5 ರಾಜ್ಯಗಳಲ್ಲಿ ಕೊರೋನಾ ಅಬ್ಬರ, ಮೋದಿ ದಿಢೀರ್ ಸಭೆ!
ಮೋದಿ ದಿಢೀರ್ ಕೊರೋನಾ ಸಭೆ| ಸೋಂಕು ತೀವ್ರ ಬೆನ್ನಲ್ಲೇ ಅಧಿಕಾರಿಗಳೊಡನೆ ಚರ್ಚೆ
ನವದೆಹಲಿ(ಫೆ.24): ಕಳೆದ ಕೆಲ ದಿನಗಳಿಂದ ದೇಶಾದ್ಯಂತ ಕೊರೋನಾ ವೈರಸ್ ಹಬ್ಬುವಿಕೆ ತೀವ್ರತೆ ಹೆಚ್ಚಾಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ ಕಚೇರಿಯಲ್ಲೇ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದರು.
ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೇರಿದಂತೆ ಕೊರೋನಾ ನಿಯಂತ್ರಣದಲ್ಲಿ ಪಾಲುದಾರಿಕೆ ಹೊಂದಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಈ ದಿಢೀರ್ ಸಭೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ಪಂಜಾಬ್ ರಾಜ್ಯಗಳಲ್ಲಿ ಅತಿಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆ ಕಾರಣವೇನು? ಈ ಸೋಂಕಿತರನ್ನು ಗುಣಮುಖಗೊಳಿಸಿ, ಸೋಂಕು ಹೆಚ್ಚು ತೀವ್ರತೆಯಿಂದ ವ್ಯಾಪಿಸದಂತೆ ಏನೆಲ್ಲಾ ಮುಂದಾಲೋಚನೆ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಅಧಿಕಾರಿಗಳಿಂದ ಮೋದಿ ಅವರು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಜೊತೆಗೆ ಈ ಸಂಬಂಧ ಹೆಚ್ಚು ನಿಗಾ ವಹಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎನ್ನಲಾಗಿದೆ.