11 ವರ್ಷದಲ್ಲೇ ಅತಿ ಸುದೀರ್ಘ ಸೇನಾ ಕಾರ್ಯಾಚರಣೆ!
* 10 ದಿನ ಪೂರೈಸಿದ ಪೂಂಛ್ ಉಗ್ರರ ಬೇಟೆ
* 2009ರಲ್ಲಿ ಸೇನೆಯಿಂದ 9 ದಿನ ಕಾರ್ಯಾಚರಣೆ ನಡೆದಿತ್ತು
* 11 ವರ್ಷದಲ್ಲೇ ಅತಿ ಸುದೀರ್ಘ ಸೇನಾ ಕಾರ್ಯಾಚರಣೆ
ಶ್ರೀನಗರ(ಅ.21): ಜಮ್ಮು-ಕಾಶ್ಮೀರದ(Jammu Kashmir) ಪೂಂಛ್(Poonch) ಜಿಲ್ಲೆಯಲ್ಲಿ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ(Indian Army) ನಡೆಸುತ್ತಿರುವ ಕಾರ್ಯಾಚರಣೆ ಬುಧವಾರ 10 ದಿನ ಪೂರೈಸಿದೆ. ಈ ಮೂಲಕ 2009ರ ಬಳಿಕ ಇದೇ ಮೊದಲ ಬಾರಿಗೆ ಸೇನೆ ಇಷ್ಟೊಂದು ಸುದೀರ್ಘ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಿದಂತಾಗಿದೆ.
2011ರಲ್ಲಿ ಸೇನೆ ಉಗ್ರರ ಸದೆಬಡಿಯಲು ಜ.1ರಿಂದ 9ರ ವರೆಗೆ 9 ದಿನಗಳ ಕಾಲ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ನಾಲ್ವರು ಉಗ್ರರನ್ನು ಸಂಹಾರ ಮಾಡಲಾಗಿತ್ತು. ಮತ್ತು ಉಗ್ರ ವಿರೋಧಿ ಕಾಳಗದಲ್ಲಿ ನಾಲ್ವರು ಯೋಧರೂ ಹುತಾತ್ಮರಾಗಿದ್ದರು.
ಸದ್ಯ ಅ.11ರಿಂದ ಸೇನೆ ಅದೇ ಪೂಂಛ್ ಜಿಲ್ಲೆಯ ದಟ್ಟಾರಣ್ಯದಲ್ಲಿ ಉಗ್ರರ ಗುಂಪು ಅಡಗಿ ಕುಳಿತ ಗುಪ್ತಚರ ಮಾಹಿತಿಯಾಧರಿಸಿ ಕಾರಾರಯಚರಣೆ ಆರಂಭಿಸಿದೆ. ವಿಶೇಷವಾಗಿ ತರಬೇತುಗೊಂಡ ಪ್ಯಾರಾ-ಕಮಾಂಡೋಸ್ ಘಟಕವನ್ನು ಸ್ಥಳದಲ್ಲಿ ನಿಯೋಜಿಸಿದೆ. ಉಗ್ರರ ಬೇಟೆಗೆ ಡ್ರೋನ್, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸೇನೆ ಬಳಸುತ್ತಿದೆ. ಈವರೆಗೆ 9 ಯೋಧರು ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದಾರೆ.
ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸ್ಥಳೀಯರು ಮನೆಯ ಒಳಗೇ ಇರುವಂತೆ ಮಸೀದಿಗಳ ಮೂಲಕ ಘೋಷಣೆ ಕೂಗಲಾಗುತ್ತಿದೆ. ಜೊತೆಗೆ ಉಗ್ರರಿಗೆ ನೆರವು ನೀಡುತ್ತಿದ್ದ ಸಂದೇಹದ ಮೇರೆಗೆ ಕೆಲಸ ಸ್ಥಳೀಯರನ್ನು ಸೇನೆ ಬಂಧಿಸಿದೆ.
ಪಾಕ್ ಗಡಿಗೆ ಸೇನಾ ಮುಖ್ಯಸ್ಥ ನರವಣೆ ಭೇಟಿ
ಕಾಶ್ಮೀರಿ ಕಣಿವೆಯಲ್ಲಿ ವಲಸಿಗರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸುತ್ತಿರುವುದು ಹಾಗೂ ಪಾಕಿಸ್ತಾನದ ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ಸೇನಾಪಡೆ ಮುಖ್ಯಸ್ಥ ಎಂ.ಎಂ.ನರವಣೆ ಮಂಗಳವಾರ ಜಮ್ಮುವಿಗೆ ಭೇಟಿ ನೀಡಿದ್ದಾರೆ.
ಎರಡು ದಿನಗಳ ಭೇಟಿಗಾಗಿ ಆಗಮಿಸಿರುವ ಅವರು, ಗಡಿ ನಿಯಂತ್ರಣ ರೇಖೆಯ ಬಳಿ ಪೂಂಛ್ ಹಾಗೂ ರಜೌರಿ ಜಿಲ್ಲೆಗಳಿಗೆ ತೆರಳಿ, ಉಗ್ರರ ವಿರುದ್ಧ ನಡೆಯುತ್ತಿರುವ ಭಾರಿ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಪ್ರದೇಶದಲ್ಲಿ ಉಗ್ರರ ಒಳನುಸುಳುವಿಕೆ ತಡೆಯಲು ಸೇನಾಪಡೆ ನಡೆಸುತ್ತಿರುವ ಕಾರ್ಯಾಚರಣೆ ಮಂಗಳವಾರ 9ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ವಾರ ಇಲ್ಲಿ ಒಂಭತ್ತು ಯೋಧರು ಉಗ್ರರಿಗೆ ಬಲಿಯಾಗಿದ್ದರು. ಇಲ್ಲಿನ ಮೆಂಧರ್, ಸುರಾನ್ಕೋಟ್ ಹಾಗೂ ಥಾನಮಂಡಿ ಅರಣ್ಯ ಪ್ರದೇಶದಲ್ಲಿ ಅಡಗಿರುವ ಉಗ್ರರಿಗಾಗಿ ಶೋಧ ನಡೆಸಲಾಗುತ್ತಿದೆ.