್ತಿಗಳ ಸೂಚನೆಯಂತೆ 2019ರ ಮೇ 24ರಂದು ನಾನು ಶ್ರೀನಗರದಿಂದ ದೆಹಲಿಗೆ ವಿಮಾನದಲ್ಲಿ ಆಗಮಿಸಿದ್ದೆ. ಬಳಿಕ ದೋವಲ್‌ ಅವರ ಕಚೇರಿ ಸ್ಥಳದ ವಿಡಿಯೋ ಚಿತ್ರೀಕರಣ ಮಾಡಿದ್ದೆ. ಜೊತೆಗೆ ಅವರ ಕಚೇರಿಗೆ ಒದಗಿಸಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌)ಗಳ ನಿಯೋಜನೆ ಕುರಿತೂ ವಿಡಿಯೋ ಮಾಡಿ ಅದನ್ನು ವಾಟ್ಸಾಪ್‌ ಮೂಲಕ ಪಾಕಿಸ್ತಾನ ಮೂಲದ ‘ಡಾಕ್ಟರ್‌’ಗೆ ಕಳುಹಿಸಿಕೊಟ್ಟಿದ್ದೆ’ ಎಂದು ಮಲಿಕ್‌ ಮಾಹಿತಿ ನೀಡಿದ್ದಾನೆ ಎಂದು ಮೂಲಗಳು ಹೇಳಿವೆ.

ಹಲವು ರಹಸ್ಯ ಬಯಲು:

ದೋವಲ್‌ ಕುರಿತ ಮಾಹಿತಿಯ ಜೊತೆಜೊತೆಗೇ ಪಾಕಿಸ್ತಾನದಲ್ಲಿ ತಾನು ಸಂಪರ್ಕದಲ್ಲಿ ಇದ್ದ 10 ಮಂದಿಯ ಹೆಸರು, ಅವರ ಕೋಡ್‌ನೇಮ್‌ ಮತ್ತು ಫೋನ್‌ನಂಬರ್‌ಗಳನ್ನು ಹಿದಾಯತ್‌ ಬಹಿರಂಗಪಡಿಸಿದ್ದಾನೆ ಎಂದು ತಿಳಿದುಬಂದಿದೆ.

ಇತರ ಕೃತ್ಯಗಳು:

‘ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಸಮೀರ್‌ ಅಹಮದ್‌ ದಾರ್‌ ಜೊತೆಗೂಡಿ 2019ರಲ್ಲಿ ನಾನು ಸಾಂಬಾ ವಲಯದಲ್ಲಿನ ಗಡಿ ಪ್ರದೇಶದ ಕುರಿತು ಬೇಹುಗಾರಿಕೆ ನಡೆಸಿ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದೆ. 2020ರ ಮೇ ತಿಂಗಳಲ್ಲಿ ಸ್ಯಾಂಟ್ರೋ ಕಾರು ಬಳಸಿ ನಡೆಸಿದ ಪುಲ್ವಾಮಾ ಮಾದರಿ ದಾಳಿಯ ವಿಫಲ ಯತ್ನಕ್ಕೆ ಕಾರು ನೀಡಿದ್ದೆ ಮತ್ತು 2020ರ ನವೆಂಬರ್‌ನಲ್ಲಿ ಶೋಪಿಯಾನ್‌ನ ಬ್ಯಾಂಕೊಂದರಿಂದ 60 ಲಕ್ಷ ರು. ದರೋಡೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದೆ’ ಎಂದು ವಿಚಾರಣೆ ವೇಳೆ ಹಿದಾಯತ್‌ ಮಲಿಕ್‌ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

Follow Us:
Download App:
  • android
  • ios