ಪ್ರಧಾನಿಗೆ ‘ರಿಪೋರ್ಟ್ ಕಾರ್ಡ್’ ಸಲ್ಲಿಸಿದ ಸಚಿವರು: 9 ತಿಂಗಳಲ್ಲಿ 9 ವರ್ಷಗಳ ಸಾಧನೆ ವಿವರಿಸಿ ಎಂದು ಮೋದಿ ಕರೆ
ಚುನಾವಣೆ ಇನ್ನು 9 ತಿಂಗಳಲ್ಲಿ ಬರಲಿದೆ. ಕಳೆದ 9 ವರ್ಷದಲ್ಲಿ ಮಾಡಿದ ಸಾಧನೆಯನ್ನು ಇನ್ನು 9 ತಿಂಗಳಲ್ಲಿ ಜನರಿಗೆ ತಿಳಿಸಿ ಎಂದು ಪ್ರಧಾನಿ ಮೋದಿ ಕೇಂದ್ರ ಸಚಿವರಿಗೆ ಸೂಚಿಸಿದರು ಎಂದು ಮೂಲಗಳು ಹೇಳಿವೆ.
ನವದೆಹಲಿ (ಜುಲೈ 4, 2023): ಕೇಂದ್ರ ಸಚಿವ ಸಂಪುಟ ಪುನಾರಚನೆಯ ಬಗ್ಗೆ ವದಂತಿಗಳು ಹಬ್ಬಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ಎಲ್ಲಾ 79 ಸಚಿವರ ಜೊತೆಗೆ ಸಭೆ ನಡೆಸಿದರು. ಈ ವೇಳೆ ಹಲವು ಸಚಿವರು ತಾವು ಕೈಗೊಂಡಿರುವ ಕೆಲಸಗಳ ಪ್ರಗತಿ ವರದಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮೋದಿ, ಚುನಾವಣೆ ಇನ್ನು 9 ತಿಂಗಳಲ್ಲಿ ಬರಲಿದೆ. ಕಳೆದ 9 ವರ್ಷದಲ್ಲಿ ಮಾಡಿದ ಸಾಧನೆಯನ್ನು ಇನ್ನು 9 ತಿಂಗಳಲ್ಲಿ ಜನರಿಗೆ ತಿಳಿಸಿ ಎಂದು ಸೂಚಿಸಿದರು ಎಂದು ಮೂಲಗಳು ಹೇಳಿವೆ. ಇದೇ ವೇಳೆ 2047ರ ವೇಳೆಗೆ ದೇಶ ಸಾಧಿಸಬಹುದಾದ ಪ್ರಗತಿಯ ವಿವರಣೆಯನ್ನೂ ಸಭೆಯಲ್ಲಿ ನೀಡಲಾಯಿತು ಎಂದು ಅವು ಹೇಳಿವೆ.
ಇದನ್ನು ಓದಿ: ಸಂಪುಟ ಪುನಾರಚನೆ ಗುಸುಗುಸು ಮಧ್ಯೆ ಇಂದು ಮೋದಿ ಮಂತ್ರಿಮಂಡಲ ಸಭೆ: ಎನ್ಸಿಪಿ ಪ್ರಫುಲ್ ಪಟೇಲ್ಗೆ ಮಂತ್ರಿಗಿರಿ?
ಇನ್ನು, ಈ ಸಂಬಂಧ ಸೋಮವಾರ ರಾತ್ರಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ‘’ಮಂತ್ರಿ ಮಂಡಳಿಯೊಂದಿಗೆ ಫಲಪ್ರದ ಸಭೆ ನಡೆದಿದ್ದು, ಅಲ್ಲಿ ನಾವು ವೈವಿಧ್ಯಮಯ ನೀತಿ ಸಂಬಂಧಿತ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ’’ ಎಂದಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ.
2024ರ ಲೋಕಸಭೆ ಚುನಾವಣೆ ಹಾಗೂ ಈ ವರ್ಷ 5 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆವ ಹಿನ್ನೆಲೆಯಲ್ಲಿ ಈ ಸಭೆ ಸಾಕಷ್ಟು ಮಹತ್ವ ಪಡೆದಿದ್ದು, ಸಂಪುಟ ಬದಲಾವಣೆ, ಪಕ್ಷ ಸಂಘಟನೆ, ಚುನಾವಣೆಯ ರಣತಂತ್ರದ ಬಗ್ಗೆ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪ್ರತಿ ವರ್ಷ ಪ್ರತಿ ರೈತನಿಗೆ 50 ಸಾವಿರ, ಇದುವೇ ಮೋದಿ ಗ್ಯಾರಂಟಿ: ಕಾಂಗ್ರೆಸ್ ಗ್ಯಾರಂಟಿಗೆ ಪ್ರಧಾನಿ ಮೋದಿ ಟಾಂಗ್
ಅಲ್ಲದೇ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಆಧರಿಸಿ ವಿಪಕ್ಷಗಳು ಟೀಕೆ ಮಾಡಬಹುದು ಎಂಬ ಕಾರಣಕ್ಕೆ ಈ ಕುರಿತಾಗಿ ತಂತ್ರಗಳನ್ನು ಹೆಣೆಯಲಾಗಿದೆ. ಅಲ್ಲದೇ ಕೇಂದ್ರ ಸಂಪುಟದಲ್ಲಿ ಹಲವು ಬದಲಾವಣೆ ಜೊತೆಗೆ ವಿವಿಧ ರಾಜ್ಯಗಳಲ್ಲಿನ ಪಕ್ಷದ ಅಧ್ಯಕ್ಷ ಹುದ್ದೆ, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಹಲವು ಸಂಘಟನಾತ್ಮಕ ಹುದ್ದೆಗಳಲ್ಲೂ ಬದಲಾವಣೆ ಮಾಡುವ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: 2 ಕಾಯ್ದೆ ಇಟ್ಕೊಂಡು ದೇಶ ನಡೆಸಲು ಹೇಗೆ ಸಾಧ್ಯ? ಏಕರೂಪ ನಾಗರಿಕ ಸಂಹಿತೆ ಪರ ಪ್ರಧಾನಿ ಮೋದಿ ಬ್ಯಾಟಿಂಗ್