ಕಲ್ಲಿದ್ದಲು ಸಮಸ್ಯೆ ಪರಿಹಾರಕ್ಕೆ ಮೋದಿ ಮಧ್ಯಪ್ರವೇಶ!
* ಕಲ್ಲಿದ್ದಲು, ಇಂಧನ ಇಲಾಖೆಗಳ ಜತೆ ಪ್ರಧಾನಿ ಸಭೆ
* ಕಲ್ಲಿದ್ದಲು ಸಾಗಾಟ ಹೆಚ್ಚಿಸುವ ಕ್ರಮಗಳ ಬಗ್ಗೆ ಚರ್ಚೆ
* ಕಲ್ಲಿದ್ದಲು, ವಿದ್ಯುತ್ ಲಭ್ಯತೆ ಬಗ್ಗೆ ಇಲಾಖೆಗಳಿಂದ ಮಾಹಿತಿ
* ಕಲ್ಲಿದ್ದಲು ಸಮಸ್ಯೆ ಪರಿಹಾರಕ್ಕೆ ಮೋದಿ ಮಧ್ಯಪ್ರವೇಶ
ನವದೆಹಲಿ(ಅ.13): ಕಲ್ಲಿದ್ದಲು ಕೊರತೆ ಬಗ್ಗೆ ಹಲವು ರಾಜ್ಯಗಳು ಆತಂಕ ವ್ಯಕ್ತಪಡಿಸಿರುವ ಬೆನ್ನಲ್ಲೇ, ಈ ಸಮಸ್ಯೆ ಪರಿಹಾರಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರೇ ಮಧ್ಯಸ್ಥಿಕೆ ವಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ(Pralhad Joshi) ಮತ್ತು ಇಂಧನ ಸಚಿವ ಆರ್.ಕೆ ಸಿಂಗ್(RK Singh) ಅವರ ಜತೆ ಮಹತ್ವದ ಸಭೆ ನಡೆಸಿದರು. ಈ ವೇಳೆ ರಾಜ್ಯಗಳಿಗೆ ಕಲ್ಲಿದ್ದಲು ಸಾಗಾಟ ಹೆಚ್ಚಿಸಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
ಈ ಸಭೆಯಲ್ಲಿ ಬೇಡಿಕೆಯಿರುವಷ್ಟು ವಿದ್ಯುತ್(Electricity) ಉತ್ಪಾದನೆಗಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಕಲ್ಲಿದ್ದಲು(Coal) ಮೂಲಕ ವಿದ್ಯುತ್ ಉತ್ಪಾದಿಸುವ ಶಾಖೋತ್ಪನ್ನ ಘಟಕಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆಯೂ ಚರ್ಚಿಸಲಾಗಿದೆ. ಈ ವೇಳೆ ದೇಶದಲ್ಲಿ ಲಭ್ಯವಿರುವ ಕಲ್ಲಿದ್ದಲು ಮತ್ತು ವಿದ್ಯುತ್ ಪ್ರಮಾಣದ ಬಗ್ಗೆ ಇಂಧನ ಇಲಾಖೆ ಕಾರ್ಯದರ್ಶಿ ಅಲೋಕ್ ಕುಮಾರ್ ಮತ್ತು ಕಲ್ಲಿದ್ದಲು ಇಲಾಖೆಯ ಕಾರ್ಯದರ್ಶಿ ಎ.ಕೆ ಜೈನ್ ಅವರಿಂದ ಮೋದಿ ಅವರಿಗೆ ವಿವರಣೆ ಪಡೆದರು ಎಂದು ಮೂಲಗಳು ತಿಳಿಸಿವೆ.
ಈ ಸಭೆ ಬಳಿಕ ಮಾತನಾಡಿದ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ದೇಶದಲ್ಲಿ ಅಗತ್ಯವಿರುವಷ್ಟುಕಲ್ಲಿದ್ದಲು ಮತ್ತು ವಿದ್ಯುತ್ ಲಭ್ಯತೆಯಿದ್ದು, ಯಾರೂ ಚಿಂತಿಸಬೇಕಿಲ್ಲ ಎಂದು ಹೇಳಿದರು.
ಹಿಂದೆ ಕಲ್ಲಿದ್ದಲು ಖರೀದಿಸಿ ಎಂದರೆ ಕೇಳಲಿಲ್ಲ
ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆ ಸೃಷ್ಟಿಯಾಗಿ ವಿದ್ಯುತ್ ಕ್ಷಾಮದ ಆತಂಕ ಹೆಚ್ಚಾದ ಬೆನ್ನಲ್ಲೇ, ಕೇಂದ್ರ ಸರ್ಕಾರವು ಈ ಸಮಸ್ಯೆಗೆ ರಾಜ್ಯಗಳೇ ಹೊಣೆ ಎಂದು ಮಂಗಳವಾರ ಕಿಡಿಕಾರಿದೆ. ಈ ಮೂಲಕ ಕೇಂದ್ರವನ್ನು ದೂಷಿಸುತ್ತಿರುವ ರಾಜ್ಯಗಳಿಗೆ ತಿರುಗೇಟು ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಲ್ಲಿದ್ದಲು ಹಾಗೂ ವಿದ್ಯುತ್ ಬಿಕ್ಕಟ್ಟಿನ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಹಿಂದೆ ಕಲ್ಲಿದ್ದಲು ದಾಸ್ತಾನು ನಮ್ಮ ಬಳಿ ಸಾಕಷ್ಟಿತ್ತು. ಕಳೆದ ಜೂನ್ವರೆಗೂ ಕಲ್ಲಿದ್ದಲು ತೆಗೆದುಕೊಳ್ಳಿ ಎಂದು ನಾವು ಹೇಳಿದರೂ ರಾಜ್ಯಗಳು ತಮ್ಮ ದಾಸ್ತಾನನ್ನು ಹೆಚ್ಚಿಸಿಕೊಳ್ಳಲು ನಿರಾಕರಿಸಿದವು. ‘ದಯವಿಟ್ಟು ಕಲ್ಲಿದ್ದಲು ಕಳಿಸಬೇಡಿ’ ಎಂದು ಗೋಗರೆದವು. ಇದೇ ಈಗಿನ ಸಮಸ್ಯೆಗೆ ನಾಂದಿ ಹಾಡಿದೆ’ ಎಂದು ದೂರಿದರು.
‘ಹೀಗಾಗಿ ಕೊರತೆ ನೀಗಿಸಲು ರಾಜ್ಯಗಳು ದಾಸ್ತಾನು ಹೆಚ್ಚಿಸಿಕೊಳ್ಳಬೇಕು. ರಾಜ್ಯಗಳಿಂದ ಬಾಕಿ ಹಣ ಬರುವುದಿದ್ದರೂ ನಾವು ಪೂರೈಕೆ ಮುಂದುವರಿಸಿದ್ದೇವೆ. ದಾಸ್ತಾನು ಹೆಚ್ಚಿಸಿಕೊಂಡರೆ ಸಮಸ್ಯೆ ಇರದು’ ಎಂದರು. ಇದೇ ವೇಳೆ, ‘ವಿದ್ಯುತ್ ಕ್ಷಾಮದ ಭೀತಿ ಇಲ್ಲ’ ಎಂದು ಸ್ಪಷ್ಟಪಡಿಸಿದ ಜೋಶಿ, ‘ಕಲ್ಲಿದ್ದಲು ಸಾಕಷ್ಟುಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಸದ್ಯ 22 ದಿನಕ್ಕಾಗುವಷ್ಟುಕಲ್ಲಿದ್ದಲು ದಾಸ್ತಾನಿದೆ’ ಎಂದರು.