ಪುಷ್ಪ-2 ಚಿತ್ರದ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಘಟನೆಯಲ್ಲಿ ಎ-11 ಆರೋಪಿಯಾಗಿರುವ ಅಲ್ಲು ಅರ್ಜುನ್‌ರನ್ನು ಚಂಚಲಗೂಡ ಜೈಲಿಗೆ ಕಳುಹಿಸಲಾಗಿದೆ. ಅಲ್ಲು ಅರ್ಜುನ್ ವಿರುದ್ಧ ಬಿಎನ್‌ಎಸ್ 118 ಹಾಗೂ ಬಿಎನ್‌ಎಸ್ 105 ಕೇಸುಗಳನ್ನು ದಾಖಲಿಸಲಾಗಿದೆ.

ಹೈದರಾಬಾದ್ (ಡಿ.13): ಪುಷ್ಪ-2 ಸಿನಿಮಾದ ಪ್ರದರ್ಶನದ ವೇಳೆ ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಜೈಲು ಪಾಲಾಗಿದ್ದಾರೆ.

ಹೌದು, ಪ್ಯಾನ್ ಇಂಡಿಯಾ ಸ್ಟಾರ್ ನಟ ಅಲ್ಲು ಅರ್ಜುನ್ ಅವರು ತಮ್ಮ ಸಿನಿಮಾ ಪುಷ್ಪ-2 ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನದ ವೇಳೆ ಕಾಲ್ತುಳಿತಕ್ಕೆ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್‌ನಲ್ಲಿ ಚಂಚಲಗೂಡ ಜೈಲಿಗೆ ಕಳಿಸಲಾಗುತ್ತದೆ.

ಡಿ.5ರಂದು ಪುಷ್ಪ-2 ಸಿನಿಮಾ ಬಿಡುಗಡೆ ಆಗಿತ್ತು. ಆದರೆ, ಡಿ.4ರಂದು ಸಂಧ್ಯಾ ಥಿಯೇಟರ್‌ನಲ್ಲಿ ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಾವಿರಾರು ಜನರು ಸಂಧ್ಯಾ ಥಿಯೇಟರ್‌ನ ಬಳಿ ಸೇರಿದ್ದರು. ಅಲ್ಲಿಗೆ ಏಕಾಏಕಿ ಮಧ್ಯರಾತ್ರಿ ವೇಳೆ ನಟ ಅಲ್ಲು ಅರ್ಜುನ್ ಆಗಮಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಯಾವುದೇ ಮಾಹಿತಿ ನೀಡದೇ, ಜನರ ರಕ್ಷಣೆಗೆ ಯಾವುದೇ ಭದ್ರತಾ ಕ್ರಮಗಳನ್ನೂ ಕೈಗೊಳ್ಳದೇ ಏಕಾಏಕಿ ನಟ ಅಲ್ಲು ಅರ್ಜುನ್ ಥಿಯೇಟರ್ ಬಳಿಗೆ ಹೋಗಿದ್ದಾರೆ. ಆಗ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ನಾಯಕನನ್ನು ನೋಡುವತ್ತ ಧಾವಿಸಿದಾಗ ಕಾಲ್ತುಳಿತ ಸಂಭವಿಸಿದೆ.

ಕಾಲ್ತುಳಿತಕ್ಕೆ ರೇವತಿ ಎಂಬ ಮಹಿಳೆ ಸಿಕ್ಕು ಸಾವನ್ನಪ್ಪಿದ್ದಾಳೆ. ಉಳಿದಂತೆ ಆಕೆಯ ಪಕ್ಕದಲ್ಲಿದ್ದ ಇಬ್ಬರು ಮಕ್ಕಳು ಕಾಲ್ತುಳಿತದಿಂದ ಗಂಭೀರ ಗಾಯಗೊಂಡಿವೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಿಂದ ದೂರು ದಾಖಲಿಸಿಕೊಳ್ಳಲಾಗಿತ್ತು. ಈವರೆಗೆ ಘಟನೆಗೆ ಸಂಬಂಧಿಸಿದಂತೆ ಒಟ್ಟು 8 ಜನರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ, ಕಾಲ್ತುಳಿತ ಪ್ರಕರಣದಲ್ಲಿ ಎ-11 ಆರೋಪಿ ಆಗಿರುವ ಅಲ್ಲು ಅರ್ಜುನ್‌ನನ್ನು ಇಂದು ಬಂಧಿಸಲಾಗಿದೆ.

ಇದನ್ನೂ ಓದಿ: Breaking: ಪುಷ್ಪ-2 ಸಿನಿಮಾ ವಿವಾದ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಅರೆಸ್ಟ್

ಅಲ್ಲು ಅರ್ಜುನ್‌ನನ್ನು ಬೆಳಗ್ಗೆ ಬಂಧಿಸಿ ಕರೆದೊಯ್ದ ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನಂತರ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ನಾಮಪಲ್ಲಿ ಕೋರ್ಟ್‌ನಿಂದ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆದ್ದರಿಂದ ನಟ ಅಲ್ಲು ಅರ್ಜುನ್‌ನನ್ನು ಚಂಚಲಗೂಡ ಜೈಲಿಗೆ ಕಳುಹಿಸಲಾಗಿದೆ.

ಅಲ್ಲು ಅರ್ಜುನ್ ವಿರುದ್ಧ ದಾಖಲಾದ ಕೇಸ್‌ಗಳಾವುವು?
ಬಿಎನ್‌ಎಸ್ 118 ಹಾಗೂ ಬಿಎನ್‌ಎಸ್ 105 ಕೇಸುಗಳನ್ನು ದಾಖಲಿಸಲಾಗಿದೆ. ಈ ಎರಡೂ ಕೇಸುಗಳು ಸಾಬೀತಾದಲ್ಲಿ ನಟ ಅಲ್ಲು ಅರ್ಜುನ್‌ಗೆ 10 ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಆದರೆ, ಈ ಕೇಸಿನ ಬಗ್ಗೆ ನಟ ಅಲ್ಲು ಅರ್ಜುನ್ ಅವರು ತಮ್ಮನ್ನು ಈ ಪ್ರಕರಣದಿಂದ ಕೈ ಬಿಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅವರ ಅರ್ಜಿ ಸೋಮವಾರ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಆದ್ದರಿಂದ ಕನಿಷ್ಠ ಸೋಮವಾರದವರೆಗೂ ಅಲ್ಲು ಅರ್ಜುನ್ ಜೈಲಿನಲ್ಲಿ ಕಳೆಯುವುದು ಅನಿವಾರ್ಯವಾಗಿದೆ. ಒಂದು ವೇಳೆ ಸೋಮವಾರವೂ ಜಾಮೀನು ಸಿಗದಿದ್ದರೆ ಜೈಲಿನಲ್ಲಿಯೇ ಇರಬೇಕಾಗುತ್ತದೆ.

ಇದನ್ನೂ ಓದಿ: ಪುಷ್ಪ-2: ಬಟ್ಟೆ ಬದಲಿಸಲೂ ಬಿಡದ ಪೊಲೀಸರಿಗೆ 'This is too Much' ಎಂದ ಅಲ್ಲು ಅರ್ಜುನ್!