ಕೃಷಿ ಮಸೂದೆ ಮಂಡನೆ ಬಳಿಕ ಸದನದಲ್ಲಿ ಕೋಲಾಹಲ ಎದ್ದಿದೆ. ಇತ್ತ ಪ್ರತಿಪಕ್ಷದ  8 ಸಂಸದರನ್ನು ರಾಜ್ಯಸಭೆ ಅಧ್ಯಕ್ಷ ಅಮಾನತು ಮಾಡಿದ್ದರು. ಬಳಿಕ ಪ್ರತಿಭಟನೆ ಕಾವು ಹೆಚ್ಚಾಗಿದೆ. ಇದೀಗ ಅಮಾನತು ಹಿಂಪಡೆಯಬೇಕು ಸೇರಿದಂತೆ 3 ಪ್ರಮುಖ ಬೇಡಿಕೆಯನ್ನು ವಿರೋಧ ಪಕ್ಷ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಮುಂದಿಟ್ಟಿದ್ದಾರೆ. 

ನವದೆಹಲಿ(ಸೆ.22): ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಪಕ್ಷಗಳು ರಾಜ್ಯಸಭೆ ಕಲಾಪ ಬಹಿಷ್ಕರಿಸಲಿದೆ ಎಂದು ವಿರೋಧ ಪಕ್ಷ ನಾಯಕ, ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ. ಶೂನ್ಯ ವೇಳೆಯಲ್ಲಿ ಮಾತನಾಡಿದ ಗುಲಾಮ್ ನಬಿ ಆಜಾದ್, ರಾಜ್ಯ ಸಭೆ 3 ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

Add Asianetnews Kannada as a Preferred SourcegooglePreferred

ರಾಜ್ಯಸಭೆಯಲ್ಲಿ ಕೋಲಾಹಲ: 8 ಸದಸ್ಯರನ್ನು 1 ವಾರ ಅಮಾನತು ಮಾಡಿದ ವೆಂಕಯ್ಯ ನಾಯ್ಡು!

ಕೃಷಿ ಮಸೂದೆ ಕುರಿತು ಚರ್ಚೆಗೆ ಅವಕಾಶ ನೀಡಿಲ್ಲ. ಸರ್ಕಾರವು ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಗಿಂತ (ಎಂಎಸ್‌ಪಿ) ಕಡಿಮೆ ಬೆಲೆಯಲ್ಲಿ ಖಾಸಗಿ ವ್ಯಕ್ತಿಗಳು ಆಹಾರ ಧಾನ್ಯಗಳನ್ನು ಸಂಗ್ರಹಿಸುವುದಿಲ್ಲ ಎಂದು ಖಚಿತಪಡಿಸಿಬೇಕು. ಇಷ್ಟೇ ಅಲ್ಲ ಎಂಎಸ್ ಸ್ವಾಮಿನಾಥನ್ ಸಮಿತಿ ವರದಿಯ ಶಿಫಾರಸುಗಳ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆ ಇರಬೇಕು ಎಂದು ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.

ಮೂರನೇ ಬೇಡಿಕೆಯಾಗಿ 8 ಸಂಸದ ಅಮಾನತು ನಿರ್ಧಾರವನ್ನು ಹಿಂಪಡೆಯಬೇಕು ಎಂದು ನಬಿ ಆಗ್ರಹಿಸಿದ್ದಾರೆ. ಈ ಮೂರು ಬೇಡಿಕೆಗಳು ಈಡೇರುವವರೆಗೆ ಪ್ರತಿಪಕ್ಷಗಳು ರಾಜ್ಯಸಭೆ ಕಲಾಪ್ ಬಹಿಷ್ಕರಿಸಲಿದೆ ಎಂದು ಗುಲಾಮ್ ನಬಿ ಆಜಾದ್ ಹೇಳಿದ್ದಾರೆ. SP, NCP, DMK, TMC, AAP, RJD, TRS ಹಾಗೂ BSP ಪಕ್ಷಗಳು ರಾಜ್ಯಸಭೆ ಕಲಾಪ್ ಬಹಿಷ್ಕರಿಸಲಿದೆ ಎಂದು ಗುಲಾಮ್ ನಬಿ ಎಚ್ಚರಿಕೆ ನೀಡಿದ್ದಾರೆ. 

ಕೃಷಿ ಮಸೂದೆ ಮಂಡನೆ ವೇಳೆ ಪ್ರತಿಪಕ್ಷದ ಸಂಸದರು ಕಲಾಪಕ್ಕೆ ಅಡ್ಡಿ ಪಡಿಸಿದ್ದಾರೆ. ಇಷ್ಟೇ ಅಲ್ಲ, ಅಶಿಸ್ತು, ಅನುಚಿತ ವರ್ತನೆ, ಉಪಸಭಾಪತಿಯನ್ನು ನಡೆಸಿಕೊಂಡ ರೀತಿ ಹಾಗೂ ಕೋಲಾಹಲ ಸೃಷ್ಟಿಸಿದ 8 ಸಂಸದರನ್ನು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅಮಾನತು ಮಾಡಿದ್ದರು.