ವ್ಯಾಕ್ಸಿನ್ Vs ಪಾಲಿಟಿಕ್ಸ್: ರಾಜ್ಯಗಳಿಗೆ ಆರೋಗ್ಯ ಸಚಿವರ ಖಡಕ್ ಕ್ಲಾಸ್!
* ಲಸಿಕೆ ಅಬಿಯಾನ ವಿಚಾರ, ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವರ ಪಾಠ
* ಕೇಂದ್ರದ ತಪ್ಪಲ್ಲ, ರಾಜ್ಯಗಳ ಎಡವಟ್ಟು ಎಂದ ಮಾಂಡವೀಯ
* ಅವ್ಯವಸ್ಥೆಗೆ ಯಾರು ಕಾರಣ? ಎಂದು ಮಾತಿನಲ್ಲೇ ಏಟು ಕೊಟ್ಟ ಆರೋಗ್ಯ ಸಚಿವ
ನವದೆಹಲಿ(ಜು.14): ಲಸಿಕೆ ಅಭಿಯಾನ ವಿಚಾರವಾಗಿ ರಾಜಕೀಯ ಮುಂದುವರೆದಿದೆ. ಹೀಗಿರುವಾಗ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ರಾಜ್ಯಗಳ ಲಸಿಕೆ ಅಭಿಯಾನ ನಿರ್ವಹಣೆ ವಿಚಾರವಾಗಿ ಸವಾಲೆತ್ತಿದ್ದು, ಸರಿಯಾಗಿ ಕರ್ತವ್ಯ ನಿಭಾಯಿಸದ್ದಕ್ಕೆ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಂದಾದ ಬಳಿಕ ಮತ್ತೊಂದರಂತೆ ಸರಣಿ ಟ್ವೀಟ್ ಮಾಡಿರುವ ನೂತನ ಕೇಂದ್ರ ಆರೋಗ್ಯ ಸಚಿವ ರಾಜ್ಯಗಳ ವ್ಯವಸ್ಥೆಯನ್ನು ಟೀಕಿಸಿದ್ದಾರೆ.
ಅವ್ಯವಸ್ಥೆಗೆ ಯಾರು ಕಾರಣ?
ಕೇಂದ್ರವು ಈಗಾಗಲೇ ತನ್ನ ಪರವಾಗಿ ಅಗತ್ಯವಾದ ಮಾಹಿತಿಯನ್ನು ಮೊದಲೇ ನೀಡುತ್ತಿದೆ. ಹೀಗಿದ್ದರೂ ಅವ್ಯವಸ್ಥೆ ಹಾಗೂ ಲಸಿಕೆ ತೆಗೆದುಕೊಳ್ಳುವವರ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಲಸಿಕೆ ಕೇಂದ್ರಗಳೆದುರು ಉದ್ದುದ್ದ ಸಾಲುಗಳನ್ನು ನೋಡುತ್ತಿದ್ದರೆ, ಸಮಸ್ಯೆ ಏನು ಮತ್ತು ಅದಕ್ಕೆ ಕಾರಣ ಯಾರು ಎಂಬುದು ಬಹಳ ಸ್ಪಷ್ಟವಾಗಿದೆ ಎಂದಿದ್ದಾರೆ
ಮಾಧ್ಯಮಗಳಲ್ಲಿ ಭಯ ಹುಟ್ಟಿಸುವ ಹೇಳಿಕೆಗಳು
ಇನ್ನು ಮಾಧ್ಯಮಗಳ ಮೂಲಕ ತಪ್ಪು ಹೇಳಿಕೆ ನೀಡುವವರಿಗೂ ಪಾಠ ಹೇಳಿರುವ ಆರೋಗ್ಯ ಸಚಿವರು ಮಾಧ್ಯಮಗಳಲ್ಲಿ ಗೊಂದಲ ಮೂಡಿಸುವ ಮತ್ತು ಕಳವಳ ಉಂಟುಮಾಡುವ ಹೇಳಿಕೆಗಳನ್ನು ನೀಡುವ ನಾಯಕರು, ಆಡಳಿತ ಪ್ರಕ್ರಿಯೆ ಮತ್ತು ಇದಕ್ಕೆ ಸಂಬಂಧಿತ ಮಾಹಿತಿಯಿಂದ ತಮ್ಮನ್ನು ತಾವು ಅದೆಷ್ಟು ದೂರ ಇರಿಸಿದ್ದಾರೆಂದರೆ ಲಸಿಕೆ ಕೊರತೆ ಸಂದರ್ಭದಲ್ಲಿ ಮೊದಲೇ ನೀಡಲಾಗುವ ಮಾಹಿತಿ ಬಗ್ಗೆ ಅವರಿಗೆ ಅರಿವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯಗಳಿಗೆ ಖಡಕ್ ಕ್ಲಾಸ್
ಲಸಿಕೆ ಲಭ್ಯತೆಯ ಬಗ್ಗೆ ನನಗೆ ವಿವಿಧ ರಾಜ್ಯ ಸರ್ಕಾರಗಳು ಮತ್ತು ನಾಯಕರ ಹೇಳಿಕೆಗಳು ಮತ್ತು ಪತ್ರಗಳಿಂದ ನನಗೆ ಬಹಳಷ್ಟು ವಿಚಾರ ತಿಳಿದು ಬಂದಿದೆ. ಸತ್ಯಗಳ ನೈಜ ವಿಶ್ಲೇಷಣೆಯಿಂದ ಈ ಪರಿಸ್ಥಿತಿಯನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಜನರಲ್ಲಿ ಭೀತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಉಪಯೋಗಕ್ಕೆ ಬಾರದ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಮೂಲಕ ವ್ಯಾಕ್ಸಿನೇಷನ್ ಸಕ್ರಿಯಗೊಳಿಸಲು, ಜೂನ್ ತಿಂಗಳಲ್ಲಿ 11.46 ಕೋಟಿ ಲಸಿಕೆಗಳನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಭ್ಯವಾಗುವಂತೆ ಮಾಡಲಾಯಿತು ಮತ್ತು ಜುಲೈ ತಿಂಗಳಲ್ಲಿ ಈ ಲಭ್ಯತೆಯನ್ನು 13.50 ಕೋಟಿಗೆ ಹೆಚ್ಚಿಸಲಾಗಿದೆ ಎಂದಿದ್ದಾರೆ.
ಜುಲೈನಲ್ಲಿ ರಾಜ್ಯಗಳಿಗೆ ಎಷ್ಟು ಪ್ರಮಾಣದ ಲಸಿಕೆ ನೀಡಲಾಗುತ್ತದೆ ಎಂಬ ಬಗ್ಗೆ ಕೇಂದ್ರ ಸರ್ಕಾರವು 2021 ರ ಜೂನ್ 19 ರಂದು ರಾಜ್ಯಗಳಿಗೆ ತಿಳಿಸಿತ್ತು. ಇದಾದ ಬಳಿಕ ಜೂನ್ 27 ಮತ್ತು ಜುಲೈ 13 ರಂದು, ಕೇಂದ್ರದಿಂದ ಜುಲೈ ಮೊದಲ ಮತ್ತು ಎರಡನೆಯ ಹದಿನೈದು ದಿನಗಳಿಗೆ ಲಸಿಕೆಗಳ ಲಭ್ಯತೆಯ ಬಗ್ಗೆ ರಾಜ್ಯಗಳಿಗೆ ಕೇಂದ್ರ ಬ್ಯಾಚ್ ಪ್ರಕಾರ ಮಾಹಿತಿ ನೀಡಿತು. ಆದ್ದರಿಂದ ಯಾವಾಗ ಮತ್ತು ಯಾವ ಪ್ರಮಾಣದಲ್ಲಿ ಲಸಿಕೆ ಸಿಗುತ್ತದೆ ಎಂದು ರಾಜ್ಯಗಳಿಗೆ ಚೆನ್ನಾಗಿ ತಿಳಿದಿದೆ. ರಾಜ್ಯ ಸರ್ಕಾರಗಳು ಲಸಿಕೆ ಅಭಿಯಾನವನ್ನು ಜಿಲ್ಲಾ ಹಂತದವರೆಗೆ ಸರಿಯಾಗಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಲು ಹಾಗೂ ಜನರು ಯಾವುದೇ ಸಮಸ್ಯೆಯನ್ನು ಎದುರಿಸಬಾರದೆಂಬ ನಿಟ್ಟಿನಲ್ಲಿ ಕೇಂದ್ರ ಈ ಹೆಜ್ಜೆ ಇರಿಸಿತ್ತು ಎಂದಿದ್ದಾರೆ. '
ಟ್ವಿಟರ್ ಮೂಲಕ ಟೀಕಿಸಿದ್ದ ರಾಹುಲ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಸಿಕೆ ಲಭ್ಯತೆ ಬಗ್ಗೆ ದೀರ್ಘ ಸಮಯದಿಂದ ಪ್ರಶ್ನಿಸುತ್ತಿದ್ದಾರೆ. ಬುಧವಾರ ಈ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಮತ್ತೆ ಕೇಂದ್ರವನ್ನು ಟೀಕಿಸಿದ್ದರು.