#JanataCurfew ನಡುವೆ ಪೌರತ್ವ ವಿರೋಧಿ ಹೋರಾಟ; ಶಾಹೀನ್ ಬಾಗ್ನಲ್ಲಿ ಪೆಟ್ರೋಲ್ ಬಾಂಬ್!
ದೇಶದೆಲ್ಲೆಡೆ ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜನರು ಸ್ವಯಂ ದಿಗ್ಬಂಧನದ ಮೂಲಕ ಕೊರೋನಾ ವೈರಸ್ ತಡೆಗಟ್ಟಲು ದೇಶದ ಜನತೆ ಟೊಂಕ ಕಟ್ಟಿ ನಿಂತಿದ್ದಾರೆ. ಕೊರೋನಾ ವೈರಸ್ ಆತಂಕದ ನಡುವೆಯೂ ಶಾಹೀನ್ ಬಾಗ್ನಲ್ಲಿ ಪೌರತ್ವ ವಿರೋದಿ ಪ್ರತಿಭಟನೆ ನಡೆಯುತ್ತಲೇ ಇದೆ. ಇಂದು ಪ್ರತಿಭಟನೆ ವೇಳೆ ಪೊಲೀಸರತ್ತ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ.
ನವದೆಹಲಿ(ಮಾ.22): ಕೊರೋನಾ ವೈರಸ್ ತಡೆಗಟ್ಟಲು ಜನತಾ ಕರ್ಫ್ಯೂನಿಂದಾಗಿ ಇಡೀ ದೇಶವೇ ಸ್ಥಬ್ತವಾಗಿತ್ತು. ದೆಹಲಿ ಕೂಡ ಶಾಂತವಾಗಿತ್ತು. ಆದರೆ ಕಳೆದ 90 ದಿನಗಳಿಂದ ನಡೆಯುತ್ತಿರುವ ಪೌರತ್ವ ವಿರೋಧಿ ಪ್ರತಿಭಟನೆ ಜತನಾ ಕರ್ಫ್ಯೂ ದಿನ ಸದ್ದು ಮಾಡಿದೆ. ಮುಂಜಾನೆ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ಭದ್ರತೆ ಒದಗಿಸುತ್ತಿದ್ದ ಪೊಲೀಸರ ಹಾಕಿದ್ದ ಬ್ಯಾರಿಕೇಡ್ನತ್ತ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.
ಶಾಹೀನ್ ಬಾಗ್ನಲ್ಲಿ 80 ದಿನದಿಂದ ಏನು ನಡೆಯುತ್ತಿದೆ?
ಶಾಹೀನಾ ಬಾಗ್ ಪ್ರತಿಭಟನಾ ಸ್ಥಳದ ಸುತ್ತ ಪೊಲೀಸ್ ಬ್ಯಾರಿಕೇಡ್ ಹಾಕಲಾಗಿತ್ತು. ಬೈಕ್ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಬ್ಯಾರಿಕೇಡ್ನತ್ತ ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದಾರೆ. ಬಳಿಕ ಇದೇ ದುರ್ಷರ್ಮಿಗಳು ಜಾಮಿಯಾ ಯುನಿವರ್ಸಿಟಿ ಬಳಿ ಕ್ರ್ಯೂಡ್ ಬಾಂಬ್ ಎಸೆದಿದ್ದಾರೆ. ಬ್ಯಾರಿಕೇಡ್ ಹಾಕಿದ್ದರಿಂದ ಅದೃಷ್ಠವಶಾತ್ ಪ್ರತಿಭಟನಾಕಾರರು ಹಾಗೂ ಪೊಲೀಸರಿಗೆ ಯಾವುದೇ ಅಪಾಯ ಎದುರಾಗಲಿಲ್ಲ. ಇದೀಗ ಹಿರಿಯ ಪೊಲೀಸ್ ಅಧಿಕಾರಿ ಗ್ಯಾನೇಶ್ ಕುಮಾರ್ ತನಿಖೆ ಆರಂಭಿಸಿದ್ದಾರೆ.
ದಿಲ್ಲಿ ಶಾಹೀನ್ ಬಾಗ್ ಪೌರತ್ವ ಹೋರಾಟಕ್ಕೂ ಪಿಎಫ್ಐನಿಂದ ಹಣ!
ಸಿಸಿಟಿ ದೃಶ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ. ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೃತ್ಯ ಎಸಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶನಿವಾರ(ಮಾ.21) ಪ್ರತಿಭಟನಾಕಾರರ ಗುಂಪು ಪೊಲೀಸರ ಜೊತೆ ಮಾತುಕತೆ ನಡೆಸಿತ್ತು. ಪ್ರತಿಭಟನೆಯನ್ನು ನಿಲ್ಲಿಸಲು ಒಂದು ಗುಂಪು ಇಚ್ಚಿಸಿತ್ತು. ಆದರೆ ಮತ್ತೊಂದು ಗುಂಪು ಪ್ರತಿಭಟನೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿತ್ತು. ಈ ಕುರಿತು ಪೊಲೀಸರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸಲಾಗಿತ್ತು. ಬಳಿಕ ಜನತಾ ಕರ್ಫ್ಯೂ ದಿನವೂ ಪ್ರತಿಭಟನೆ ಮುಂದುವರಿಸುವ ತೀರ್ಮಾನಕ್ಕೆ ಬರಲಾಗಿತ್ತು.
ಪೆಟ್ರೋಲ್ ಬಾಂಬ್ ಪ್ರಕರಣದಿಂದ ಇದೀಗ ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಲು ಮುಂದಾಗಿದ್ದಾರೆ.