Hijab Row: ಖಲಿಸ್ತಾನಿ ಹೋರಾಟಗಾರರ ಮೂಲಕ ಪಾಕಿಸ್ತಾನ ಐಎಸ್ಐ ಹಿಜಾಬ್ ವಿವಾದಕ್ಕೆ ಸಾಥ್?
ಭಯೋತ್ಪಾದಕ ಗುಂಪು ಎಸ್ಎಫ್ಜೆ ಮೂಲಕ ಐಎಸ್ಐ ನಡೆಸುತ್ತಿರುವ 'ಹಿಜಾಬ್ ರೆಫ್ರೆಂಡಮ್' ಮೇಲೆ ನಿಕಟ ನಿಗಾ ಇಡುವಂತೆ ಗುಪ್ತಚರ ಬ್ಯೂರೋ ಪೊಲೀಸ್ ಪಡೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಗಿದೆ
ನವದೆಹಲಿ (ಫೆ. 12): ಉಡುಪಿ ಪದವಿ ಪೂರ್ವ ಕಾಲೇಜಿನಲ್ಲಿ ಹೊತ್ತಿಕೊಂಡ ಹಿಜಾಬ್-ಕೇಸರಿ ಕಿಡಿ ಇದೀಗ ಉತ್ತರ ದಕ್ಷಿಣವೆನ್ನದೆ ರಾಜ್ಯವ್ಯಾಪಿ ವ್ಯಾಪಿಸಿಕೊಂಡಿದೆ. ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಭಾರೀ ಸದ್ದು ಮಾಡುತ್ತಿದೆ. ಈ ಗದ್ದಲದ ನಡುವೆ, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಘಟನೆ ಮೂಲಕ ಭಾರತದಲ್ಲಿ ವಿವಾದವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ಎಚ್ಚರಿಸಿವೆ.
ಭಯೋತ್ಪಾದಕ ಗುಂಪು ಎಸ್ಎಫ್ಜೆ ಮೂಲಕ ಐಎಸ್ಐ ನಡೆಸುತ್ತಿರುವ 'ಹಿಜಾಬ್ ರೆಫ್ರೆಂಡಮ್' ಮೇಲೆ ನಿಕಟ ನಿಗಾ ಇಡುವಂತೆ ಗುಪ್ತಚರ ಬ್ಯೂರೋ ಪೊಲೀಸ್ ಪಡೆಗಳು, ಕಾನೂನು ಜಾರಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿವೆ. "ಐಎಸ್ಐ ಭಾರತದಲ್ಲಿ ಹಿಜಾಬ್ ಜನಾಭಿಪ್ರಾಯ ಸಂಗ್ರಹಣೆಯ ಪರಿಕಲ್ಪನೆಯನ್ನು ಮುಂದಿಡುತ್ತಿದೆ" ಎಂದು ಇಂಟೆಲ್ ಟಿಪ್ಪಣಿಯನ್ನು ಉಲ್ಲೇಖಸಿ ಇಂಡಿಯಾ ಟುಡೆ ವರದಿ ಮಾಡಿದೆ.
ಇದನ್ನೂ ಓದಿ: Hijab Controversy: 'ಮುಸ್ಲಿಂರ ವಿರುದ್ಧ ಮೆರೆದಾಡಿದ್ರೆ ಮಟ್ಟ ಹಾಕ್ತೇವೆ': ರಘುಪತಿ ಭಟ್ಗೆ ಜೀವ ಬೆದರಿಕೆ
ಉರ್ದುಸ್ತಾನ್ ನಿರ್ಮಾಣ?: "ಹಿಜಾಬ್ ಜನಾಭಿಪ್ರಾಯ ಸಂಗ್ರಹಣೆಯನ್ನು ಆಯೋಜಿಸುವಲ್ಲಿ ಮತ್ತು ಉರ್ದುಸ್ತಾನ್ ಪರಿಕಲ್ಪನೆಯನ್ನು ಆಚರಿಸುವಲ್ಲಿ ಕೆಲವು ಭಾರತ-ವಿರೋಧಿ ಅಂಶಗಳು ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಾನ್ರ್ ಸಿಂಗ್ ಪನ್ನು ಅವರೊಂದಿಗೆ ಸೇರಬಹುದು" ಎಂದು ಇಂಟೆಲ್ ಇನ್ಪುಟ್ಗಳು ಎಚ್ಚರಿಸಿವೆ.
ರಾಜಸ್ಥಾನ, ದೆಹಲಿ, ಯುಪಿ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಪ್ರದೇಶಗಳಲ್ಲಿ 'ಉರ್ದುಸ್ತಾನ್' ಅನ್ನು ನಿರ್ಮಿಸಲು 'ಹಿಜಾಬ್ ರೆಫ್ರೆಂಡಮ್' ಆಂದೋಲನವನ್ನು ಪ್ರಾರಂಭಿಸಲು ಭಾರತದಲ್ಲಿನ ಮುಸ್ಲಿಮರಿಗೆ SFJ ಕರೆ ನೀಡಿದೆ ಎಂದು ಶುಕ್ರವಾರ ಬಿಡುಗಡೆ ಮಾಡಲಾದ ಇಂಟೆಲ್ ಟಿಪ್ಪಣಿ ಹೇಳಿದೆ.
ಆನ್ಲೈನ್ ನೋಂದಣಿ ಮೂಲಕ ಜನಾಭಿಪ್ರಾಯ: ವೀಡಿಯೊ ಸಂದೇಶದಲ್ಲಿ ಎಸ್ಎಫ್ಜೆ ಮುಖ್ಯಸ್ಥರು ಭಾರತೀಯ ಮುಸ್ಲಿಮರನ್ನು ಉದ್ದೇಶಿಸಿ ಅವರನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ. ಉರ್ದುಸ್ತಾನ್ ರಚಿಸಲು SFJ ಜನಾಭಿಪ್ರಾಯ ಸಂಗ್ರಹಣೆಯನ್ನು ಸಂಘಟಿಸುತ್ತದೆ ಮತ್ತು ಧನಸಹಾಯ ಮಾಡುತ್ತದೆ ಎಂದು SFJ ವಕೀಲರು ಭಾರತದ ಮುಸ್ಲಿಮರಿಗೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Hijab Controversy: ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಸಂಘಟನೆಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಸೋಮಣ್ಣ
ಹಿಜಾಬ್ ಜನಾಭಿಪ್ರಾಯ ಸಂಗ್ರಹಣೆಗಾಗಿ ಆನ್ಲೈನ್ ನೋಂದಣಿ ವೇದಿಕೆಯ ಕೆಲವು ಸ್ಕ್ರೀನ್ಶಾಟ್ಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ. ಗುರುಪತ್ವಂತ್ ಸಿಂಗ್ ಪನ್ನು ಅವರ ಭಾಷಣವನ್ನು ದೇಶದಲ್ಲಿ ಧಾರ್ಮಿಕ ಅಸಂಗತತೆಯನ್ನು ಹರಡುವ ಪ್ರಯತ್ನದಲ್ಲಿ ಬಳಸಲಾಗುತ್ತಿದೆ.
ವಸ್ತ್ರ ಸಂಘರ್ಷಕ್ಕೆ ಸದ್ಯ ಬ್ರೇಕ್: ಇನ್ನು ವಿವಾದಿತ ಹಿಜಾಬ್-ಕೇಸರಿ ವಸ್ತ್ರ ಪ್ರಕರಣದ ಬಗ್ಗೆ ತೀರ್ಪು ಪ್ರಕಟಿಸುವವರೆಗೂ ಹಿಜಾಬ್-ಕೇಸರಿ ವಸ್ತ್ರ ಸೇರಿದಂತೆ ಯಾವುದೇ ಧಾರ್ಮಿಕ ಉಡುಪು ಧರಿಸದೆ ಶಾಲಾ-ಕಾಲೇಜಿಗೆ ತೆರಳಬೇಕು. ಈ ವಿಚಾರದಲ್ಲಿ ಯಾರೂ ಒತ್ತಾಯ ಮಾಡುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡುವುದಾಗಿ ಹೈಕೋರ್ಟ್ನ ವಿಸ್ತೃತ ಪೀಠ ಗುರುವಾರ ವಿಚಾರಣೆ ವೇಳೆ ತಿಳಿಸಿದೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿಗೊಳಿಸಿ ಫೆ.5ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಸ್ತೃತ ಪೀಠ ಈ ಆದೇಶ ನೀಡಿದೆ.
ಕಟ್ಟೆಚ್ಚರಕ್ಕೆ ಸಿಎಂ ಕಟ್ಟಪ್ಪಣೆ: ಈ ಮಧ್ಯೆ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದಿಂದ ಬಂದ್ ಆಗಿದ್ದ ಪ್ರೌಢಶಾಲೆಗಳ ತರಗತಿಗಳು ಸೋಮವಾರದಿಂದ ಪುನಾರಂಭಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸೂಕ್ಷ್ಮ ಜಿಲ್ಲೆಗಳಲ್ಲಿನ ಪ್ರಮುಖ ಶಾಲೆಗಳಲ್ಲಿ ಪರಿಸ್ಥಿತಿ ಅವಲೋಕನ ಮತ್ತು ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಹೊಣೆಯನ್ನು ಸಂಬಂಧಪಟ್ಟಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಹಿಸಿದೆ.
ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ರಜೆ ನೀಡಲಾಗಿದ್ದ 9 ಮತ್ತು 10ನೇ ತರಗತಿಗಳು ಸೋಮವಾರದಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.