ಪೂರ್ವ ಲಡಾಖ್‌ನಲ್ಲಿ ಭಾರತದ ವಾಸ್ತವಿಕ ಗಡಿ ರೇಖೆಯ ಬಳಿ ಪ್ಯಾಂಗ್ಯಾಂಗ್‌ ಸರೋವರಕ್ಕೆ ಅಡ್ಡಲಾಗಿ ಚೀನಾ ಸೇತುವೆ ನಿರ್ಮಿಸುತ್ತಿದೆ. ಈ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.

ನವದೆಹಲಿ (ಜ.20): ಪೂರ್ವ ಲಡಾಖ್‌ನಲ್ಲಿ (Ladakh) ಭಾರತದ ವಾಸ್ತವಿಕ ಗಡಿ ರೇಖೆಯ ಬಳಿ ಪ್ಯಾಂಗ್ಯಾಂಗ್‌ (Pangong) ಸರೋವರಕ್ಕೆ ಅಡ್ಡಲಾಗಿ ಚೀನಾ (China) ಸೇತುವೆ ನಿರ್ಮಿಸುತ್ತಿದೆ. ಈ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ವಿರುದ್ಧ ಕಿಡಿ ಕಾರಿದ್ದಾರೆ.

Add Asianetnews Kannada as a Preferred SourcegooglePreferred

‘ಚೀನಾ ನಮ್ಮ ದೇಶದಲ್ಲಿ ಅಕ್ರಮವಾಗಿ ಸೇತುವೆ ನಿರ್ಮಾಣ ಮಾಡುತ್ತಿದೆ. ಪ್ರಧಾನಿಯ ಮೌನ ಚೀನಾ ಪಡೆಗಳ ಉತ್ಸಾಹ ಹೆಚ್ಚುತ್ತಿದೆ. ಪ್ರಧಾನಿಯೇ ಈ ಸೇತುವೆಯ ಉದ್ಘಾಟನೆಗೆ ಹೋಗಲಿದ್ದಾರೇನೋ ಎಂದು ಭಯವಾಗುತ್ತಿದೆ’ ಎಂದು ರಾಹುಲ್‌ ವ್ಯಂಗ್ಯವಾಡಿದ್ದಾರೆ. ಜ. 16 ರಂದು ಉಪಗ್ರಹ ಸೆರೆ ಹಿಡಿದಿರುವ ಚಿತ್ರಗಳಿಂದ ಚೀನಾ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಸೇತುವೆ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಲು ಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ಸರೋವರದ ಎರಡೂ ದಡಗಳಲ್ಲಿಯೂ ಚೀನಾ ತನ್ನ ಸೇನೆಯನ್ನು ತ್ವರಿತವಾಗಿ ನಿಯೋಜಿಸುವ ಉದ್ದೇಶದಿಂದ ಸೇತುವೆ ನಿರ್ಮಿಸಲಾಗುತ್ತಿದೆ.

New Year: ಗಲ್ವಾನ್ ಕಣಿವೆಯಲ್ಲಿ ಚೀನಾ ಧ್ವಜ, ಸರ್ಕಾರದ ವಿರುದ್ಧ ರಾಹುಲ್ ಕಿಡಿ!

ಚೀನಾದಿಂದ ಪ್ಯಾಂಗ್ಯಾಂಗ್‌ ಸೇತುವೆ ನಿರ್ಮಾಣಕ್ಕೆ ವೇಗ: ಪೂರ್ವ ಲಡಾಖ್‌ನಲ್ಲಿ ಬರುವ ಪ್ಯಾಂಗ್ಯಾಂಗ್‌ ಸರೋವರಕ್ಕೆ ದೊಡ್ಡದೊಂದು ಸೇತುವೆ ನಿರ್ಮಿಸುತ್ತಿರುವ ಚೀನಾ ಸೇನೆ, ಮುಂಬರುವ ಚಳಿಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಕ್ಕೆ ಮುಂದಾಗಿದೆ. ಜ.16ರಂದು ಉಪಗ್ರಹ ಸೆರೆಹಿಡಿದಿರುವ ಚಿತ್ರಗಳು, ಚೀನಾ ದೊಡ್ಡ ಕ್ರೇನ್‌ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಸೇತುವೆ ಕಾಮಗಾರಿಯನ್ನು ಆದಷ್ಟು ಶೀಘ್ರ ಮುಗಿಸಲು ಯತ್ನಿಸುತ್ತಿರುವುದನ್ನು ಖಚಿತಪಡಿಸಿವೆ. ಪ್ಯಾಂಗ್ಯಾಂಗ್‌ ಸರೋವರದ ಉತ್ತರ ಮತ್ತು ದಕ್ಷಿಣದ ದಂಡೆಯ ನಡುವೆ ಸಂಪರ್ಕ ಕಲ್ಪಿಸಲು, ಚೀನಾ ಅಕ್ರಮವಾಗಿ ಸೇತುವೆ ನಿರ್ಮಿಸುತ್ತಿರುವ ವಿಷಯ ಕೆಲ ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. 

ಇದೀಗ ಬಿಡುಗಡೆಯಾಗಿರುವ ಹೊಸ ಚಿತ್ರಗಳು, ಚಳಿಗಾಲದ ಹಿಮ ಆವರಿಸಿಕೊಳ್ಳುವ ಮುನ್ನವೇ ಸೇತುವೆಯನ್ನು ಬಳಕೆಗೆ ಸಜ್ಜುಗೊಳಿಸಲು ಚೀನಾ ಹರಸಾಹಸ ಪಡುತ್ತಿರುವ ವಿಷಯವನ್ನು ಖಚಿತಪಡಿಸಿವೆ. 8 ಮೀಟರ್‌ ಆಗಲ, 400 ಮೀಟರ್‌ ಉದ್ದದ ಈ ಸೇತುವೆ ಒಮ್ಮೆ ಬಳಕೆಗೆ ಸಿದ್ಧವಾದರೆ, ಸರೋವರದ ಎರಡೂ ದಡದ ಮೇಲೆ ತನ್ನ ಸೇನೆಯನ್ನು ತ್ವರಿತವಾಗಿ ನಿಯೋಜನೆಗೊಳಿಸುವುದು ಚೀನಾ ಸೇನೆಗೆ ಸಾಧ್ಯವಾಗಲಿದೆ. ಅಲ್ಲದೆ ಸರೋವರದ ಉತ್ತರ ದಂಡೆಯಲ್ಲಿ ಬೀಡುಬಿಡುವ ಚೀನಾ ಸೇನೆ ರುಟೋಗ್‌ ನೆಲೆಗೆ ತೆರಳಲು 200 ಕಿ.ಮೀನಷ್ಟುಭಾರೀ ದೂರ ಸಾಗಬೇಕಾದ ಪ್ರಮೇಯ ತಪ್ಪಲಿದೆ. 

ಸೇತುವೆಯು ಸಂಚಾರದ ದೂರವನ್ನು 150 ಕಿ.ಮೀನಷ್ಟುಕಡಿತಗೊಳಿಸಲಿದೆ. ಚೀನಾ ಇದೀಗ ಸೇತುವೆ ನಿರ್ಮಾಣ ಮಾಡುತ್ತಿರುವ ಸ್ಥಳ 1958ರಿಂದಲೂ ಅಕ್ರಮವಾಗಿ ಚೀನಾ ವಶದಲ್ಲೇ ಇದೆ. ಭಾರತ ವಾಸ್ತವ ಗಡಿ ರೇಖೆ ಎಂದು ಹೇಳುವ ಪ್ರದೇಶದ ಪಕ್ಕದಲ್ಲೇ ಈ ಸೇತುವೆ ನಿರ್ಮಾಣವಾಗುತ್ತಿದೆ. ಹೀಗಾಗಿ ಈ ಸೇತುವೆಯನ್ನು ಚೀನಾದ ಅಕ್ರಮ ನಿರ್ಮಾಣ ಎಂದೇ ಭಾರತ ವಾದಿಸುತ್ತಿದೆ. 

ರಾಹುಲ್ ಗಾಂಧಿಯೇ ಪಕ್ಷದ ಅಧ್ಯಕ್ಷ, 2022ರಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣ!

ಕಳೆದ ವರ್ಷ ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಸೇನೆ ಹಲವು ತಿಂಗಳ ಕಾಲ ಮುಖಾಮುಖಿಯಾಗಿ ಇನ್ನೇನು ಯುದ್ಧ ಆರಂಭವಾಯಿತು ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಆ ವೇಳೆ ಭಾರತೀಯ ಯೋಧರು ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವವಾದ ಕೈಲಾಶ ಬೆಟ್ಟದ ಮೇಲೆ ತಮ್ಮ ಪ್ರಾಬಲ್ಯ ಸ್ಥಾಪಿಸುವ ಮೂಲಕ ಚೀನಾಕ್ಕೆ ಬಿಸಿ ಮುಟ್ಟಿಸಿದ್ದರು. ಹೀಗಾಗಿ ಚೀನಾ ಇದೀಗ ತ್ವರಿತವಾಗಿ ಸೇತುವೆ ನಿರ್ಮಾಣ ಮಾಡುವ ಮೂಲಕ ಇಡೀ ಪ್ರದೇಶದಲ್ಲೇ ಭಾರತಕ್ಕೆ ಮೇಲುಗೈ ಸಿಗದಂತೆ ಯತ್ನ ಮಾಡುತ್ತಿದೆ.