ಮುಂಗಾರು ಅಧಿವೇಶನ: ವಿಪಕ್ಷಗಳಿಗೆ ಮೋದಿ ಚಾಲೆಂಜ್!
* ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭ
* ಮೋದಿ ಸರ್ಕಾರದ ವಿರುದ್ಧ ಮುಗಿ ಬೀಳಲು ಸಿದ್ಧತೆ ನಡೆಸಿರುವ ವಿಪಕ್ಷಗಳು
* ವಿಪಕ್ಷಗಳಿಗೆ ಚಾಲೆಂಜ್ ಹಾಕಿದ ಮೋದಿ
ನವದೆಹಲಿ(ಜು.19): ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಮೊದಲ ದಿನವೇ ಅಧಿವೇಶನವು ಕಾವೇರುವ ಸಾಧ್ಯತೆ ಇದ್ದು, ಪೆಟ್ರೋಲ್-ಡೀಸೆಲ್ ದರ ಏರಿಕೆ ಹಾಗೂ ಕೋವಿಡ್ ನಿರ್ವಹಣೆ ವೈಫಲ್ಯ- ಮೊದಲಾದ ವಿಷಯಗಳನ್ನು ಇಟ್ಟುಕೊಂಡು ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಹೀಗಿರುವಾಗ ಅಧಿವೇಶನಕ್ಕೂ ಮುನ್ನ ಮಾತನಾಡಿದ ಮೋದಿ ಸರ್ಕಾರದ ವಿರುದ್ಧ ಮುಗಿ ಬೀಳಲು ಸಿದ್ಧತೆ ನಡೆಸಿರುವ ವಿಪಕ್ಷಗಳಿಗೆ ಚಾಲೆಂಜ್ ಹಾಕಿದ್ದಾರೆ.
ಹೌದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮೋದಿ ಲಸಿಕೆ ಹಾಕಿಸಿಕೊಳ್ಳುವವರನ್ನು ಬಾಹುಬಲಿಗೆ ಹೋಲಿಸಿದ್ದಾರೆ. ಇದೇ ವೇಳೆ ಸಂಯಮದಿಂದ ವರ್ತಿಸುವಂತೆ ಪ್ರತಿಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ. ಲಸಿಕೆ 'ಬಾಹು'ವಿಗೆ ನೀಡಲಾಗುತ್ತದೆ, ಯಾರು ಅದನ್ನು ತೆಗೆದುಕೊಂಡರೂ ಅವರು 'ಬಾಹುಬಲಿ' ಆಗುತ್ತಾರೆ. COVID ವಿರುದ್ಧದ ಹೋರಾಟದಲ್ಲಿ 40 ಕೋಟಿಗೂ ಹೆಚ್ಚು ಜನರು 'ಬಾಹುಬಲಿ' ಆಗಿದ್ದಾರೆ. ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನು ಆವರಿಸಿದೆ. ಅದಕ್ಕಾಗಿಯೇ ನಾವು ಸಂಸತ್ತಿನಲ್ಲಿ ಈ ಕುರಿತು ಅರ್ಥಪೂರ್ಣ ಚರ್ಚೆಯನ್ನು ಬಯಸುತ್ತೇವೆ ಎಂದಿದ್ದಾರೆ.
ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳಿ, ಆದರೆ....
ಪ್ರತಿಪಕ್ಷಗಳಿಗೆ ಇದೇ ವೇಳೆ ಎಚ್ಚರಿಕೆ ಕೊಟ್ಟ ಪಿಎಂ ಮೋದಿ ಎಲ್ಲ ಸಂಸದರು ಮತ್ತು ವಿಪಕ್ಷಗಳು ಅಧಿವೆಶನದಲ್ಲಿ ಕಠಿಣ ಮತ್ತು ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳಿ ಆದರೆ ಶಿಸ್ತುಬದ್ಧ ವಾತಾವರಣದಲ್ಲಿ ಉತ್ತರಿಸಲು ಸರ್ಕಾರಕ್ಕೂ ಅವಕಾಶ ನೀಡಬೇಕು. ಇದು ಪ್ರಜಾಪ್ರಭುತ್ವವನ್ನು ಉತ್ತೇಜಿಸುತ್ತದೆ, ಜನರ ವಿಶ್ವಾಸವನ್ನು ಬಲಪಡಿಸುತ್ತದೆ ಮತ್ತು ಅಭಿವೃದ್ಧಿಯ ವೇಗವನ್ನು ಸುಧಾರಿಸುತ್ತದೆ ಎಂದಿದ್ದಾರೆ.
ಸಾಂಕ್ರಾಮಿಕ ರೋಗವನ್ನು ಆದ್ಯತೆಯ ಮೇಲೆ ಚರ್ಚಿಸಬೇಕೆಂದು ನಾವು ಬಯಸುತ್ತೇವೆ ಮತ್ತು COVID ವಿರುದ್ಧದ ಹೋರಾಟದಲ್ಲಿ ಹೊಸ ದೃಷ್ಟಿಕೋನವನ್ನು ತರಲು ಮತ್ತು ನ್ಯೂನತೆಗಳನ್ನು ಸರಿಪಡಿಸಲು ಎಲ್ಲಾ ಸಂಸದರಿಂದ ರಚನಾತ್ಮಕ ಸಲಹೆಗಳನ್ನು ಪಡೆಯುತ್ತೇವೆ ಮತ್ತು ಇದರಿಂದ ಎಲ್ಲರೂ ಒಟ್ಟಾಗಿ ಹೋರಾಟದಲ್ಲಿ ಮುಂದುವರೆಯೋಣ ಎಂದಿದ್ದಾರೆ.