ರಾಜ್ಯದಿಂದ ಈಗ ಜೋಶಿ, ನಿರ್ಮಲಾ ಇಬ್ಬರೇ ಸಂಪುಟ ದರ್ಜೆ ಸಚಿವರು!
* ಕೇಂದ್ರ ಸಂಪುಟ ವಿಸ್ತರಣೆ ಬಳಿಕ ಆರು ಸಚಿವರು ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ
* ರಾಜ್ಯದಿಂದ ಇಬ್ಬರಿಗೆ ಮಾತ್ರ ಸಂಪುಟ ದರ್ಜೆ
* ನಾಲ್ವರು ನೂತನ ಮಂತ್ರಿಗಳಿಗೆ ರಾಜ್ಯ ದರ್ಜೆ ಸಚಿವ ಸ್ಥಾನ
ಬೆಂಗಳೂರು(ju.೦೮): ಕೇಂದ್ರ ಸಂಪುಟ ವಿಸ್ತರಣೆ ಬಳಿಕ ಆರು ಸಚಿವರು ರಾಜ್ಯವನ್ನು ಪ್ರತಿನಿಧಿಸಿದಂತಾದರೂ ಸಂಪುಟ ದರ್ಜೆ ಸ್ಥಾನಮಾನ ಹೊಂದಿದ್ದು ಪ್ರಹ್ಲಾದ್ ಜೋಶಿ ಮತ್ತು ನಿರ್ಮಲಾ ಸೀತಾರಾಮನ್ ಅವರಿಬ್ಬರು ಮಾತ್ರ.
"
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯದ ಮೂವರಿಗೆ ಸಚಿವ ಸ್ಥಾನ ಸಿಕ್ಕಿತ್ತು. ಈ ಪೈಕಿ ಪ್ರಹ್ಲಾದ್ ಜೋಶಿ ಮತ್ತು ಡಿ.ವಿ.ಸದಾನಂದಗೌಡ ಅವರಿಬ್ಬರು ಸಂಪುಟ ದರ್ಜೆ ಸ್ಥಾನಮಾನ ಹೊಂದಿದ್ದರು. ಮತ್ತೊಬ್ಬ ಸಚಿವ ಸುರೇಶ್ ಅಂಗಡಿ ಅವರು ರಾಜ್ಯ ಖಾತೆ ಸಚಿವರಾಗಿದ್ದರು. ತಮಿಳುನಾಡಿನಲ್ಲಿ ಜನಿಸಿದ್ದರೂ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರೂ ಸಂಪುಟ ದರ್ಜೆ ಸ್ಥಾನಮಾನ ಹೊಂದಿದ್ದರು.
ಸುರೇಶ್ ಅಂಗಡಿ ಅವರು ಅಕಾಲಿಕವಾಗಿ ನಿಧನ ಹೊಂದಿದ ನಂತರ ಜೋಶಿ, ನಿರ್ಮಲಾ ಮತ್ತು ಸದಾನಂದಗೌಡ ಅವರಿಬ್ಬರೇ ಸಂಪುಟದಲ್ಲಿ ಮುಂದುವರೆದಿದ್ದರು. ಇದೀಗ ಸದಾನಂದಗೌಡರನ್ನು ಕೈಬಿಡಲಾಗಿದೆ. ಬದಲಿಗೆ ನಾಲ್ವರಾದ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಎ.ನಾರಾಯಣಸ್ವಾಮಿ ಹಾಗೂ ಭಗವಂತ ಖೂಬಾ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಲಭಿಸಿದರೂ ರಾಜ್ಯ ಸಚಿವ ದರ್ಜೆ ಮಾತ್ರ. ಹೀಗಾಗಿ, ಕರ್ನಾಟಕದಿಂದ ಆರು ಸಚಿವರು ಕೇಂದ್ರದಲ್ಲಿದ್ದರೂ ಆಡಳಿತಾತ್ಮಕ ವಿಷಯಗಳಲ್ಲಿ ಪ್ರಮುಖ ಪಾತ್ರ ವಹಿಸಬಹುದಾದ ಸಂಪುಟ ದರ್ಜೆ ಸ್ಥಾನಮಾನ ಸಿಕ್ಕಿದ್ದು ಇಬ್ಬರಿಗೆ ಮಾತ್ರ ಎನ್ನುವಂತಾಗಿದೆ.