ಮೋದಿಗೆ ಎದುರಾಳಿ ಸೃಷ್ಟಿ?: ಪವಾರ್- ಪ್ರಶಾಂತ್ ಕಿಶೋರ್ ಚರ್ಚೆ, ಭಾರೀ ಸಂಚಲನ!
* ಶರದ್ ಪವಾರ್ ಭೇಟಿಯಾದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್
* ಮೋದಿಗೆ ಎದುರಾಳಿ ಸೃಷ್ಟಿಬಗ್ಗೆ ಚರ್ಚೆ?
* 3 ತಾಸು ಸುದೀರ್ಘ ಸಮಾಲೋಚನೆ, ಭಾರೀ ಸಂಚಲನ
ಮುಂಬೈ(ಜೂ.12): ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಮುಂಬೈನಲ್ಲಿ ಶುಕ್ರವಾರ ಎನ್ಸಿಪಿ ಪರಮೋಚ್ಚ ನಾಯಕ ಶರದ್ ಪವಾರ್ ಅವರನ್ನು ಭೇಟಿಯಾಗಿ 3 ತಾಸು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್, ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ ಪರ ಚುನಾವಣೆ ತಂತ್ರಗಾರಿಕೆ ರೂಪಿಸಿ ಆ ಎರಡೂ ಪಕ್ಷಗಳ ಗೆಲುವಿನಲ್ಲಿ ಪ್ರಶಾಂತ್ ಕಿಶೋರ್ ಮಹತ್ತರ ಪಾತ್ರ ವಹಿಸಿದ್ದರು. ಅವರಿಗೆ ಪವಾರ್ ಭೋಜನ ಏರ್ಪಡಿಸಿದ್ದರು. ಈ ವೇಳೆ ಇಬ್ಬರ ನಡುವೆ 3 ತಾಸಸು ಸಮಾಲೋಚನೆ ನಡೆದಿದೆ. ಆದರೆ ಯಾವೆಲ್ಲಾ ವಿಷಯ ಚರ್ಚೆಯಾಗಿವೆ ಎಂಬುದು ಬಹಿರಂಗವಾಗಿಲ್ಲ.
2024ರ ಲೋಕಸಭೆ ಚುನಾವಣೆಗೆ ಇನ್ನು ಮೂರು ವರ್ಷವಿದೆ. ನರೇಂದ್ರ ಮೋದಿ ಅವರ ವಿರುದ್ಧ ಪ್ರತಿಪಕ್ಷಗಳ ಪಾಳೆಯದಿಂದ ಪ್ರಬಲ ಅಭ್ಯರ್ಥಿ ಆಯ್ಕೆ ಮಾಡುವ ಕುರಿತು ಮಾತುಕತೆ ನಡೆದಿರಬಹುದು ಎಂಬ ಬಗ್ಗೆ ಮಾತುಕತೆ ನಡೆದಿರಬಹುದು ಎನ್ನಲಾಗುತ್ತಿದೆ.
ತಾವು ಚುನಾವಣಾ ತಂತ್ರಗಾರಿಕೆ ಕೆಲಸ ತೊರೆಯುವುದಾಗಿ ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶದ ಬಳಿಕ ಪ್ರಶಾಂತ್ ಕಿಶೋರ್ ಹೇಳಿದ್ದರು.