ಮಾಜಿ ಸಿಎಂ ಕಲ್ಯಾಣ್ ಸಿಂಗ್ ಆರೋಗ್ಯದಲ್ಲಿ ಸುಧಾರಣೆ, ಮೋದಿ ಟ್ವೀಟ್!
* ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಆರೋಗ್ಯದಲ್ಲಿ ಸುಧಾರಣೆ
* ಸೋಶಿಯಲ್ ಮೀಡಿಯಾದಲ್ಲಿ ಮೃತಪಟ್ಟಿರುವ ಸುದ್ದಿ ವೈರಲ್
* 'ಶೀಘ್ರ ಗುಣಮುಖರಾಗಲೆಂದು ದೇಶದಾದ್ಯಂತ ಬಹಳಷ್ಟು ಜನರು ಪ್ರಾರ್ಥಿಸುತ್ತಿದ್ದಾರೆ' ಎಂದ ಪಿಎಂ
ಬೆಂಗಳೂರು(ಜು.09): ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ರಾಜಸ್ಥಾನ, ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ಕಲ್ಯಾಣ್ ಸಿಂಗ್ ಆರೋಗ್ಯ ಕೊಂಚ ಸುಧಾರಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಮೃತಪಟ್ಟಿದ್ದಾರೆಂಬ ಸುದ್ದಿ ಹರಿದಾಡಿದ್ದು, ಆತಂಕ ಸೃಷ್ಟಿಯಾಗಿತ್ತು. ಈ ನಡುವೆ ಪ್ರಧಾನಿ ಮೋದಿಯೂ ಟ್ವೀಟ್ ಮಾಡಿ 'ಶೀಘ್ರ ಗುಣಮುಖರಾಗಲೆಂದು ದೇಶದಾದ್ಯಂತ ಬಹಳಷ್ಟು ಜನರು ಪ್ರಾರ್ಥಿಸುತ್ತಿದ್ದಾರೆ' ಎಂದಿದ್ದಾರೆ.
ಇನ್ನು ಶುಕ್ರವಾರವಷ್ಟೇ ಬಿಜೆಪಿ ನಾಯಕ ಸೈಯದ್ ಶಾಹನ್ವಾಜ್ ಹುಸೈನ್ ಆಸ್ಪತ್ರೆಗೆ ಭೇಟಿ ನೀಡಿ ಕಲ್ಯಾಣ್ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕಲ್ಯಾಣ್ ಸಿಂಗ್ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಲಖನೌದ ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆಯ ಐಸಿಯುನಲ್ಲಿರುವ ಕಲ್ಯಾಣ್ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವು ಮುಖಂಡರು ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು.
ಇನ್ನು ಪಿಎಂ ಮೋದಿ ತಾವು ಕಲ್ಯಾಣ್ ಸಿಂಗ್ ಮೊಮ್ಮಗನೊಂದಿಗೆ ಮಾತನಾಡಿರುವ ಬಗ್ಗೆಯೂ ಟ್ವೀಟ್ ಮಾಡಿದ್ದು, 'ಕಲ್ಯಾಣ್ ಸಿಂಗ್ ಅವರ ಮೊಮ್ಮಗನೊಂದಿಗೆ ಈಗಷ್ಟೇ ಮಾತನಾಡಿ ಆರೋಗ್ಯ ಸ್ಥಿತಿಯ ಕುರಿತು ವಿಚಾರಿಸಿದೆ. ಕಲ್ಯಾಣ್ ಸಿಂಗ್ ಅವರೊಂದಿಗೆ ಮಾತುಕತೆಯ ಹಲವು ನೆನಪುಗಳು ನನ್ನಲ್ಲಿವೆ. ಅವರೊಂದಿಗಿನ ಮಾತು ಸದಾಕಾಲಕ್ಕೂ ಕಲಿಕೆಯ ಅನುಭವವಾಗಿತ್ತು' ಎಂದಿದ್ದಾರೆ.