ರೈತ ಹೋರಾಟದ ಮಧ್ಯೆ, ತ. ನಾಡಿನ ಅನ್ನದಾತನ ಈ ನಡೆ ಶ್ಲಾಘಿಸಿದ ಮೋದಿ!
ತಮಿಳುನಾಡು ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ| ಸರ್ಕಾರದ ವಿವಿಧ ಯೋಜನೆಗಳಿಗೆ ಪಿಎಂ ಮೋದಿ ಚಾಲನೆ| ರೈತ ಪ್ರತಿಭಟನೆ ನಡುವೆ ತಮಿಳುನಾಡಿನ ಅನ್ನದಾನತ ಶ್ಲಾಘಿಸಿದ ಪ್ರಧಾನಿ
ಚೆನ್ನೈ(ಫೆ.14): ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಚೆನ್ನೈನ ಕಾರ್ಯಕ್ರಮವೊಂದರಲ್ಲಿ ತಮಿಳುನಾಡಿನ ರೈತರನ್ನು ಹಾಡಿ ಹೊಗಳಿದ್ದಾರೆ. ರೈತರು ದಾಖಲೆ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಿರುವ ಹಾಗೂ ಜಲ ಸಂಪನ್ಮೂಲಗಳ ಸರಿಯಾದ ಬಳಕೆ ಮಾಡಿರುವ ಬಗ್ಗೆ ಶ್ಲಾಘಿಸಿದ್ದಾರೆ. ದೆಹಲಿಯಲ್ಲಿ ಪಂಜಾಬ್, ಹರ್ಯಾಣ ಹಾಗೂ ಉತ್ತರ ಪ್ರದೇಶದ ರೈತರು ಕೃಷಿ ಮಸೂದೆ ವಿರುದ್ಧ ಪ್ರತಿಭಟಿಸುತ್ತಿರುವ ಸಂದರ್ಭದಲ್ಲಿ ಪಿಎಂ ಮೋದಿ ಈ ಹೇಳಿಕೆ ನೀಡಿದ್ದಾರೆಂಬುವುದು ಉಲ್ಲೇಖನೀಯ.
"
ನಾನು ತಮಿಳುನಾಡು ರೈತರನ್ನು ದಾಖಲೆ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಿರುವ ಹಾಗೂ ಜಲ ಸಂಪನ್ಮೂಲಗಳ ಸರಿಯಾದ ಬಳಕೆ ಮಾಡುತ್ತಿರುವುದಕ್ಕೆ ಶ್ಲಾಘಿಸುತ್ತೇನೆ. ಜಲ ಸಂರಕ್ಷಣೆಗೆ ನಮ್ಮಿಂದ ಏನು ಮಾಡಲು ಸಾಧ್ಯವೋ, ಅದೆಲ್ಲವನ್ನೂ ನಾವು ಮಾಡಬೇಕು ಎಂದಿದ್ದಾರೆ.
ಚೆನ್ನೈನ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ತಮಿಳುನಾಡು ಸರ್ಕಾರದ ಹಲವಾರು ಯೋಜನೆಗಳನ್ನು ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿದ ಬಳಿಕ ಪಿಎಂ ಮೋದಿ ಇಲ್ಲಿನ ಕಾಲುವೆ ಸಾವಿರಾರು ವರ್ಷಗಳಿಂದ ದೇಶದ ಜನರ ಬಟ್ಟಲಿಗೆ ಅಕ್ಕಿ ಎಂಬ ವರದಾನ ನೀಡುತ್ತಿದೆ. ವಿಶಾಲವಾಗಿರುವ ಈ ಕಾಲುವೆ ನಮ್ಮ ಶ್ರೀಮಂತ ಇತಿಹಾಸದ ಜೀವಂತಿಕೆಗೆ ಸಾಕ್ಷಿಯಾಗಿದೆ. ಇಂದು ನಾವು ಚೆನ್ನೈನಿಂದ ಇಂತಹುದೇ ನಾವೀನ್ಯತೆ ಮತ್ತು ಸ್ವದೇಶೀ ನಿರ್ಮಾಣದ ಸಂಕೇತವಾಗಿರುವ ಯೋಜನೆಗಳನ್ನು ಪ್ರಾರಂಭಿಸುತ್ತಿದ್ದೇವೆ. ಈ ಯೋಜನೆಗಳು ತಮಿಳುನಾಡನ್ನು ಅಭಿವೃದ್ಧಿಯ ಪಥಕ್ಕೊಯ್ಯಲಿವೆ ಎಂದಿದ್ದಾರೆ.