ದೆಹಲಿ ಸ್ಫೋಟದ ಬಳಿಕ ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ, ಉನ್ನತ ಮಟ್ಟದ ಸಭೆ, ಘಟನೆಯಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಭಯೋತ್ಪಾದಕ ಕೃತ್ಯದ ಶಂಕೆ ಹೆಚ್ಚಾಗುತ್ತಿದ್ದು, ಇದರ ಬೆನ್ನಲ್ಲೇ ಮೋದಿ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿ (ನ.10) ದೆಹಲಿ ಕಾರು ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಘಟನೆಯಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ. ದೆಹಲಿ, ಬೆಂಗಳೂರು, ಮುಂಬೈ, ಕೋಲ್ಕತಾ ಸೇರಿದಂತೆ ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ದೆಹಲಿ ಕಾರು ಸ್ಫೋಟ ಪ್ರಕರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ಪ್ರಧಾನಿ ಮೋದಿ ಸಾಂತ್ವನ ಹೇಳಿದ್ದರೆ, ಗಾಯಾಳುಗಳು ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಇದೇ ವೇಳೆ ಘಟನೆ ಕುರಿತು ಮಾತನಾಡಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್ ಮೂಲಕ ಪ್ರತಿಕ್ರಿಯೆ
ದೆಹಲಿ ಕಾರು ಸ್ಫೋಟದ ಬಳಿಕ ಪ್ರಧಾನಿ ಮೋದಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇಂದು ಸಂಜೆ ದೆಹಲಿ ಸ್ಫೋಟದಲ್ಲಿ ತಮ್ಮ ಆಪ್ತರನ್ನು ಕಳೆದುಕೊಂಡ ಕುಟುಂಬಕ್ಕೆ ನನ್ನ ಸಾಂತ್ವನಗಳು. ಈ ವೇಳೆ ಗಾಯಾಳುಗಳು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಈ ಘಟನೆಯಲ್ಲಿ ಸಂತ್ರಸ್ತರಾಗಿರುವ ಎಲ್ಲರಿಗೂ ಅಧಿಕಾರಿಗಳು ಸೂಕ್ತ ನೆರವು ನೀಡಲಾಗುತ್ತದೆ. ಪರಿಸ್ಥಿತಿ ಕುರಿತು ಗೃಹ ಸಚಿವ ಅಮಿತ್ ಶಾ ಹಾಗೂ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಉನ್ನತ ಮಟ್ಟದ ಸಭೆ ಕರೆದ ಅಮಿತ್ ಶಾ
ದೆಹಲಿಯಲ್ಲಿ ನಡೆದ ಕಾರು ಸ್ಫೋಟ ಘಟನೆ ಕುರಿತು ಗೃಹ ಸಚಿವ ಅಮಿತ್ ಶಾ ಈಗಾಗಲೇ ಅಧಿಕಾರಿಗಳಿಂದ ನಿರಂತರ ಮಾಹಿತಿ ಪಡೆಯುತ್ತಿದ್ದಾರೆ. ಈಗಾಗಲೇ ಘಟನಾ ಸ್ಥಳ ಹಾಗೂ ಗಾಯಾಳುಗಳನ್ನು ದಾಖಲಿಸಿದ್ದ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಇಷ್ಟೇ ಅಲ್ಲ ಇದೀಗ ಅಮಿತ್ ಶಾ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಭದ್ರತಾ ಪಡೆಗಳ ಪ್ರಮುಖರು, ಗುಪ್ತಚರ ಇಲಾಖೆ ಸೇರಿದಂತೆ ಹಲವು ಪ್ರಮುಖರು ಈ ಸಬೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸ್ಫೋಟಗೊಂಡ ಕಾರು ಮಾಲೀಕ ಪೊಲೀಸ್ ವಶಕ್ಕೆ
ದೆಹಲಿಯಲ್ಲಿ ಸ್ಫೋಟಗೊಂಡ ಕಾರು ಮಾಲೀಕ ಸಲ್ಮಾನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಲ್ಮಾನ್ನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.ಈ ವೇಳೆ ತಾನು ಕಾರು ಮಾರಾಟ ಮಾಡಿದ್ದೆ ಎಂದಿದ್ದಾರೆ. ನದೀಮ್ ಎಂಬಾತನಿಗೆ ಕಾರು ಮಾರಾಟ ಮಾಡಿರುವುದಾಗಿ ಹೇಳಿದ್ದಾನೆ. ಇದೀಗ ಪೊಲೀಸರು ನದೀಮ್ಗೆ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ವಿಶೇಷ ಅಂದರೆ ಈ ಸಲ್ಮಾನ್ ಫರೀದಾಬಾದ್ ನಿವಾಸಿ. ಇದೇ ಫರೀದಾಬಾದ್ನಲ್ಲಿ ಇಂದು 2,9000 ಕೆಜಿ ಸ್ಫೋಟಕ ಪತ್ತೆಯಾಗಿತ್ತು. ಭದ್ರತಾ ಪಡೆಗಳು ದಾಳಿ ನಡೆಸಿ ಅತೀ ದೊಡ್ಡ ಭಯೋತ್ಪಾದಕ ಕೃತ್ಯವನ್ನು ವಿಫಲಗೊಳಿಸಿತ್ತು. ಇದರ ಬೆನ್ನಲ್ಲೇ ಈ ದೆಹಲಿ ಸ್ಫೋಟ ನಡೆದಿದೆ.
