ಹೊಸ ಸಂಸತ್ನಲ್ಲಿ ಹೊಗೆ ಬಾಂಬ್: ಮೈಸೂರಲ್ಲೇ ಶುರುವಾಗಿತ್ತು ಸಂಚು..!
ಆರೋಪಿಗಳೆಲ್ಲಾ ಬೇರೆ ಬೇರೆ ರಾಜ್ಯದವರಾದರೂ ಸಮಾನ ಚಿಂತನೆ ಹೊಂದಿದ್ದ ಕಾರಣ ಜಾಲತಾಣದಲ್ಲಿನ ಭಗತ್ಸಿಂಗ್ ಫ್ಯಾನ್ಸ್ ಕ್ಲಬ್ ಎಂಬ ಗುಂಪಿನ ಪರಸ್ಪರ ಪರಿಚಿತರಾಗಿದ್ದರು. ಹೀಗೇ ಜಾಲತಾಣದಲ್ಲಿ ಪರಿಚಯವಾದ ಬಳಿಕ ಅಲ್ಲಿ ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆ, ಕಾರ್ಮಿಕರ ಸಮಸ್ಯೆ ಮೊದಲಾದ ವಿಷಯಗಳ ಬಗ್ಗೆ ಸಿಗ್ನಲ್ ಎಂಬ ಖಾಸಗಿ ಆ್ಯಪ್ನಲ್ಲಿ ಸುದೀರ್ಘ ಚರ್ಚೆ ನಡೆಸಿದ್ದರು ಎಂಬ ವಿಷಯ ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ.
![Plan Started in Mysuru Itself of Smoke Bomb in the New Parliament Case grg Plan Started in Mysuru Itself of Smoke Bomb in the New Parliament Case grg](https://static-ai.asianetnews.com/images/01hhhqc15c9avejsssrja5t8cr/Parliament-security-breach-1702475728042_363x203xt.jpg)
ನವದೆಹಲಿ(ಡಿ.15): ಸಂಸತ್ತಿನ ಒಳಗೆ ಮತ್ತು ಹೊರಗೆ ಹೊಗೆ ಬಾಂಬ್ಸ್ಫೋಟದ ಮೂಲಕ ಭಾರೀ ಭದ್ರತಾ ಲೋಪವಾದ ಘಟನೆಗೆ ಮುಹೂರ್ತ ಇಟ್ಟಿದ್ದೇ ಮೈಸೂರಿನಲ್ಲಿ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಆರೋಪಿಗಳೆಲ್ಲಾ ಬೇರೆ ಬೇರೆ ರಾಜ್ಯದವರಾದರೂ ಸಮಾನ ಚಿಂತನೆ ಹೊಂದಿದ್ದ ಕಾರಣ ಜಾಲತಾಣದಲ್ಲಿನ ಭಗತ್ಸಿಂಗ್ ಫ್ಯಾನ್ಸ್ ಕ್ಲಬ್ ಎಂಬ ಗುಂಪಿನ ಪರಸ್ಪರ ಪರಿಚಿತರಾಗಿದ್ದರು. ಹೀಗೇ ಜಾಲತಾಣದಲ್ಲಿ ಪರಿಚಯವಾದ ಬಳಿಕ ಅಲ್ಲಿ ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆ, ಕಾರ್ಮಿಕರ ಸಮಸ್ಯೆ ಮೊದಲಾದ ವಿಷಯಗಳ ಬಗ್ಗೆ ಸಿಗ್ನಲ್ ಎಂಬ ಖಾಸಗಿ ಆ್ಯಪ್ನಲ್ಲಿ ಸುದೀರ್ಘ ಚರ್ಚೆ ನಡೆಸಿದ್ದರು ಎಂಬ ವಿಷಯ ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ.
ಬಳಿಕ ಹೀಗೆ ನಡೆದ ಚರ್ಚೆಗೆ ತಾರ್ಕಿಕ ಅಂತ್ಯ ನೀಡಲು ಬಯಸಿದ ಆರೋಪಿಗಳು ಈ ಕುರಿತು ಚರ್ಚಿಸಲು 18 ತಿಂಗಳ ಹಿಂದೆ ಮೈಸೂರಿನಲ್ಲಿ ತಮ್ಮ ಮೊದಲ ಸಭೆ ನಡೆಸಿದ್ದರು. ಈ ಸಭೆಯಲ್ಲಿ ದೇಶದ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆಯುವುದು ಹೇಗೆ? ಅದಕ್ಕೆ ಏನೇನು ಮಾರ್ಗಗಳಿವೆ ಎಂಬ ಬಗ್ಗೆ ಸಮಾಲೋಚನೆ ನಡೆಸಿದ್ದರು. ಈ ವೇಳೆ ನಮ್ಮ ಮುಂದಿರುವ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ಆಗಬೇಕು. ಈ ನಿಟ್ಟಿನಲ್ಲಿ ನಾವು ಹೆಜ್ಜೆ ಇಡಬೇಕು ಎಂಬ ತೀರ್ಮಾನಕ್ಕೆ ಆರೋಪಿಗಳು ಬಂದಿದ್ದರು ಎನ್ನಲಾಗಿದೆ.
News Hour: ಕ್ರಾಂತಿಕಾರಿ ಹುಚ್ಚಿನಲ್ಲಿ ದೇಶದ ಹೃದಯಕ್ಕೆ ಸ್ಮೋಕ್ ಬಾಂಬ್ ಎಸೆದು ದುಷ್ಕೃತ್ಯ!
ಇದಾದ 9 ತಿಂಗಳ ನಂತರ ಅಂದರೆ ಕಳೆದ ಮಾರ್ಚ್ನಲ್ಲಿ ಚಂಡೀಗಢ ರೈತರು ತಮ್ಮ ಬೇಡಿಕೆಗಾಗಿ ಹೋರಾಟ ನಡೆಸುತ್ತಿದ್ದ ವೇಳೆ ಮತ್ತೆ ಒಂದಾಗಿದ್ದ 6 ಆರೋಪಿಗಳು ತಮ್ಮ ದಾಳಿ ಯೋಜನೆಗೆ ಮತ್ತಷ್ಟು ಸ್ಪಷ್ಟ ಸ್ವರೂಪ ನೀಡಿದ್ದರು.
ಅದಾದ 4 ತಿಂಗಳ ನಂತರ ಸಾಗರ್ ಶರ್ಮಾ ಲಖನೌದಿಂದ ದೆಹಲಿಗೆ ಬಂದು ನೂತನ ಸಂಸತ್ತಿನ ಆಸುಪಾಸಿನ ಸ್ಥಳ, ಭದ್ರತೆ ಪರಿಶೀಲನೆ ನಡೆಸಿ ತೆರಳಿದ್ದ. ಇನ್ನೊಂದೆಡೆ ಮನೋರಂಜನ್ ಸಂಸತ್ನೊಳಗೆ ಪ್ರವೇಶಿಸಿ ಭದ್ರತಾ ಕ್ರಮಗಳನ್ನು ಪರಿಶೀಲಿಸಿಕೊಂಡು ಬಂದಿದ್ದ.
ದಾಳಿಗೆ ಅಂತಿಮ ಸಿದ್ಧತೆ:
ಹೀಗೆ ದೇಶದ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸಂಸತ್ ಮೇಲೆ ದಾಳಿ ಸೂಕ್ತ ಎಂಬ ನಿರ್ಧಾರಕ್ಕೆ ಬಂದ ಆರೋಪಿಗಳು 2001ರಲ್ಲಿನ ಸಂಸತ್ ಮೇಲೆ ದಾಳಿ ನಡೆದ ಘಟನೆಯ ವರ್ಷಾಚರಣೆ ದಿನವನ್ನೇ ದಾಳಿಗೆ ನಿಗದಿ ಮಾಡಿದರು. ಅದರಂತೆ ಶರ್ಮಾ, ಮನೋರಂಜನ್, ನೀಲಂ ಮತ್ತು ಅಮೋಲ್ಶಿಂಧೆ ಭಾನುವಾರ ದೆಹಲಿಗೆ ಆಗಮಿಸಿದ್ದರು. ಡಿ.10ರಂದು ನಾಲ್ವರೂ ಗುರುಗ್ರಾಮದಲ್ಲಿನ ವಿಕ್ಕಿ ಶರ್ಮಾನ ಮನೆಗೆ ತೆರಳಿ ಬುಧವಾರದವರೆಗೂ ಅಲ್ಲಿಯೇ ತಂಗಿದ್ದರು.
ಡಿ. 13, 2001ರಂದು ಸಂಸತ್ ಮೇಲೆರಗಿದ್ದರು ಐವರು ಉಗ್ರರು..! ಅದೇ ದಿನ ಮತ್ತೆ ನಡುಗಿತು ಲೋಕಸಭೆ..!
ಇನ್ನು ಘಟನೆ ನಡೆದ ದಿನ ಅಂದರೆ ಬುಧವಾರ ಬೆಳಗ್ಗೆ ಎಲ್ಲ ಆರೋಪಿಗಳು ದೆಹಲಿಯ ಇಂಡಿಯಾ ಗೇಟ್ ಬಳಿ ಸೇರಿಕೊಂಡು ಅಂತಿಮ ದಾಳಿಗೆ ಹೊರಟರು. ಈ ವೇಳೆ ಶಿಂಧ, ತಾನು ತಂದಿದ್ದ ಸ್ಮೋಕ್ ಕ್ಯಾನ್ ಅನ್ನು ಎಲ್ಲರಿಗೂ ಹಂಚಿದ್ದ.
ಬಳಿಕ ಆರೋಪಿಗಳೆಲ್ಲಾ ಸಂಸತ್ ಕಡೆಗೆ ತೆರಳಿದರು. ಈ ಪೈಕಿ ಪಾಸ್ ಹೊಂದಿದ್ದ ಸಾಗರ್ ಶರ್ಮಾ ಮತ್ತು ಮನೋರಂಜನ್ ಪ್ರೇಕ್ಷಕರ ಗ್ಯಾಲರಿಗೆ ತೆರಳಿ ಅಲ್ಲಿಂದ ಕಲಾಪದ ಸ್ಥಳಕ್ಕೆ ಹಾರಿ ಹೊಗೆ ಬಾಂಬ್ ಸಿಡಿಸಿದರು.
ಇತ್ತ ಸಂಸತ್ತಿನ ಹೊರಗೆ ನೀಲಂ ಮತ್ತು ಅಮೋಲ್ ಹೊಗೆ ಬಾಂಬ್ ಸಿಡಿಸಿದರು. ಇವರಿಬ್ಬರೂ ಹೊಗೆ ಬಾಂಬ್ ಸಿಡಿಸಿದ ದೃಶ್ಯವನ್ನು ಸ್ಥಳದಲ್ಲೇ ಇದ್ದ ಲಲಿತ್ ಶರ್ಮಾ ತನ್ನ ಮೊಬೈಲ್ನಲ್ಲಿ ಸೆರೆಹಿಡಿದು ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.