* ಆಲಪ್ಪುಳದಲ್ಲಿ ಮೇ 21ರಂದು ನಡೆದಿದ್ದ ಪಿಎಫ್‌ಐ ರಾರ‍ಯಲಿ* ಪಿಎಫ್‌ಐ ರಾರ‍ಯಲಿಯಲ್ಲಿ ಹಿಂದೂ ವಿರೋಧಿ ಘೋಷಣೆ: ಬಾಲಕನ ತಂದೆ ಸೆರೆ* ಪ್ರಕರಣದಲ್ಲಿ ಈವರೆಗೆ 20 ಜನರ ಬಂಧನ, ಬಾಲಕ ಸಮಾಲೋಚನೆ ಕೇಂದ್ರಕ್ಕೆ

ಕೊಚ್ಚಿ(ಮೇ.29): ಆಲಪ್ಪುಳದಲ್ಲಿ ಮೇ 21ರಂದು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ರಾರ‍ಯಲಿ ವೇಳೆ ಹಿಂದೂ, ಕ್ರೈಸ್ತರಿಗೆ ಬೆದರಿಕೆ ಹಾಕುವ ರೀತಿಯ ಘೋಷಣೆ ಕೂಗಿದ್ದ ಪುಟ್ಟಬಾಲಕನ ತಂದೆಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಾಲಕನನ್ನು ಹೆಗಲ ಮೇಲೆ ಹೊತ್ತೊಯ್ದಿದ ವ್ಯಕ್ತಿ ಸೇರಿದಂತೆ ಇದುವರೆಗೆ ಪ್ರಕರಣದಲ್ಲಿ 20 ಜನರನ್ನು ಬಂಧಿಸಲಾಗಿದೆ.

ಘಟನೆ ನಡೆದಾಗಿನಿಂದ ಕುಟುಂಬ ಆಲಪ್ಪುಳದಿಂದ ನಾಪತ್ತೆಯಾಗಿತ್ತು. ಕೊಚ್ಚಿಯಲ್ಲಿ ಬಾಲಕನ ತಂದೆ ಪತ್ತೆಯಾಗಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆಲಪ್ಪುಳಕ್ಕೆ ಕರೆದೊಯ್ಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಘೋಷಣೆ ಕೂಗಿದ ಬಾಲಕನನ್ನು ಶೀಘ್ರವೇ ಸರ್ಕಾರದ ಆಪ್ತ ಸಮಾಲೋಚನ ಕೇಂದ್ರಕ್ಕೆ ದಾಖಲಿಸುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.

ತಂದೆ ಸಮರ್ಥನೆ:

ಈ ನಡುವೆ ನನ್ನ ಮಗ ಇಂಥ ಘೋಷಣೆ ಕೂಗಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಇಂಥ ಘೋಷಣೆ ಕೂಗಿದ್ದಾನೆ. ಈ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಆದರೆ ಇದೀಗ ಯಾಗ ವಿವಾದವಾಯಿತೋ ಗೊತ್ತಿಲ್ಲ. ನಾವು ಪಿಎಫ್‌ಐ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇವೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ರಾರ‍ಯಲಿಯಲ್ಲಿ ಭಾಗಿಯಾಗಿದ್ದ ವೇಳೆ ನನ್ನ ಮಗ ಅದೇ ರೀತಿಯ ಘೋಷಣೆ ಕಲಿತುಕೊಂಡಿದ್ದಾನೆ ಎಂದು ಬಾಲಕನ ತಂದೆ ತಮ್ಮ ಮಗನನ್ನ ಸಮರ್ಥಿಸಿಕೊಂಡಿದ್ದಾರೆ.

ಘಟನೆ ಹಿನ್ನೆಲೆ:

ಮೇ 21ರಂದು ನಡೆದ ರಾರ‍ಯಲಿ ವೇಳೆ, ವ್ಯಕ್ತಿಯೊಬ್ಬನ ಹೆಗಲ ಮೇಲೆ ಕುಳಿತಿದ್ದ ಪುಟ್ಟಬಾಲಕನೊಬ್ಬ ‘ಆಹಾರವನ್ನು ಸಿದ್ಧಪಡಿಸಿಡಿ. ಯಮ ನಿಮ್ಮ ಮನೆ ಬಾಗಿಲಿಗೆ ಬರುತ್ತಾನೆ. ನೀವು ಇಲ್ಲಿ ಗೌರವಯುತವಾಗಿ ಬಾಳಿದರೆ, ನಮ್ಮ ಜಾಗದಲ್ಲಿ ವಾಸಿಸಬಹುದು. ಇಲ್ಲದೇ ಹೋದಲ್ಲಿ, ಏನಾಗುತ್ತದೆಯೋ ನಮಗೆ ಗೊತ್ತಿಲ್ಲ’ ಎಂದು ಹಿಂದೂ, ಕ್ರೈಸ್ತರ ವಿರುದ್ಧ ಘೋಷಣೆ ಕೂಗಿದ್ದ.