ಜಲಿಯನ್ವಾಲಾ ಬಾಗ್ ಧೈರ್ಯ, ಪ್ರೇರಣೆ ನೀಡಿದ ಮಣ್ಣು; ನವೀಕರಿಸಿದ ಸ್ಮಾರಕ ದೇಶಕ್ಕೆ ಅರ್ಪಿಸಿದ ಮೋದಿ!
*ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಘನಘೋರ ಘಟನೆ ನಡೆದ ಸ್ಥಳ
*ಅಮೃತಸರದ ಸನಿಹದಲ್ಲಿರುವ ಜಲಿಯನ್ವಾಲಾ ಬಾಗ್ ಹತ್ಯಾಕಾಂಡ
*ನವೀಕರಿಸಿದ ಸ್ಮಾರಕ ಸಂಕೀರ್ಣ ಹಾಗೂ ಇತರ ಅಭಿವೃದ್ಧಿ ಯೋಜನೆ ಉದ್ಘಾಟನೆ
*ಶತಮಾನ ಕಳೆದರೂ ನೆತ್ತರು ಹರಿದ ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ಯಾರು ಮರೆತಿಲ್ಲ!
ನವದೆಹಲಿ(ಆ.28) ಜಲಿಯನ್ವಾಲಾ ಬಾಗ್ ನವೀಕರಣ ಕಾರ್ಯದಿಂದ ಇಲ್ಲಿ ವೀರಮರಣವನ್ನಪ್ಪಿದ ಪ್ರತಿಯೊಬ್ಬ ಸೇನಾನಿಯ ನೆನಪುಗಳನ್ನು ಜೀವಂತವಾಗಿರಸಲಾಗಿದೆ. ಸ್ಮಾರಕ ಸಂಕೀರ್ಣದಲ್ಲಿರುವ ಮ್ಯೂಸಿಯಂನಲ್ಲಿ ಜಲಿಯನ್ವಾಲಾ ಬಾಗ್ ಹತ್ಯಾಕಾಂಡ, ಹೋರಾಟವನ್ನು ಹೇಳುತ್ತದೆ. ಇದು ಯುವ ಜನಾಂಗಕ್ಕೆ ನೆನಪಿಡಬೇಕಾದ ಮುಖ್ಯವಿಚಾರ. ನಮ್ಮ ಪೂರ್ವಜರು ಸ್ವಾತಂತ್ರ್ಯ ಹೋರಾಟಕ್ಕೆ ಅದೆಷ್ಟು ತ್ಯಾಗ, ಬಲಿದಾನ ಮಾಡಿದ್ದಾರೆ ಎಂದು ಈ ಜಲಿಯನ್ವಾಲಾ ಬಾಗ್ ಸ್ಮಾರಕದಿಂದ ಅರಿವಾಗಲಿದೆ. ರಾಷ್ಟ್ರ ನಿರ್ಮಾಣದಲ್ಲಿ ಯುವಕರ, ಇಂದಿನ ಪೀಳಿಗೆಯ ಜವಾಬ್ದಾರಿ ಏನೂ ಅನ್ನೋದು ಜಲಿಯನ್ವಾಲಾ ಬಾಗ್ ಹೇಳಿಕೊಡುತ್ತಿದೆ. ಇಷ್ಟೇ ಅಲ್ಲ ಮುಂದೆ ಸಾಗಬೇಕಾದ ದಾರಿಯನ್ನು ತೋರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಡೆದ ಅತೀ ದೊಡ್ಡ ಹತ್ಯಾಕಾಂಡ ಜಲಿಯನ್ವಾಲಾ ಬಾಗ್ ನರಮೇಧದಲ್ಲಿನ ಸ್ಮಾರಕ ಹಾಗೂ ಸುತ್ತಿಲಿನ ಸಂಕೀರ್ಣವನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇಲ್ಲಿ ನಡೆಸಿದ ಬಹು ಅಭಿವೃದ್ಧಿ ಕಾರ್ಯ, ದುರಂತ ಕತೆ ಹೇಳುವ ಮ್ಯೂಸಿಯಂ ಗ್ಯಾಲರಿಯನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.
ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ಉಧಮ್ ಸಿಂಗ್, ಭಗತ್ ಸಿಂಗ್ ಸೇರಿದಂತೆ ಅಸಂಖ್ಯ ಸ್ವಾತಂತ್ರ್ಯ ಸೇನಾನಿಗಳಿಗೆ ಪ್ರೇರಣೆಯಾಗಿದೆ. ಸ್ವತಂತ್ರ್ಯ ಸಿಕ್ಕ 75 ನೇ ವರ್ಷದಲ್ಲಿ ಜಲಿಯನ್ವಾಲಾ ಬಾಗ್ ಸ್ಮಾರಕವನ್ನು ನವೀಕರಣಗೊಳಿಸಿ ರಾಷ್ಟ್ರಕ್ಕೆ ಅರ್ಪಿಸಲು ನನಗೆ ಭಾಗ್ಯ ದೊರಕಿದೆ. ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಹಿಂದೆ ಅದೆಷ್ಟು ಕಷ್ಟವಿತ್ತು. ಅದೆಂತಾ ಹೋರಾಟವಿತ್ತು ಅನ್ನೋದು ನಮಗೆ ಇತಿಹಾಸ ಹೇಳಿಕೊಡುತ್ತದೆ ಎಂದು ಮೋದಿ ಹೇಳಿದರು.
101 ವರ್ಷಗಳಾದರೂ ಮಾಸದ ಜಲಿಯನ್ ವಾಲಾಬಾಗ್ ಗಾಯದ ನೋವುಕೊರೋನಾ ಅಥವಾ ಆಫ್ಘಾನಿಸ್ತಾನದ ಸಂಕಷ್ಟ ಎದುರಿಸಲು ಭಾರತ ಶಕ್ತವಾಗಿದೆ. ಆಪರೇಶ್ ದೇವಿ ಶಕ್ತಿ ಮೂಲಕ ಆಫ್ಘಾನಿಸ್ತಾನದಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಮಾಡಲಾಗಿದೆ. ಗುರುಗೋವಿಂದ್ ಗೀತೆಯನ್ನು ತಲೆಯಲ್ಲಿ ಹೊತ್ತು ಸಿಖ್ ಬಾಂಧವರು ಭಾರತಕ್ಕೆ ಆಗಮಿಸಿದ್ದಾರೆ. ಹಲವು ಅಡೆ ತಡೆಗಳನ್ನು ಶತ ಶತಮಾನಗಳಿಂದಲೂ ಭಾರತ ಎದುರಿಸಿದೆ. ಇತಿಹಾಸ ನಮಗೆ ಇದನ್ನು ಹೇಳಿಕೊಟ್ಟಿದೆ ಎಂದುು ಮೋದಿ ಹೇಳಿದರು.
ಕ್ರಾಂತಿವೀರ ಚಂದ್ರಶೇಕರ್ ಅಜಾದ್ ಗ್ಯಾಲರಿ ಸೇರಿದಂತೆ ಹಲವು ಸ್ವಾತಂತ್ರ್ಯ ಸೇನಾನಿಗಳ ಗ್ಯಾಲರಿ ಶೀಘ್ರದಲ್ಲೇ ಸ್ಥಾಪನೆಯಾಗಲಿದೆ. ಅಂಡಮಾನ್ನಲ್ಲಿ ಮಹತ್ಮಾ ಗಾಂಧಿ ರಾಷ್ಟ್ರಧ್ವಜ ಹಾರಿಸಿದ ಸ್ಥಳವನ್ನು ನವೀಕರಣ ಮಾಡಲಾಗಿದೆ. ನಮ್ಮ ಇತಿಹಾಸದಲ್ಲಿ ಹಲವು ಸ್ವತಂತ್ರ ಸೇನಾನಿಗಳಿಗೆ ಸ್ಥಾನ ಸಿಕ್ಕಿಲ್ಲ. ಆದರೆ ಅವರ ಇತಿಹಾಸವನ್ನು ಭಾರತ ಸರ್ಕಾರ ಹೊಸ ರೂಪದಲ್ಲಿ ಜನರಿಗೆ ತಲುಪಿಸುತ್ತದೆ. ಜಲಿಯನ್ವಾಲಾ ಬಾಗ್ ಮಣ್ಣು ನಮ್ಮ ಉತ್ತಮ ಕಾರ್ಯಗಳಿಗೆ ಪ್ರೇರಣೆ ನೀಡುತ್ತದೆ ಎಂದರು.
ಮೋದಿ ಭಾಷಣದ ಬಳಿಕ ಲಿಯನ್ವಾಲಾ ಬಾಗ್ ಹತ್ಯಾಕಾಂಡ, ಸ್ವಾತಂತ್ರ್ಯ ವೀರರ ಸಾಹಸಗಾಥೆಯನ್ನು ಲೈಟ್ಸ್ ಹಾಗೂ ಸೌಂಡ್ಸ್ ಮೂಲಕ ಅತ್ಯಾಕರ್ಷವಾಗಿ ಪ್ರಸ್ತುತ ಪಡಿಸಲಾಯಿತು. ಈ ಲೈಟ್ಸ್ ಸೌಂಡ್ ನಾಳೆಯಿಂದ ದರ್ಶಕರ ವೀಕ್ಷಣೆಗೆ ಮುಕ್ತವಾಗಿದೆ. ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಘನಘೋರ ಚಿತ್ರಣ ಪ್ರತಿಯೊಬ್ಬರಲ್ಲಿ ದೇಶ ಪ್ರೇಮದ ಕಿಚ್ಚು ಹತ್ತಿಸಿತು.
ಕರಾಳ ದಿನ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ದೇಶದ ನಾಯಕರ ಪ್ರತಿಕ್ರಿಯೆಕಾರ್ಯಕ್ರಮದಲ್ಲಿ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪ್ರಧಾನಿ ಮೋದಿ ಬಳಿ ವಿಶೇಷ ಮನವಿ ಮಾಡಿದರು. ಜಲಿಯನ್ವಾಲಾ ಭಾಗ್ ಹತ್ಯಾಕಾಂಡದಿಂದ ಆಕ್ರೋಶಗೊಂಡಿದ್ದ ಸ್ವಾತಂತ್ರ್ಯ ವೀರ ಉಧಮ್ ಸಿಂಗ್ ಸೇಡು ತೀರಿಸಿಕೊಳ್ಳಲು ಲಂಡನ್ಗೆ ತೆರಳಿದರು 1940, ಮಾರ್ಚ್ 13ರಂದು ಹತ್ಯಾಕಾಂಡದ ಹಿಂದಿನ ಬ್ರಿಟೀಷ್ ಬ್ರಿಗೇಡಿಯರ್ ಡೈರ್ ಮೇಲೆ ಗುಂಡು ಹಾರಿಸಿದ್ದ. ಬಳಿಕ ಬ್ರಿಟೀಷರಿಗೆ ಶರಣಾಗಿದ್ದ. ಈ ವೇಳೆ ಬಳಸಿದ್ದ ಪಿಸ್ತೂಲ್, ಜೈಲಿನಲ್ಲಿ ಬರೆದ ಪತ್ರ ಲಂಡನ್ ಸಂಗ್ರಹಾಲಯದಲ್ಲಿದೆ. ಈ ವಸ್ತುಗಳನ್ನು ಬ್ರಿಟೀಷ್ ಸರ್ಕಾರದ ಜೊತೆ ಮಾತುಕತೆ ನಡೆಸಿ ಭಾರತಕ್ಕೆ ತರಬೇಕು ಎಂದು ಅಮರಿಂದರ್ ಸಿಂಗ್ ಮನವಿ ಮಾಡಿದರು.
ಜಲಿಯನ್ವಾಲಾ ಬಾಗ್ ದುರಂತ:
ಬ್ರಿಟೀಷರು ಭಾರತೀಯರ ಮೇಲೆ ನಡೆಸಿದ ಅತ್ಯಂತ ಘನಘೋರ ದಾಳಿ ಇದಾಗಿದೆ. 13 ಎಪ್ರಿಲ್, 1919ರಲ್ಲಿ ಜಲಿಯನ್ವಾಲಾ ಬಾಗ್ನಲ್ಲಿ ಬ್ರಿಟೀಷ್ ನೀತಿ, ದಬ್ಬಾಳಿಕೆ ವಿರುದ್ಧ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರು, ಮಕ್ಕಳು ಸೇರಿದಂತೆ 10 ಸಾವಿರಕ್ಕೂ ಹೆಚ್ಚಿನ ಸ್ವಾತಂತ್ರ್ಯ ಸೇನಾನಿಗಳು ಈ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಪಂಜಾಬ್ ಬೈಸಾಕಿ(ಸುಗ್ಗಿ) ಹಬ್ಬದೂಟ ಮುಗಿಸಿ ಎಲ್ಲರೂ ಜಲಿಯನ್ವಾಲಾ ಬಾಗ್ನಲ್ಲಿ ಸೇರಿದ್ದರು.
ಬ್ರಿಟೀಷ್ ಅದಗಾಲೇ ಪ್ರತಿಭಟನೆ, ಸಭೆ ಸಮಾರಂಭ ನಡೆಸದಂತೆ ನಿರ್ಬಂಧ ಸುತ್ತೋಲೆ ವಿಧಿಸಿತ್ತು. ಆದರೆ ಜಲಿಯನ್ವಾಲಾಬಾಗ್ನಲ್ಲಿ ಸೇರಿದ್ದ ಭಾರತದ ಸ್ವಾತಂತ್ರ್ಯ ಸೇನಾನಿಗಳಿಗೆ ಬ್ರಿಟೀಷರು ನಿಯಮ ಗೊತ್ತೇ ಇರಲಿಲ್ಲ. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಬ್ರಿಟೀಷ್ ಬ್ರಿಗೆಡಿಯರ್ ರೆಗಿನಾಲ್ಡ್ ಎಡ್ವರ್ಡ್ ಹ್ಯಾರಿ ಡೈಯರ್ ಜಲಿಯನ್ವಾಲಾ ಬಾಗ್ ಒಳಗೆ ಶಸ್ತ್ರಾಸ್ತ್ರ ಹಿಡಿದ ಸೇನೆಯನ್ನು ನುಗ್ಗಿಸಿ ಬಿಟ್ಟಿದ್ದ. ಅತ್ತ ಸೇರಿದ್ದ ಭಾರತೀಯರಲ್ಲಿ ಒಂದೇ ಒಂದು ಶಸ್ತ್ರಾಸ್ತ್ರ ಇರಲಿಲ್ಲ.
ಡೈಯರ್ ಹೇಳಿದ ಒಂದೇ ಮಾತು ಫೈರ್. ಕೇವಲ 10 ನಿಮಿಷದಲ್ಲಿ 1,650ಕ್ಕೂ ಹೆಚ್ಚು ಬುಲೆಟ್ ಜಲಿಯನ್ವಾಲಾ ಬಾಗ್ನಲ್ಲಿ ನೆರೆದಿದ್ದ ಭಾರತೀಯರ ದೇಹ ಹೊಕ್ಕಿತ್ತು. ಮಹಿಳೆಯರು ಮಕ್ಕಳು, ಯುವಕರು ಸೇರಿದಂತೆ ಯಾರನ್ನೂ ನೋಡದೆ ಬ್ರಿಟೀಷರು ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ತಪ್ಪಿಸಿಕೊಳ್ಳಲು ಅಲ್ಲೆ ಇದ್ದ ಬಾವಿಗೆ ಹಾರಿ 100ಕ್ಕೂ ಹೆಚ್ಚಿನ ಮಂದಿ ಸಾವನ್ನಪ್ಪಿದ್ದರು.
ಜಲಿಯನ್ವಾಲಾ ಬಾಗ್ ಪ್ರವೇಶ ದ್ವಾರದ ಮೂಲಕ ಒಮ್ಮೆಲೆ ಹೊರಹೋಗಲು ಸಾಧ್ಯವಾಗದೆ, ಬ್ರಿಟೀಷರ ಗುಂಡಿಗೆ ಭಾರತೀಯರ ನೆತ್ತರು ಹರಿದಿತ್ತು. ಅಂದು ಬ್ರಿಟೀಷರು ಈ ಹತ್ಯಾಕಾಂಡದಲ್ಲಿ ವೀರಮರವನ್ನಪ್ಪಿದ್ದ ಲೆಕ್ಕ 1,000 ಹಾಗೂ ಗಾಯಗೊಂಡವರ ಸಂಖ್ಯೆ 1,500 ಎಂದಿತ್ತು. ಆದರೆ ಅದಕ್ಕಿಂತ ಹೆಚ್ಚಿನ ಮಂದಿ ಇಲ್ಲಿ ಸಾವಿಗೀಡಾಗಿದ್ದಾರೆ.