* ಕೇಂದ್ರಕ್ಕೆ ಶ್ವೇತ ಪತ್ರ ಹೊರಡಿಸಿದ ಕಾಂಗ್ರೆಸ್* ತಪ್ಪುಗಳನ್ನು ತೋರಿಸುವ ಉದ್ದೇಶವಲ್ಲ, ಸಹಾಯ ಮಾಡಲು ಶ್ವೇತ ಪತ್ರ ಹೊರಡಿಸಿದ್ದೇವೆ* ಮೋದಿ ಕಣ್ಣೀರು, ತಮ್ಮವರನ್ನು ಕಳೆದುಕೊಂಡವರ ದುಃಖ ಕಡಿಮೆ ಮಾಡಲ್ಲ ಎಂದ ರಾಹುಲ್ 

ನವದೆಹಲಿ(ಜೂ.22): ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೊರೋನಾ ಮೂರನೇ ಅಲೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ. ಕೊರೋನಾ ಬಗ್ಗೆ ಶ್ವೇತಪತ್ರ ಜಾರಿಗೊಳಿಸಿರುವ ರಾಹುಲ್ ಗಾಂಧಿ ಕೊರೋನಾದಿಂದ ದೇಶಕ್ಕೆಷ್ಟು ನೋವಾಗಿದೆ ಎಂದು ಈ ದೆಶದ ನಾಗರಿಕರಿಗೆ ತಿಳಿದಿದೆ. ಈ ಶ್ವೇತ ಪತ್ರ ನಾವು ವಿಸ್ಕೃತವಾಗಿ ತಯಾರಿಸಿದ್ದೇವೆ. ಇದು ತಪ್ಪು ತೋರಿಸುವ ಸಲುವಾಗಿ ತಯಾರಿಸಿಲ್ಲ ಬದಲಾಗಿ ಮುಂದಿನ ದಿನಗಳಲ್ಲಿ ಈ ತಪ್ಪು ಮರುಕಳಿಸದಂತೆ ಎಚ್ಚರವಹಿಸಲು, ಅಗತ್ಯವಾದ ತಯಾರಿ ನಡೆಸಲು ಇದನ್ನು ಹೊರಡಿಸುತ್ತಿದ್ದೇವೆ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲನೇ ಅಲೆ ದೇಶಕ್ಕೆ ದಾಳಿ ಇಟ್ಟ ಸಂದರ್ಭದಲ್ಲಿ ವಿಜ್ಞಾನಿಗಳು ಎರಡನೇ ಅಲೆ ದಾಳಿ ಇಡುವ ಬಗ್ಗೆ ಎಚ್ಚರಿಸಿದ್ದರು. ಆದರೆ ಸರ್ಕಾರ ಯಾವುದೇ ತಯಾರಿ ನಡೆಸಿರಲಿಲ್ಲ. ಇಂದಿಗೂ ಪರಿಸ್ಥಿತಿ ಬದಲಾಗಿಲ್ಲ. ಮೂರನೇ ಅಲೆ ದಾಳಿ ಇಡಲಿದೆ ಎಂಬ ವಿಚಾರ ಇಡೀ ವಿಶ್ವಕ್ಕೇ ತಿಳಿದಿದೆ. ಹೀಗಿರುವಾಗ ಈ ಮೂರನೇ ಅಲೆ ಎದುರಿಸಲು ಬೇಕಾದ ಸಿದ್ಧತೆ ಸರ್ಕಾರ ಈಗಲೇ ಆರಂಭಿಸಬೇಕು. ಮೊದಲ ಹಾಗೂ ಎರಡನೇ ಅಲೆ ದಾಳಿ ಇಟ್ಟ ವೇಳೆ ಆದ ಸಮಸ್ಯೆ ಮೂರನೇ ಅಲೆ ವೇಳೆ ಕಂಡು ಬರಬಾರದು, ಜನರು ಆಸಕ್ಇಜನ್ ಹಾಗೂ ಔಷಧಕ್ಕೆ ಪರದಾಡುವಂತೆ ಆಗಬಾರದೆಂಬುವುದೇ ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.

ಸರ್ಕಾರದ ವತಿಯಿಂದ ಬಡವರಿಗೆ ಆರ್ಥಿಕ ಸಹಾಯ ನೀಡಬೇಕು ಹಾಗೂ ಕೋರೋನಾದಿಂದ ಪ್ರಭಾವಿತಗೊಂಡ ಕುಟುಂಬಗಳಿಗೆ ಧನ ಸಹಾಯ ನೀಡಲು ಕೊರೋನಾ ವಿಪತ್ತು ನಿಧಿ ಸ್ಥಾಪಿಸಬೇಕು. ವೈರಸ್ ತನ್ನ ಸ್ವರೂಪ ಬದಲಿಸುತ್ತಿದೆ, ಮತ್ತಷ್ಟು ಶಕ್ತಿಶಾಲಿಯಾಆಗುತ್ತಿದೆ. ದೇಶಕ್ಕೆ ಕೊರೋನಾ ಮೂರನೇ ಅಲೆ ದಾಳಿ ಇಡುತ್ತದೆ ಎಂದು ಇಡೀ ದೇಶಕ್ಕೇ ತಿಳಿದಿದೆ. ಹೀಗಿರುವಾಗ ಇದನ್ನೆದುರಿಸಲು ಸೂಕ್ತ ತಯಾರಿ ನಡೆಸುವಂತೆ ನಾನು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಮೂರನೇ ಅಲೆಯ ಅಪಾಯವನ್ನರಿತರು ಸರ್ಕಾರ ಆಕ್ಸಿಜನ್ ಬೆಡ್‌ ಹಾಗೂ ಔಷಧ ಸೇರಿ ಇನ್ನಿತರ ಅಗತ್ಯಗಳಿಗೆ ಸಿದ್ಧತೆ ನಡೆಸಲಿ. ಇದೇ ವೇಳೆ ಲಸಿಕೆ ಅಭಿಯಾನ ಮತ್ತಷ್ಟು ವೇಗವಾಗಿ ನಡೆಸುವಂತೆಯೂ ಎಚ್ಚರಿಸಿದ್ದಾರೆ.

ಈ ವೈಟ್‌ ಪೇಪರ್‌ನಲ್ಲಿ ನಾಲ್ಕು ಪ್ರಮುಖ ವಿಚಾರಗಳನ್ನು ಕೇಂದ್ರೀಕರಿಸಿದ್ದೇವೆ. ಮೊದಲನೆಯದಾಗಿ ಮೂರನೇ ಅಲೆಗೆ ತಯಾರಿ, ಎರಡನೆಯದಾಗಿ ಬಡವರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ಸಹಾಯ ಒದಗಿಸುವುದು. ಮೂರನೆಯದಾಗಿ ಕೊರೋನಾ ವಿಪತ್ತು ನಿಧಿ ಸ್ಥಾಪನೆ ಹಾಗೂ ನಾಲ್ಕನೆಯದಾಗಿ ಮೊದಲ ಹಾಗೂ ಎರಡನೇ ದಾಳಿ ವೇಳೆ ನಡೆದ ತಪ್ಪುಗಳನ್ನರಿತು ಇದು ಮುಂದೆ ಮರುಕಳಿಸದಂತೆ ಎಚ್ಚರವಹಿಸುವ ಬಗ್ಗೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.