ಮೋದಿ ನೆನಪಿರಲಿ, ನನ್ನ ಕುಟುಂಬ ಭಾರತದ ಪ್ರಜಾಪ್ರಭುತ್ವಕ್ಕೆ ನೀರಲ್ಲ, ರಕ್ತ ಹಾಕಿ ಬೆಳೆಸಿದೆ: ಪ್ರಿಯಾಂಕಾ ವಾದ್ರಾ!
ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಬೆನ್ನಲ್ಲಿಯೇ ಅವರ ಸಹೋದರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಟು ಶಬ್ದಗಳಲ್ಲಿ ಟೀಕೆ ಮಾಡಿದ್ದಾರೆ. ನಮ್ಮ ಕುಟುಂಬ ಭಾರತದ ಪ್ರಜಾಪ್ರಭುತ್ವವನ್ನು ರಕ್ತ ಹಾಕಿ ಬೆಳೆಸಿದೆ ಎಂದು ಬರೆದುಕೊಂಡಿದ್ದಾರೆ.
ನವದೆಹಲಿ (ಮಾ.24): ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಿದ್ದರ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಇಲ್ಲಿಯವರೆಗೆ ತಮ್ಮ ಕುಟುಂಬಕ್ಕೆ ಏನೆಲ್ಲಾ ಹೇಳಲಾಯಿತು. ಹೇಗೆಲ್ಲಾ ಮಾನಹಾನಿ ಮಾಡಲಾಯಿತು ಎನ್ನುವ ಬಗ್ಗೆ ಸರಣಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. 'ನರೇಂದ್ರ ಮೋದಿಯವರೆ, ಹೌದು ನಿಮ್ಮ ಸೈಕೋಪಾತ್ಗಳು ದೇಶಕ್ಕಾಗಿ ಹುತಾತ್ಮನಾದ ಪ್ರಧಾನಿಯ ಮಗನನ್ನು ದೇಶದ್ರೋಹಿ ಮೀರ್ ಜಾಫರ್ ಎಂದು ಕರೆದರು. ನಿಮ್ಮದೇ ಪಕ್ಷದ ಮುಖ್ಯಮಂತ್ರಿಯೊಬ್ಬರು ರಾಹುಲ್ ಗಾಂಧಿಯವರ ತಂದೆ ಯಾರು ಅನ್ನೋದೇ ಗೊತ್ತಿಲ್ಲ ಅಂತಾ ಪ್ರಶ್ನೆ ಮಾಡಿದರು.
ಕಾಶ್ಮೀರಿ ಪಂಡಿತರ ಸಂಪ್ರದಾಯವನ್ನು ಅನುಸರಿಸಿ, ಮಗನು ತನ್ನ ತಂದೆಯ ಮರಣದ ನಂತರ ತನ್ನ ಕುಟುಂಬದ ಸಂಪ್ರದಾಯವನ್ನು ಉಳಿಸಿಕೊಂಡು ಪೇಟವನ್ನು ಧರಿಸುತ್ತಾನೆ. ಇದಕ್ಕೂ ಕೂಡ ನಮ್ಮ ಇಡೀ ಕುಟುಂಬ ಹಾಗೂ ಕಾಶ್ಮೀರಿ ಪಂಡಿತರ ಸಮುದಾಯವನ್ನು ಅವಮಾನಿಸಿದಿರಿ. ತುಂಬಿದ ಸಂಸತ್ತಿನಲ್ಲಿಯೇ, ನೀವೆಲ್ಲಾ ಯಾಕೆ ನೆಹರು ಸರ್ನೇಮ್ ಇಟ್ಟುಕೊಳ್ಳುವುದಿಲ್ಲ ಎಂದು ನೀವು ಪ್ರಶ್ನೆ ಮಾಡಿದಿರಿ. ಆದರೆ, ಇದಾವುದಕ್ಕೂ ಯಾವುದೇ ನ್ಯಾಯಾಧೀಶರು ಎರಡು ವರ್ಷದ ಶಿಕ್ಷೆ ನೀಡೋದಿಲ್ಲ. ಸಂಸತ್ತಿನಿಂದ ನಿಮ್ಮನ್ನು ಯಾರೂ ಅನರ್ಹ ಮಾಡೋದಿಲ್ಲ ಎಂದು ಭಾವುಕವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ನಿಜವಾದ ದೇಶಭಕ್ತ. ಅದಾನಿಯ ಲೂಟಿಯನ್ನು ಅವರು ಪ್ರಶ್ನೆ ಮಾಡಿದರು. ನೀರವ್ ಮೋದಿ, ಮೇಹುಲ್ ಚೋಕ್ಸಿ ಕುರಿತಾಗಿ ಪ್ರಶ್ನೆಗಳನ್ನು ಮಾಡಿದರು. ನಿಮ್ಮ ಸ್ನೇಹಿತ ಗೌತಮ್ ಅದಾನಿ ದೇಶದ ಸಂಸತ್ತಿಗಿಂತ ಈ ದೇಶದ ಶ್ರೇಷ್ಠ ನಾಗರಿಕರಿಗಿಂತ ದೊಡ್ಡವರೆನಿಸಿಕೊಂಡರೇ? ಅವರ ಲೂಟಿ ಪ್ರಶ್ನೆ ಮಾಡಿದದಾಗ ನೀವು ಬೆಚ್ಚಿಬಿದ್ದಿದ್ದೇಕೆ? ನಮ್ಮ ಕುಟುಂಬವನ್ನು ಕುಟುಂಬ ರಾಜಕಾರಣ ಮಾಡುವವರೆಂದು ಕರೆಯಬಹುದು. ಆದರೆ, ನಿಮಗೆ ನೆನಪಿರಲಿ ಭಾರತದ ಪ್ರಜಾಪ್ರಭುತ್ವದ ಸಸಿಗೆ ನನ್ನ ಕುಟುಂಬ ರಕ್ತ ಹಾಕಿ ಬೆಳೆಸಿದೆ.
ರಾಹುಲ್ ಗಾಂಧಿ To ಲಾಲೂ ಪ್ರಸಾದ್, ಸಂಸದ, ಶಾಸಕ ಸ್ಥಾನದಿಂದ ಅನರ್ಹಗೊಂಡ ನಾಯಕರ ಲಿಸ್ಟ್!
ಇದೇ ಪ್ರಜಾಪ್ರಭುತ್ವವನ್ನೇ ನೀವು ಧ್ವಂಸ ಮಾಡಲು ಯತ್ನ ಮಾಡುತ್ತಿದ್ದೀರಿ. ಸಾಕಷ್ಟು ತಲೆಮಾರುಗಳಿಂದ ಸತ್ಯದ ಪರವಾಗಿ ಭಾರತದ ಜನರ ದನಿಯನ್ನು ನಮ್ಮ ಕುಟುಂಬ ಎತ್ತಿದೆ. ನಮ್ಮ ರಕ್ತನಾಳಗಳಲ್ಲಿ ಹರಿಯುವ ರಕ್ತದಲ್ಲಿ ಒಂದು ವಿಶೇಷತೆ ಖಂಡಿತವಾಗಿಯೂ ಇದೆ. ನಿಮ್ಮಂಥ ಹೇಡಿ, ಅಧಿಕಾರ ದಾಹದ ಸರ್ವಾಧಿಕಾರಿಯ ಮುಂದೆ ಎಂದಿಗೂ ತಲೆಬಾಗೋದಿಲ್ಲ ಮತ್ತು ಎಂದೆಂದಿಗೂ ತಲೆಬಾಗೋದಿಲ್ಲ. ನೀವು ಏನು ಬೇಕಾದರೂ ಪ್ರಯತ್ನಿಸಿದರೂ ಅಷ್ಟೇ ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಅನರ್ಹ, ಕಾಂಗ್ರೆಸ್ ಸದ್ದಡಗಿಸಲು ಬಿಜೆಪಿಯಿಂದ ಷಡ್ಯಂತ್ರ, ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ!