ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ದಿನ ಮುಂಬೈನ ಮೀರಾ ರಸ್ತೆಯಲ್ಲಿ ಅನ್ಯಕೋಮಿನ ಗುಂಪು ಶ್ರೀರಾಮ ಶೋಭಯಾತ್ರೆ ಮೇಲೆ ಭೀಕರ ದಾಳಿ ನಡೆಸಿತ್ತು. ಮರುದಿನವೇ ಸರ್ಕಾರ ಮೀರಾ ರಸ್ತೆಯ ಅಕ್ರಮ ಕಟ್ಟಡ ನೆಲೆಸಮಗೊಳಿಸಿತ್ತು. ಇದೀಗ ಮೊಹಮ್ಮದ್ ಅಲಿ ರಸ್ತೆಯ 40ಕ್ಕೂ ಹೆಚ್ಚು ಅಕ್ರಮ ಕಟ್ಟಡ ನೆಲಸಮಗೊಂಡಿದೆ.  

ಮುಂಬೈ(ಜ.25) ಆಯೋಧ್ಯೆ ಭವ್ಯ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠೆ ದಿನ ಕೆಲ ವಲಯದಲ್ಲಿ ಅಹಿತರ ಘಟನೆ ನಡೆದಿದೆ. ಈ ಪೈಕಿ ಮುಂಬೈನ ಮೀರಾ ರಸ್ತೆ ಮೂಲಕ ಸಾಗುತ್ತಿದ್ದ ಶ್ರೀರಾಮ ಶೋಭಯಾತ್ರೆ ಮೇಲೆ ಅನ್ಯಕೋಮಿನ ಭೀಕರ ದಾಳಿ ನಡೆದಿತ್ತು. ಹಲವರು ಗಾಯಗೊಂಡಿದ್ದರೆ, ವಾಹನಗಳು ಜಖಂಗೊಂಡಿತ್ತು. ಈ ದಾಳಿಗೆ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಆದರೆ ಮರುದಿನ ಕಾರ್ಯಪ್ರವೃತ್ತಗೊಂಡ ಸರ್ಕಾರ, 12ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿತ್ತು. ದಾಳಿ ನಡೆದ ಮೀರಾ ರಸ್ತೆಯಲ್ಲಿನ ಅಕ್ರಮ ಕಟ್ಟಡಗಳು, ಅಂಗಡಿ ಮುಂಗಟ್ಟುಗಳನ್ನು ಬುಲ್ಡೋಜರ್ ಮೂಲಕ ಕೆಡವಲಾಗಿತ್ತು. ಇದೀಗ ಮೊಹಮ್ಮದ್ ಆಲಿ ರಸ್ತೆಯಲ್ಲಿನ 40ಕ್ಕೂ ಹೆಚ್ಚು ಆಕ್ರಮ ಕಟ್ಟಡವನ್ನು ಕೆಡವಲಾಗಿದೆ.

Add Asianetnews Kannada as a Preferred SourcegooglePreferred

ಮೀರಾ ರಸ್ತೆಯಲ್ಲಿ ಶ್ರೀರಾಮ ಶೋಭಯಾತ್ರೆ ಮೇಲೆ ನಡೆದ ಭೀಕರ ದಾಳಿಯಲ್ಲಿ ಬಂಧಿಸಲ್ಪಟ್ಟ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಈ ವೇಳೆ ಆರೋಪಿಗಳು ಪೂರ್ವನಿಯೋಜಿತವಾಗಿ ದಾಳಿಗೆ ಸಜ್ಜಾಗಿರುವ ಮಾಹಿತಿಗಳು ಬಹರಂಗವಾಗಿದೆ. ಮೀರಾ ರಸ್ತೆ ಹಾಗೂ ಮೊಹಮ್ಮದ್ ಅಲಿ ರಸ್ತೆಯ ಗುಂಪು ಈ ದಾಳಿಯಲ್ಲಿ ಪಾಲ್ಗೊಂಡ ಮಾಹಿತಿ ಬಹಿರಂಗವಾಗಿದೆ. ಕಾರ್ಯಾಚರಣೆ ಮುಂದುವರಿಸಿದ ಸರ್ಕಾರ, ಮೀರಾ ರಸ್ತೆ ಬಳಿಕ ಮೊಹಮ್ಮದ್ ಅಲಿ ರಸ್ತೆಯಲ್ಲಿ ಬುಲ್ಡೋಜರ್ ಹತ್ತಿಸಿದೆ.

ಶ್ರೀರಾಮ ರ‍್ಯಾಲಿ ಮೇಲೆ ದಾಳಿ ನಡೆದ ರಸ್ತೆಯಲ್ಲಿ ಬುಲ್ಡೋಜರ್ ಘರ್ಜನೆ, ಅಕ್ರಮ ಕಟ್ಟಡ ನೆಲಸಮ!

ಮೊಹಮ್ಮದ್ ಅಲಿ ರಸ್ತೆಯ ಪಾದಾಚಾರಿ ರಸ್ತೆಗಳ ಮೇಲೆ ಕಟ್ಟಡ, ಅಂಗಡಿ ಮುಂಗಟ್ಟು ಕಟ್ಟಲಾಗಿದೆ. ಅಕ್ರಮವಾಗಿ ಕಟ್ಟಿರುವ 40ಕ್ಕೂ ಹೆಚ್ಚು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಅಕ್ರಮ ಕಟ್ಟಡಗಳ ತೆರವಿಗೆ ಡಿಸೆಂಬರ್‌ನಿಂದ ಮುನ್ಸಿಪಲ್ ಪ್ರಯತ್ನ ನಡೆಸುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಈಗ ನೆಲಸಮಗೊಂಡಿರುವ ಎಲ್ಲಾ ಕಟ್ಟಡ ಮಾಲೀಕರಿಗೆ, ಅಂಗಡಿ ಮುಂಗಟ್ಟುಗಳಿಗೆ ನೋಟಿಸ್ ನೀಡಲಾಗಿದೆ. ಮೀರಾ ರಸ್ತೆ ಹಾಗೂ ಅಲಿ ರಸ್ತೆಯಲ್ಲಿರುವ ಅಕ್ರಮ ಕಟ್ಟಡಗಳನ್ನು ನೆಲಮಸಗೊಳಿಸಲಾಗಿದೆ. ಇದರಲ್ಲಿ ಧರ್ಮವನ್ನು ತರುವ ಅಗತ್ಯವಿಲ್ಲ ಎಂದಿದ್ದಾರೆ. ಧರ್ಮದ ಆಧಾರದಲ್ಲಿ ಯಾವ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮುನ್ಸಿಪಲ್ ಕಾರ್ಪೋರೇಶನ್ ಸ್ಪಷ್ಟಪಡಿಸಿದೆ.

ಮುನ್ಸಿಪಲ್ ಕಾರ್ಪೋರೇಶನ್ ಹಾಗೂ ಮಹಾರಾಷ್ಟ್ರ ಸರ್ಕಾರದ ನಡೆಯನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿದೆ. ಬಲ್ಡೋಜರ್ ಕ್ರಮದಲ್ಲಿ ಸರ್ಕಾರ ಹಿತಾಸಕ್ತಿ ಎದ್ದುಕಾಣುತ್ತಿದೆ. ಅಲ್ಪಸಂಖ್ಯಾತ ಸಮುದಾಯ ಟಾರ್ಗೆಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಅತುಲ್ ಲೊಂಧೆ ಹೇಳಿದ್ದಾರೆ. ಲೀಗಲ್ ನೋಟಿಸ್ ನೀಡಿ ಇಂತಿಷ್ಟು ಸಮಯ ನೀಡಬೇಕು. ಕಟ್ಟಡ ಮಾಲೀಕರಿಗೆ ಕಾನೂನು ಅವಕಾಶಗಳನ್ನು ಬಳಸಿಕೊಳ್ಳುವ ಹಕ್ಕಿದೆ.ಆದರೆ ಸರ್ಕಾರ ಇದ್ಯಾವುದನ್ನು ಪರಿಗಣಿಸದೆ ದಾಳಿ ಮಾಡಿದೆ ಎಂದು ಆರೋಪಿಸಿದೆ.

ಶ್ರೀರಾಮ ಶೋಭಯಾತ್ರೆ ಮೇಲೆ ಅನ್ಯಕೋಮಿನಿಂದ ಭೀಕರ ದಾಳಿ;ಕಾರು ಜಖಂ, ಹಲವರಿಗೆ ಗಾಯ!