ಐಸಿಸ್‌, ಅಲ್‌ಖೈದಾ, ಲಷ್ಕರ್‌ ಸಂಘಟನೆಗಳಿಗೆ ಕಳುಹಿಸುವಲ್ಲಿ ಪಾತ್ರ, ದೇಣಿಗೆ ಹಣ ಕರ್ನಾಟಕ, ವಿವಿಧ ರಾಜ್ಯಗಳಲ್ಲಿ ಉಗ್ರ ಕೃತ್ಯಕ್ಕೆ ಬಳಕೆ 

ತಿರುವನಂತಪುರಂ(ಸೆ.24): ಎನ್‌ಐಎ ದಾಳಿ ಖಂಡಿಸಿ ವಿವಾದಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಶುಕ್ರವಾರ ಕರೆ ನೀಡಿದ್ದ ‘ಕೇರಳ ಬಂದ್‌’ ಹಿಂಸಾರೂಪಕ್ಕೆ ತಿರುಗಿದೆ. ಅನೇಕ ಕಡೆ ಅಂಗಡಿ-ಮುಂಗಟ್ಟುಗಳನ್ನು ಹಾಗೂ ವಾಹನಗಳನ್ನು ಧ್ವಂಸಗೊಳಿಸಲಾಗಿದೆ. ಸರ್ಕಾರಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಆರೆಸ್ಸೆಸ್‌ ಕಚೇರಿ ಮೇಲೆ ಪೆಟ್ರೋಲ್‌ ಬಾಂಬ್‌ ಎಸೆಯಲಾಗಿದೆ. ಈ ವೇಳೆ ನೂರಾರು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.

Add Asianetnews Kannada as a Preferred SourcegooglePreferred

ರಾಜ್ಯದಲ್ಲಿ ಮತ್ತೆ 14 ಬಂಧನ

ಬೆಂಗಳೂರು: ಎರಡು ಸಮುದಾಯಗಳ ನಡುವೆ ದ್ವೇಷ ಹಾಗೂ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ ಆರೋಪದ ಮೇರೆಗೆ ರಾಜ್ಯದ ವಿವಿಧೆಡೆ ವಶಕ್ಕೆ ಪಡೆಯಲಾಗಿದ್ದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ 14 ಮಂದಿ ಪ್ರಮುಖ ನಾಯಕರನ್ನು ಶುಕ್ರವಾರ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ 10 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಐವರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ನಿಷೇಧವಾದ್ರೂ ಚಿಂತೆ ಇಲ್ಲ, ಇದೇ ನೋಡಿ ಪಿಎಫ್ಐ ಸಂಸ್ಥೆಯ ಪ್ಲ್ಯಾನ್‌ ಬಿ!

ನವದೆಹಲಿ: ಮುಸ್ಲಿಂ ಯುವಕರ ಬ್ರೇನ್‌ವಾಶ್‌ ಮಾಡಿ ಅವರನ್ನು ನಿಷೇಧಿತ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌), ಅಲ್‌ ಖೈದಾ ಹಾಗೂ ಲಷ್ಕರ್‌ ಎ ತೊಯ್ಬಾ ಸೇರಿದಂತೆ ವಿವಿಧ ಸಂಘಟನೆಗಳಿಗೆ ಸೇರಿಸುವಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಹಾಗೂ ಮುಖಂಡರು ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದಲ್ಲಿ ಇಸ್ಲಾಮಿಕ್‌ ಆಡಳಿತ ಜಾರಿಗೊಳಿಸಲು ಪಿಎಫ್‌ಐ ಯತ್ನಿಸಿದೆ ಎಂದು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಗಂಭೀರ ಆರೋಪ ಮಾಡಿದೆ.

ಗುರುವಾರ ನಡೆಸಿದ ದಾಳಿಯಲ್ಲಿ ಎನ್‌ಐಎ ಸುಮಾರು 100 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿತ್ತು ಇಲ್ಲವೇ ವಶಕ್ಕೆ ತೆಗೆದುಕೊಂಡಿತ್ತು. ಬಂಧಿತರನ್ನು ತನ್ನ ವಶಕ್ಕೆ ನೀಡುವಂತೆ ಕೇರಳ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಎನ್‌ಐಎ ಈ ಮೇಲಿನ ಆರೋಪಗಳನ್ನು ಮಾಡಿದೆ ಎಂದು ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದಲ್ಲದೆ, ‘ಭಾರತ ಹಾಗೂ ವಿದೇಶದಲ್ಲಿ ದೇಣಿಗೆ ಸಂಗ್ರಹಿಸಿ, ಆ ಹಣವನ್ನು ಕರ್ನಾಟಕ, ಕೇರಳ, ತಮಿಳುನಾಡು, ಉತ್ತರ ಪ್ರದೇಶ ಹಾಗೂ ದಿಲ್ಲಿಯಂಥ ರಾಜ್ಯಗಳಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಬಳಸಿಕೊಂಡಿದೆ. ಉಗ್ರ ಚಟುವಟಿಕೆಗೆ ತರಬೇತಿ ನೀಡುವಲ್ಲೂ ಭಾಗಿಯಾಗಿದೆ. ದೇಶ ವಿರೋಧಿ ಚಟುವಟಿಕೆಗೆ ಯುವಕರನ್ನು ಪ್ರೇರೇಪಿಸಿದೆ’ ಎಂದು ಎನ್‌ಐಎ ರಿಮ್ಯಾಂಡ್‌ ವರದಿ ಹೇಳಿದೆ.

‘ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ಜನರ ಮನಸ್ಸಿನಲ್ಲಿ ಭಯ ಮೂಡಿಸುವುದು, ಕೋಮುಗಳ ನಡುವೆ ದ್ವೇಷ ಹಚ್ಚುವ ಕೆಲಸವನ್ನು ಪಿಎಫ್‌ಐ ಮಾಡಿದೆ. ಅಮಾಯಕರ ಕೊಲೆಯಲ್ಲಿ ಪಿಎಫ್‌ಐ ಭಾಗಿಯಾಗಿದೆ’ ಎಂದು ಅದು ದೂರಿದೆ.