* ದೇಶಕ್ಕೆ ದ್ರೋಹ ಬಗೆದವರಿಗೆ ಸುರಕ್ಷಿತ ತಾಣ ಸಿಗಕೂಡದು: ಮೋದಿ* ಸಿವಿಸಿ, ಸಿಬಿಐ ಅಧಿಕಾರಿಗಳಿಗೆ ಪ್ರಧಾನಿ ಸೂಚನೆ* ನೀರವ್‌, ಚೋಕ್ಸಿ, ಮಲ್ಯ ಹೆಸರೆತ್ತದೇ ಚಾಟಿ

ಕೆವಾಡಿಯಾ(ಅ.21): ದೇಶಕ್ಕೆ ದ್ರೋಹ ಎಸಗುವವರಿಗೆ ವಿಶ್ವದ ಎಲ್ಲಿಯೂ ಸುರಕ್ಷಿತ ತಾಣಗಳು ಸಿಗದಂತೆ ನೋಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕೇಂದ್ರ ಜಾಗ್ರತ ಆಯೋಗ(CVC), ಹಾಗೂ ಸಿಬಿಐ(CBI) ಅಧಿಕಾರಿಗಳಿಗೆ ಬುಧವಾರ ನಿರ್ದೇಶಿಸಿದ್ದಾರೆ.

Add Asianetnews Kannada as a Preferred SourcegooglePreferred

ವಿಜಯ್‌ ಮಲ್ಯ(Vijay Mallya), ನೀರವ್‌ ಮೋದಿ(Nirav Modi), ಮೆಹುಲ್‌ ಚೋಕ್ಸಿ(Mehul Choksi) ಸೇರಿದಂತೆ ಸಾಲ ಪಡೆದು ವಿದೇಶದಲ್ಲಿ ಅಡಗಿ ಕುಳಿತವರನ್ನು ಭಾರತಕ್ಕೆ ಕರೆತರುವುದಕ್ಕೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಿರುವ ಸಂದರ್ಭದಲ್ಲೇ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.

ಸಿವಿಸಿ, ಸಿಬಿಐ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ದೇಶ, ದೇಶದ ಜನತೆಯ ವಿರುದ್ಧ ಕಾರ್ಯಾಚರಿಸುವವರು ಎಷ್ಟೇ ಪ್ರಭಾವಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ನೀವು ಈ ಮಣ್ಣಿಗಾಗಿ ಹಾಗೂ ಭಾರತ ಮಾತೆಗಾಗಿ ಕೆಲಸ ಮಾಡುತ್ತಿದ್ದೀರೆಂಬುದು ನಿಮಗೆ ನೆನಪಿರಲಿ. ನಾವು ದೇಶದ ಹಿತಾಶಕ್ತಿಗಾಗಿ ಕೆಲಸ ಮಾಡಬೇಕು’ ಎಂದರು.

‘ದೇಶದಲ್ಲಿ ಭ್ರಷ್ಟಾಚಾರ ತಡೆಯಲು ಸಾಧ್ಯವಿದೆ ಎಂಬ ನಂಬಿಕೆ ಜನರಲ್ಲಿ ಉಂಟುಮಾಡಲು 6-7 ವರ್ಷಗಳಲ್ಲಿ ಸಾಧ್ಯವಾಗಿದೆ. ಅವರು ಸರ್ಕಾರದ ಯೋಜನೆಯ ಫಲವನ್ನು ಯಾವುದೇ ಏಜೆಂಟ್‌ ಸಹಾಯವಿಲ್ಲದೇ ಪಡೆದುಕೊಳ್ಳಬೇಕು. ಭ್ರಷ್ಟಾಚಾರ ಸಾಮಾನ್ಯ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಅದು ದೇಶದ ಪ್ರಗತಿಗೂ ಅಡ್ಡಿ’ ಎಂದರು.