ಛತ್ತೀಸ್‌ಗಢದ ರಾಯ್‌ಪುರ್‌ದಲ್ಲಿರುವ ಗೋಕುಲರಾಮ್‌ ವರ್ಮಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯೋರ್ವರು ಪ್ರತಿ ಶನಿವಾರ ಮಕ್ಕಳಂತೆ ಶಾಲಾ ಸಮವಸ್ತ್ರ ಧರಿಸಿ ಬಂದು ಪಾಠ ಮಾಡುತ್ತಾರೆ.

ರಾಯ್‌ಪುರ್‌: ಛತ್ತೀಸ್‌ಗಢದ ರಾಯ್‌ಪುರ್‌ದಲ್ಲಿರುವ ಗೋಕುಲರಾಮ್‌ ವರ್ಮಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯೋರ್ವರು ಪ್ರತಿ ಶನಿವಾರ ಮಕ್ಕಳಂತೆ ಶಾಲಾ ಸಮವಸ್ತ್ರ ಧರಿಸಿ ಬಂದು ಪಾಠ ಮಾಡುವ ಅಪರೂಪ ನಡೆಯುತ್ತದೆ. ಸಮವಸ್ತ್ರವನ್ನು ಚೆನ್ನಾಗಿ, ಸರಿಯಾಗಿ ಧರಿಸುವುದನ್ನು ಪ್ರೇರೇಪಿಸಲು, ಮಕ್ಕಳೊಂದಿಗಿನ ತನ್ನ ಒಡನಾಟವನ್ನು ಸುಧಾರಿಸಲು ಶಿಕ್ಷಕಿ ಜಾಹ್ನವಿ ಯದು (30) ಎಂಬುವವರು ಪ್ರತಿ ಶನಿವಾರ ಸಮವಸ್ತ್ರ ಧರಿಸಿಯೇ ಶಾಲೆಗೆ ಬರುತ್ತಾರೆ. ಬಹುಷಃ ದೇಶದಲ್ಲಿ ಇಂಥದ್ದೊಂದು ಅಪರೂಪದ ಸಂಗತಿ ನಡೆಯುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಶಿಕ್ಷಕಿ ಜಾಹ್ನವಿ (Jahnavi) ‘ಹಲವು ವಿದ್ಯಾರ್ಥಿಗಳು ಶಾಲೆಗಳಿಗೆ ಖಾಲಿ ಹೊಟ್ಟೆಯಲ್ಲಿ ಬರುತ್ತಾರೆ. ಅವರು ಸಾಮಾನ್ಯವಾಗಿ ಕೊಳೆಯಾದ ಸಮವಸ್ತ್ರ ಧರಿಸಿ ಬರುತ್ತಾರೆ. ಇದನ್ನು ಸರಿಪಡಿಸಲು ಸೂಕ್ಷ್ಮ ಮತ್ತು ಸ್ನೇಹಪರ ಪರಿಹಾರ ಹುಡುಕಿದೆ. ಮಕ್ಕಳು ಉತ್ತಮವಾದ ಸಮವಸ್ತ್ರ (Uniform) ಧರಿಸುವುದನ್ನು ಪ್ರೇರೇಪಿಸಲು ಈ ಶೈಕ್ಷಣಿಕ ವರ್ಷದಿಂದ ಪ್ರತಿ ಶನಿವಾರ ಸಮವಸ್ತ್ರ ಧರಿಸಿ ಶಾಲೆಗೆ ಬರಲು ಪ್ರಾರಂಭಿಸಿದ್ದೇನೆ’ ಎಂದರು.

ನನ್ನನ್ನು ಸ್ನೇಹಿತೆ ರೀತಿ ಕಾಣುತ್ತಾರೆ

ಮೊದಲ ಬಾರಿ ನಾನು ಸಮವಸ್ತ್ರ ಧರಿಸಿ ಬಂದ ದಿನ ಮರೆಯಲು ಸಾಧ್ಯವಿಲ್ಲ. ಮಕ್ಕಳು ಆ ದಿನ ರೋಮಾಂಚನಗೊಂಡು ನನ್ನನ್ನು ತಬ್ಬಿಕೊಂಡರು. ನಾವೆಲ್ಲ ಸೇರಿ ಸರಿಯಾಗಿ ಸಮವಸ್ತ್ರ ಧರಿಸಿದರೆ ಎಷ್ಟು ಚೆನ್ನಾಗಿರುತ್ತದೆ ನೋಡಿ ಎಂದೆ. ಅಂದಿನಿಂದ ಮಕ್ಕಳಲ್ಲಿ ಗಮನಾರ್ಹ ಸಕಾರಾತ್ಮಕ ಬದಲಾವಣೆಗಳಾಗಿದೆ. ಮಕ್ಕಳು ಈಗ ನನ್ನನ್ನು ಅವರ ಸ್ನೇಹಿತೆಯಂತೆ ಕಾಣುತ್ತಾರೆ ಎಂದು ಜಾಹ್ನವಿ ಸಂತಸ ವ್ಯಕ್ತಪಡಿಸಿದ್ದಾರೆ.

NCERT ಪಠ್ಯಪುಸ್ತಕ ಸಮಿತಿಯಲ್ಲಿ ಸುಧಾ ಮೂರ್ತಿ, ಶಂಕರ್‌ ಮಹದೇವನ್‌ಗೆ ಸ್ಥಾನ

ಇನ್ನು ಶಾಲೆಯ ಮುಖ್ಯೋಪಾಧ್ಯಾಯ ಎಂ.ಗುರುನಾಥ್‌ (M. Gurunath) ಜಾಹ್ನವಿ ಟೀಚರ್‌ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದು, ಮಕ್ಕಳಲ್ಲೀಗ ಆತ್ಮವಿಶ್ವಾಸ ಹೆಚ್ಚಾಗಿದೆ. ಓದುವಲ್ಲಿ ಹೆಚ್ಚು ಆಸಕ್ತಿ ತೋರಿಸಿದ್ದಾರೆ ಎಂದಿದ್ದಾರೆ. ಇನ್ನು ಸ್ಥಳೀಯ ವಾರ್ಡ್‌ ಕಾರ್ಪೋರೇಟರ್‌ ಭೋಲಾರಾಮ್‌ ಸಾಹು ಕೂಡ ಜಾಹ್ನವಿ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಇನ್ನು ತಮ್ಮ ಪ್ರೀತಿಯ ಜಾಹ್ನವಿ ಮೇಡಂ ಕುರಿತು ಮಾತನಾಡಿದ ವಿದ್ಯಾರ್ಥಿನಿ ಉಷಾ ಸಾಹು ಸ್ಕೂಲ್‌ ಬಟ್ಟೆಯಲ್ಲಿ ನಮ್ಮ ಟೀಚರ್‌ ನೋಡಿ ತುಂಬಾ ಖುಷಿಯಾಯಿತು ಎಂದಿದ್ದಾಳೆ.

ಆ.14ರೊಳಗೆ ಕರ್ನಾಟಕದಲ್ಲಿ 1300 ಅನಧಿಕೃತ ಶಾಲೆ ಬಂದ್‌