ದಿಢೀರ್‌ ಸುಡುಬಿಸಿಲು| 30 ವರ್ಷದಲ್ಲಿ ಮೊದಲ ಬಾರಿಗೆ 3 ಡಿಗ್ರಿ ಸೆಲ್ಸಿಯಸ್‌ ಏರಿಕೆ| 6 ಜಿಲ್ಲೆಗಳಲ್ಲಿ ಭಾರೀ ಸುಡುಬಿಸಿಲಿನ ಬಗ್ಗೆ ಮುನ್ನೆಚ್ಚರಿಕೆ

ತಿರುವನಂತಪುರ[ಫೆ.18]: ಇನ್ನೇನು ಚಳಿಗಾಲ ಕಳೆಯಿತು ಎನ್ನುವ ಹಂತದಲ್ಲೇ ಭಾರತದ ಪ್ರಸಿದ್ಧ ಪ್ರವಾಸಿ ತಾಣವಾದ ಕೇರಳದಲ್ಲಿ ತಾಪಮಾನದಲ್ಲಿ ದಿಢೀರ್‌ ಏರಿಕೆಯಾಗಿದೆ. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ತಾಪಮಾನದಲ್ಲಿ 3 ಡಿ.ಸೆ.ವರೆಗೂ ಏರಿಕೆ ದಾಖಲಾಗುತ್ತಿದೆ. ಇಂಥ ಬೆಳವಣಿಗೆ ಕಳೆದ 30 ವರ್ಷಗಳಲ್ಲಿ ಇದೇ ಮೊದಲು. ಇದರ ಬೆನ್ನಲ್ಲೇ ಹವಮಾನ ಇಲಾಖೆಯ ಕೇರಳದ 6 ಜಿಲ್ಲೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ಉಷ್ಣಾಂಶ ಸಾಮಾನ್ಯಕ್ಕಿಂತ 3 ಡಿ.ಸೆನಷ್ಟುಹೆಚ್ಚಿರಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದರ ಬೆನ್ನಲ್ಲೇ ಸೋಮವಾರ ತಿರುವನಂತಪುರದಲ್ಲಿ 34.9 ಡಿ.ಸೆ., ಆಲಪ್ಪುಳದಲ್ಲಿ 36.8 ಡಿ.ಸೆ., ಕೊಟ್ಟಾಯಂನಲ್ಲಿ 37.8 ಡಿ.ಸೆ., ಕಣ್ಣೂರಿನಲ್ಲಿ 37.2 ಡಿ.ಸೆನಷ್ಟುತಾಪಮಾನ ದಾಖಲಾಗಿದೆ.

ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ನಗರಗಳ ಪೈಕಿ ಒಂದಾದ ಪಾಲಕ್ಕಾಡ್‌ನಲ್ಲಿ 2 ದಿನಗಳ ಹಿಂದೆ 37.1 ಡಿ.ಸೆ.ನಷ್ಟುಉಷ್ಣಾಂಶ ದಾಖಲಾಗಿರುವುದು ಸ್ಥಳೀಯರನ್ನು ಹೈರಾಣಾಗಿಸಿದೆ.

ಪರಿಸರ ಮಾಲಿನ್ಯದಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, ಫೆಬ್ರುವರಿ ತಿಂಗಳ ಮೊದಲ 2 ವಾರದಲ್ಲೇ ಉಷ್ಣಾಂಶ ಈ ಮಟ್ಟಿಗೆ ಏರಿಕೆ ಕಂಡಿದೆ.

ತಿರುನವಂತಪುರ, ಆಲಪ್ಪುಳ, ಕೊಟ್ಟಾಯಂ, ತಿಶ್ಶೂರು, ಕಲ್ಲಿಕೋಟೆ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಉಷ್ಣಾಂಶ ಹೆಚ್ಚಿನ ಮಟ್ಟದಲ್ಲೇ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.