ಉಕ್ರೇನ್ನಲ್ಲಿ ಮಡಿದ ನವೀನ್ ಪೋಷಕರ ಭೇಟಿ ಮಾಡಿ ಸಾಂತ್ವನ ಹೇಳಿದ ಪ್ರಧಾನಿ ಮೋದಿ!
- ನವೀನ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಪ್ರಧಾನಿ
- ಮೃತದೇಹ ತರಿಸಿದ್ದಕ್ಕೆ ಧನ್ಯವಾದ ತಿಳಿಸಿದ ಕುಟುಂಬ
- ಕೊಮ್ಮಘಟ್ಟದ ಸಾರ್ವಜನಿಕರ ಸಮಾವೇಶದ ನಂತರ ಭೇಟಿ
ಬೆಂಗಳೂರು(ಜೂ.20): ಎರಡು ದಿನಗಳ ಕರ್ನಾಟಕ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮಗಲ್ಲಿ ಪಾಲ್ಗೊಂಡಿದ್ದಾರೆ. ಇದರ ನಡುವೆ ರಷ್ಯಾ ಉಕ್ರೇನ್ ಯುದ್ಧದ ವೇಳೆ ಶೆಲ್ ದಾಳಿಯಲ್ಲಿ ಮಡಿದ ರಾಣಿಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಶೇಕರಪ್ಪ ಪೋಷಕರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ಕೊಮ್ಮಘಟ್ಟದ ಸಾರ್ವಜನಿಕರ ಸಮಾವೇಶದ ನಂತರ ನರೇಂದ್ರ ಮೋದಿ, ನವೀನ್ ಪೋಷಕರನ್ನು ಭೇಟಿ ಮಾಡಿದ್ದಾರೆ. ನವೀನ್ ತಂದೆ ಶೇಖರಪ್ಪ ತಾಯಿ ವಿಜಯಲಕ್ಷ್ಮಿಯನ್ನು ಭೇಟಿಯಾದ ಮೋದಿ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ರಷ್ಯಾ ಉಕ್ರೇನ್ ಯುದ್ಧದ ಪರಿಸ್ಥಿತಿಯಲ್ಲಿ ಪುತ್ರನ ಮೃತದೇಹ ತರಿಸಿ, ಕುಟುಂಬಕ್ಕೆ ನೆರವು ನೀಡಿದ ಪ್ರಧಾನಿ ಮೋದಿಗೆ ನವೀನ್ ಪೋಷಕರು ಧನ್ಯವಾದ ಹೇಳಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ಉಕ್ರೇನ್ನಲ್ಲಿ ಶೆಲ್ ದಾಳಿಯಿಂದ ಮೃತಪಟ್ಟಿದ್ದ ರಾಣಿಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಅವರ ಪೋಷಕರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗುವ ಅವಕಾಶ ಕಲ್ಪಿಸಲಾಗಿತ್ತು. ಸೋಮವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನುನವೀನ ಕುಟುಂಬಸ್ಥರು ಭೇಟಿ ಮಾಡಿದ್ದಾರೆ. ನವೀನ್ ತಂದೆ ಶೇಖರಗೌಡ ಹಾಗೂ ತಾಯಿ ವಿಜಯಲಕ್ಷ್ಮಿ ಹಾಗೂ ಸಹೋದರ ಹರ್ಷಗೆ ಮೋದಿ ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಕೂಡ ನವೀನ್ ತಂದೆ ಶೇಖರಗೌಡಗೆ ಕರೆ ಮಾಡಿ ಒಂದು ದಿನ ಮುಂಚೆಯೇ ಬೆಂಗಳೂರಿಗೆ ಬರಲು ತಿಳಿಸಿದ್ದರು. ಇದರಂತೆ ನವೀನ್ ಕುಟುಂಬಸ್ಥರು ಬೆಂಗಳೂರಿಗೆ ಆಗಮಿಸಿದ್ದರು. ಮಾರ್ಚ್ 1ರಂದು ರಾಣಿಬೆನ್ನೂರು ತಾಲೂಕು ಚಳಗೇರಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿ ನವೀನ್ ಉಕ್ರೇನ್ನಲ್ಲಿ ಶೆಲ್ ಬಡಿದು ಮೃತ ಪಟ್ಟಿದ್ದರು. 21 ದಿನಗಳ ಬಳಿಕ ತಾಯ್ನಾಡಿಗೆ ಮೃತ ನವೀನ್ ಪ್ರಾರ್ಥಿವ ಶರೀರ ಮರಳಿತ್ತು. ಕೇಂದ್ರ ಸರ್ಕಾರದ ಪ್ರಯತ್ನದಿಂದ ಭೀಕರ ಯುದ್ಧದ ನಡುವೆಯೂ ಮೃತದೇಹವನ್ನು ಭಾರತಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು.