ಪಶ್ಚಿಮ ಬಂಗಾಳ ಹಿಂಸಾಚಾರ: ಕಾನೂನು ಸುವ್ಯವಸ್ಥೆ ಬಗ್ಗೆ ಪಿಎಂ ಮೋದಿ ಕಳವಳ!
ಪಶ್ಚಿಮ ಬಂಗಾಳದಲ್ಲಿ ಗೆದ್ದು ಬೀಗಿದ ಮಮತಾ ಪಕ್ಷ| ಫಲಿತಾಂಶದ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ| ಹದಗೆಟ್ಟ ಕಾನೂನು ಸುವ್ಯವಸ್ಥೆ ಬಗ್ಗೆ ಮೋದಿ ಕಳವಳ
ಕೋಲ್ಕತ್ತಾ(ಮೇ.04) ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ. ಹೀಗಿರುವಾಗ ತಮ್ಮ ಪಕ್ಷದ ಅನೇಕ ಕಾರ್ಯಕರ್ತರ ಹತ್ಯೆ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಮಂಗಳವಾರದಂದು ಬಂಗಾಳದ ರಾಜ್ಯಪಾಲ ಜಗದೀಪ್ ದನ್ಖಡ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಹಿಂಸಾಚಾರದ ಕುರಿತಾಗಿ ಮಾತನಾಡಲು ಪ್ರಧಾನಿ ಮೋದಿ ಕರೆ ಮಾಡಿದ್ದರು. ಈ ವೇಳೆ ಅವರು ಇಲ್ಲಿನ ಹದಗೆಟ್ಟ ಕಾನೂನು ಸುವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆಂದು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿಗೂ ಟ್ಯಾಗ್ ಮಾಡಿ ದನ್ಖಡ್ ಅವರು ಟ್ವೀಟ್ ಮಾಡಿದ್ದು, 'ರಾಜ್ಯದಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಧಾನಿ ಕರೆ ಮಾಡಿ ಕಳವಳ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ, ಲೂಟಿ ಮತ್ತು ಕೊಲೆಗಳ ಬಗ್ಗೆ ನಾನು ಪ್ರಧಾನ ಮಂತ್ರಿ ಕಚೇರಿ ಆತಂಕ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಲು ತ್ವರಿತ ಪ್ರಯತ್ನ ನಡೆಯಬೇಕು' ಎಂದಿದ್ದಾರೆ.
ಇನ್ನು ಸೋಮವಾಋದಂದು ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ್ದ ಮಮತಾ ಬ್ಯಾನರ್ಜಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು. ಅಲ್ಲದೇ ಹಿಂಸಾಚಾರಕ್ಕೆ ಬಿಜೆಪಿಗರೇ ಕಾರಣ ಎಂದು ದೂರಿದ್ದರು. ಬಂಗಾಳ ಒಂದು ಶಾಂತಿಪ್ರಿಯ ರಾಜ್ಯ. ಚುನಾವಣೆ ವೇಳೆ ಕೊಂಚ ಇದರ ತಾಪ ಇತ್ತು. ಬಿಜೆಪಿ ಬಹಳಷ್ಟು ಹಿಂಸೆ ನೀಡಿತ್ತುಯ. ಸಿಎಪಿಎಫ್ ಕೂಡ ಹೀಗೇ ಮಾಡಿತು.. ಆದರೆ ನಾನು ಶಾಂತಿಯನ್ನು ಕಾಪಾಡಿಕೊಳ್ಳಬೇಕು ಮತ್ತು ಹಿಂಸಾಚಾರದಲ್ಲಿ ತೊಡಗಬಾರದು ಎಂದು ಜನರಿಗೆ ಮನವಿ ಮಾಡುತ್ತೇನೆ. ಯಾವುದೇ ವಿವಾದ ಇದ್ದರೆ ಪೊಲೀಸರಿಗೆ ಮಾಹಿತಿ ನೀಡಿ. ಪೊಲೀಸರು ಕಾನೂನು ಸುವ್ಯವಸ್ಥೆ ನಿರ್ವಹಿಸಬೇಕಾಗುತ್ತದೆ ಎಂದಿದ್ದರು.