ಪುಲ್ವಾಮಾ ದಾಳಿಗೆ 5 ವರ್ಷ, ಹುತಾತ್ಮರನ್ನು ಸ್ಮರಿಸಿದ ಪ್ರಧಾನಿ ಮೋದಿ!
ಪ್ರಧಾನಿ ನರೇಂದ್ರ ಮೋದಿ ಪುಲ್ವಾಮಾ ದಾಳಿಯ ಐದನೇ ವರ್ಷವನ್ನು ನೆನಪಿಸಿಕೊಂಡಿದ್ದು, 2019ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ಮಂದಿ ಸಿಆರ್ಪಿಎಫ್ ಯೋಧರನ್ನು ಉಲ್ಲೇಖಿಸಿ, ಅವರ ತ್ಯಾಗವನ್ನು ದೇಶ ಸದಾಕಾಲ ಸ್ಮರಿಸಿಕೊಳ್ಳುತ್ತದೆ ಎಂದಿದ್ದಾರೆ.
ನವದೆಹಲಿ (ಫೆ.14): ಪುಲ್ವಾಮಾ ದಾಳಿಗೆ ಐದು ವರ್ಷವಾದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂದು ಹುತಾತ್ಮರಾದ ವೀರ ಯೋಧರನ್ನು ನೆನಪಿಸಿಕೊಂಡಿದ್ದಾರೆ. 2019ರ ಫೆಬ್ರವರಿ 14 ರಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ 78 ಸೇನಾ ವಾಹನಗಳ ಬೆಂಗಾವಲು ಪಡೆಯ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್) ನ 40 ಯೋಧರು ಹುತಾತ್ಮರಾಗಿದ್ದರು. ಯುಎಇ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಅವರ ತ್ಯಾಗವನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ. ಈ ಸೈನಿಕರ ತ್ಯಾಗವನ್ನು ದೇಶವು ಯಾವಾಗಲೂ ನೆನಪಿನಲ್ಲಿ ಇರಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ. 2019ರ ಫೆಬ್ರವರಿ 14 ರಂದು ನಡೆದ ದಾಳಿಯ ಹೊಣೆಯನ್ನು ಮಸೂದ್ ಅಜರ್ ನೇತೃತ್ವದ ಪಾಕಿಸ್ತಾನಿ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ಹೊತ್ತುಕೊಂಡಿತ್ತು. ಮತ್ತೊಂದೆಡೆ ಕಾಂಗ್ರೆಸ್ ಪುಲ್ವಾಮಾ ವಿಚಾರದಲ್ಲಿ ಮತ್ತೆ ರಾಜಕೀಯವನ್ನು ಎಳೆದು ತಂದಿದೆ. 300 ಕೆಜಿ ಆರ್ಡಿಎಕ್ಸ್ ಭಾರತಕ್ಕೆ ಹೇಗೆ ತರಲಾಯಿತು ಎನ್ನುವ ಬಗ್ಗೆ ಈವರೆಗೂ ಯಾವುದೇ ಉತ್ತರ ದೊರಕಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಇದನ್ನು ಬಿಜೆಪಿ ಟೀಕೆ ಮಾಡಿದೆ.
ಎಕ್ಸ್ನಲ್ಲಿ ಈ ಕುರಿತಾಗಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, , "ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ವೀರರಿಗೆ ನಾನು ಗೌರವ ಸಲ್ಲಿಸುತ್ತೇನೆ" ಎಂದು ಹೇಳಿದ್ದಾರೆ. "ನಮ್ಮ ದೇಶಕ್ಕಾಗಿ ಅವರ ಸೇವೆ ಮತ್ತು ತ್ಯಾಗ ಯಾವಾಗಲೂ ಸ್ಮರಣೀಯವಾಗಿದೆ" ಎಂದು ಅವರು ತಿಳಿಸಿದ್ದಾರೆ. ದಾಳಿ ನಡೆಸಿದ ಆತ್ಮಹತ್ಯಾ ಬಾಂಬರ್ ಅನ್ನು ಪುಲ್ವಾಮಾ ಜಿಲ್ಲೆಯ ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ಸೇನಾ ಬೆಂಗಾವಲು ಪಡೆ ಜಮ್ಮುವಿನಿಂದ ಶ್ರೀನಗರಕ್ಕೆ 2,500 ಕ್ಕೂ ಹೆಚ್ಚು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿಯನ್ನು ಸಾಗಾಟ ಮಾಡುತ್ತಿತ್ತು.
'ಶೀಘ್ರದಲ್ಲೇ ಪುಲ್ವಾಮಾ ಮಾದರಿ ದಾಳಿ’: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿದ್ಯಾರ್ಥಿ ಬಂಧನ
2019ರ ಪುಲ್ವಾಮಾ ದಾಳಿ 90ರ ದಶಕದ ಬಳಿಕ ಭಾರತದಲ್ಲಿ ಸೇನೆಯ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಎನಿಸಿತ್ತು. 78 ವಾಹನಗಳಿದ್ದ ಬೆಂಗಾವಲು ಪಡೆಯನ್ನು ಸ್ಪೋಟಕಗಳನ್ನು ತುಂಬಿದ್ದ ಕಾರು, ಮಿಲಿಟರಿ ಬಸ್ಗೆ ಒಂದಕ್ಕೆ ಡಿಕ್ಕಿ ಹೊಡೆದು ಸ್ಪೋಟ ನಡೆಸಿತ್ತು.
ಅಪರಿಚಿತನಿಂದ ಪುಲ್ವಾಮಾ ಸಂಚುಕೋರ, ಜೈಶ್ ಭಯೋತ್ಪಾದಕ ಅಲಂಗೀರ್ ಕಿಡ್ನಾಪ್!